ಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿದಿದ್ದು, ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯಡಿ ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ ಸೆರೆಸಿಕ್ಕಿದ್ದ 31 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಅವರ ತಾಯ್ನಾಡಿಗೆ ಗಡೀಪಾರು ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ರೈಲು ನಿಲ್ದಾಣದಿಂದ ಹೊರಟ ರೈಲಿನಲ್ಲಿ ಪ್ರತ್ಯೇಕ ಬೋಗಿ ಮೀಸಲಿರಿಸಿ, 31 ಜನರನ್ನು ಪಶ್ಚಿಮ ಬಂಗಾಳದ ಮಾಲ್ಡಾಗೆ ಕಳುಹಿಸಿಕೊಡಲಾಗಿದೆ.
ಕಟ್ಟುನಿಟ್ಟಿನ ಪೊಲೀಸ್ ಬೆಂಗಾವಲು:
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು 20 ಮಂದಿ ಸಶಸ್ತ್ರ ಪೊಲೀಸ್ ಸಿಬ್ಬಂದಿಯ ವಿಶೇಷ ತಂಡವು ಇವರೊಂದಿಗೆ ತೆರಳಿದೆ. ಮಂಗಳವಾರ ಸಂಜೆ 5 ಗಂಟೆಯ ಸುಮಾರಿಗೆ ತಂಡವು ಮಾಲ್ಡಾ ತಲುಪಲಿದ್ದು, ಅಲ್ಲಿ ನಿಯಮಾನುಸಾರ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಗಡಿ ಭದ್ರತಾ ಪಡೆ (BSF) ಮೂಲಕ ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲಾಗುವುದು ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
‘ಆಪರೇಷನ್ ಮುಕ್ತ’ ಮೂಲಕ ಬಲೆಗೆ ಬಿದ್ದಿದ್ದರು:
ವಿದೇಶಿಯರ ಅಕ್ರಮ ವಾಸ್ತವ್ಯಕ್ಕೆ ಕಡಿವಾಣ ಹಾಕಲು ಬೆಂಗಳೂರು ನಗರ ಪೊಲೀಸರು ಇತ್ತೀಚೆಗೆ ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ವಿಭಾಗಗಳಲ್ಲಿ ಬೃಹತ್ ಶೋಧ ಕಾರ್ಯ ಕೈಗೊಂಡಿದ್ದರು. ಒಟ್ಟು 2,944 ಶಂಕಿತರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ 105 ಮಂದಿ ಬಾಂಗ್ಲಾ ಪ್ರಜೆಗಳು ಪತ್ತೆಯಾಗಿದ್ದರು.
ಇದರಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ 23 ತಂಡಗಳು 1,909 ಜನರನ್ನು ತಪಾಸಣೆಗೊಳಪಡಿಸಿ 43 ಮಂದಿ ಅಕ್ರಮ ಬಾಂಗ್ಲಾದೇಶೀಯರನ್ನು ವಶಕ್ಕೆ ಪಡೆದಿದ್ದವು. ಬಳಿಕ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ವರದಿ ಸಲ್ಲಿಸಲಾಗಿತ್ತು. ಇದೀಗ ಎಫ್ಆರ್ಆರ್ಒ ಆದೇಶದ ಮೇರೆಗೆ ಮೊದಲ ಹಂತವಾಗಿ 31 ಜನರನ್ನು ಗಡೀಪಾರು ಮಾಡಲಾಗುತ್ತಿದೆ.