
5000 ವರ್ಷಗಳ ಹಿಂದೆ ಶ್ರೀ ಕೃಷ್ಣನ ಅವತಾರದ ಕಾಲದಲ್ಲಿ ನಂದ ಮಹಾರಾಜರ ನೇತೃತ್ವದಲ್ಲಿ ವ್ರಜವಾಸಿಗಳು ಇಂದ್ರಯಜ್ಞಕ್ಕೆ ಸಿದ್ಧರಾಗುತ್ತಿರುವುದನ್ನು ನೋಡಿದ ಶ್ರೀಕೃಷ್ಣನು ಇಂದ್ರನ ಪೂಜೆಯನ್ನು ಬಿಟ್ಟು ಗೋವರ್ಧನ ಗಿರಿಯನ್ನು ಪೂಜಿಸುವಂತೆ ಸೂಚಿಸಿದನು. ಇದನ್ನು ತಿಳಿದ ಇಂದ್ರನು ಕೋಪಗೊಂಡು ವ್ರಜಭೂಮಿಯ ಮೇಲೆ ಪ್ರಳಯಕಾಲದ ಸಂವರ್ತಕ ಮೋಡಗಳ ಮೂಲಕ ಧಾರಾಕಾರವಾದ ಮಳೆಯನ್ನು ಸುರಿಸಲಾರಂಭಿಸಿದನು. ಆಗ ಕೂಡಲೇ ಗೋವರ್ಧನ ಗಿರಿಯನ್ನು ಶ್ರೀ ಕೃಷ್ಣ ತನ್ನ ಎಡಗೈಯ ಕಿರುಬೆರಳಿನ ಮೇಲೆತ್ತಿಕೊಂಡು, ಬೆಟ್ಟದ ಕೆಳಗೆ ಎಲ್ಲಾ ವ್ರಜವಾಸಿಗಳಿಗೆ ಆಶ್ರಯವನ್ನು ನೀಡಿದನು.
ಆನಂತರ ಇಂದ್ರನು ತನ್ನ ಅಪರಾಧವನ್ನು ಅರಿತು ಶ್ರೀ ಕೃಷ್ಣನಲ್ಲಿ ಕ್ಷಮೆಯಾಚಿಸಿ ಪ್ರಾರ್ಥಿಸುತ್ತಾನೆ. ಹೀಗೆ ಶ್ರೀ ಕೃಷ್ಣನ ಭಕ್ತರು ಬೇರೆ ಯಾವುದೇ ದೇವತೆಗಳನ್ನು ಆರಾಧಿಸಬೇಕಾಗಿಲ್ಲ ಎಂದು ಶ್ರೀ ಕೃಷ್ಣ ಪರಮಾತ್ಮನು ತನ್ನ ಈ ಗೋವರ್ಧನ ಲೀಲೆಯ ಮೂಲಕ ತಿಳಿಸಿದನು.

ಗೋವರ್ಧನ ಪೂಜೆಯ ಪಾವನ ಪರ್ವದಂದು ಇಸ್ಕಾನ್ ಬೆಂಗಳೂರಿನಲ್ಲಿ ಭಕ್ತರು ಗೋವರ್ಧನ ಗಿರಿಯ ಪ್ರತಿರೂಪವೊಂದನ್ನು ನಿರ್ಮಿಸಿ ಅದರ ಸುತ್ತ ವಿವಿಧ ಖಾದ್ಯ ತಿನಿಸುಗಳನ್ನು ಜೋಡಿಸಿ ಭಗವಂತನಿಗೆ ಅರ್ಪಿಸಿದರು. ಆನಂತರ ಎಲ್ಲಾ ಭಕ್ತರಿಗೆ ಭಗವಂತನಿಗೆ ಅರ್ಪಿಸಿದ ವಿವಿಧ ಭೋಜ್ಯಗಳನ್ನುನೆರೆದಿರುವ ಭಕ್ತಾದಿಗಳಿಗೆ ವಿತರಿಸಲಾಯಿತು. ಗೋವುಗಳನ್ನು ಅಲಂಕರಿಸಿ, ಗೋವುಗಳ ರಕ್ಷಕ ಗೋಪಾಲನಿಗೆ ಆರತಿ ಮಾಡಲಾಯಿತು.
ಗೋವುಗಳನ್ನು ಮುಂದಿಟ್ಟುಕೊಂಡು ಭಕ್ತರು ಗೋವರ್ಧನ ಗಿರಿಗೆ ಪ್ರದಕ್ಷಿಣೆ ಮಾಡಿದರು. ಭಕ್ತರು ‘ಶ್ರೀ ಗೋವರ್ಧನಾಷ್ಟಕಂ’, 'ಯಶೋಮತಿ ನಂದನ’ದಂತಹ ವಿವಿಧ ಹಾಡುಗಳನ್ನು ಹಾಡುತ್ತಾ ಕೃಷ್ಣ ಬಲರಾಮನಿಗೆ ಭವ್ಯ ಆರತಿ ಮಾಡಲಾಯಿತು. ಹಾಗೆಯೇ ‘ದಾಮೋದರಷ್ಟಕ’ ಭಜನೆಯ ಜೊತೆಗೆ ದೀಪೋತ್ಸವ ಆಚರೆಣೆ ನಡಯಿತು. ಶಯನ ಪಲ್ಲಕ್ಕಿಯೊಂದಿಗೆ ಆಚರಣೆಯು ಪರಿಸಮಾಪ್ತಿಗೊಂಡಿತು.