ಜೈಲಿನಲ್ಲಿ ಡಿ ಗ್ಯಾಂಗ್ನಿಂದ ಹಲ್ಲೆ ಸಾಧ್ಯತೆ - ತುಮಕೂರು ಜೈಲಿಗೆ ನಾಲ್ವರು ಆರೋಪಿಗಳ ಸ್ಥಳಾಂತರಕ್ಕೆ ಕೋರ್ಟ್ ಆದೇಶ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ಮುಂದೆ ಶರಣಾಗತಿಯಾಗಿದ್ದ ನಾಲ್ವರು ಆರೋಪಿಗಳು ತುಮಕೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಿ ನಗರದ 24ನೇ ಎಸಿಎಂಎಂ ನ್ಯಾಯಾಲಯವು ಆದೇಶಿಸಿದೆ. ನ್ಯಾಯಾಲಯ ಆದೇಶ ಅನುಸಾರ ಆರೋಪಿಗಳಾದ ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿ ಹಾಗೂ ರವಿಶಂಕರ್ ಅವರನ್ನು ತುಮಕೂರು ಕಾರಾಗೃಹಕ್ಕೆ ಸ್ಥಳಾಂತರವಾಗಲಿದ್ದಾರೆ. ಇಂದು ರಾತ್ರಿ ಪರಪ್ಪನ ಅಗ್ರಹಾರ ಜೈಲಿನಿಂದ ಆರೋಪಿಗಳನ್ನು ತುಮಕೂರು ಕಾರಾಗೃಹಕ್ಕೆ ಕರೆದೊಯ್ಯಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತುಮಕೂರು ಜಿಲ್ಲಾ ಕಾರಾಗೃಹ ವರ್ಗಾವಣೆ ಸಂಬಂಧ ವಿಚಾರಣೆ ಕೈಗೊಂಡ ನ್ಯಾಯಾಲಯದ ಮುಂದೆ ಸರ್ಕಾರಿ ಪರ ಅಭಿಯೋಜಕ (ಎಸ್ ಪಿಪಿ) ಪ್ರಸನ್ನ ಕುಮಾರ್ ವಾದ ಮಂಡಿಸಿ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದ ನಾಲ್ವರನ್ನ ವಿಚಾರಣೆ ನಡೆಸಿದಾಗ ನಟ ದರ್ಶನ್ ಹಾಗೂ ಆತನ ಸಹಚರರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಈ ಮಾಹಿತಿ ಆಧರಿಸಿ ಉಳಿದ 13 ಮಂದಿಯನ್ನ ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಾಲ್ವರು ಆರೋಪಿಗಳಿಗೆ ವಿಚಾರಣಾಧೀನ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ತುಮಕೂರು ಕಾರಾಗೃಹಕ್ಕೆ ವರ್ಗಾಯಿಸಬೇಕೆಂದು ವಿವರಿಸಿದರು. ಆರೋಪಿಗಳ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪ್ರಸನ್ನ ಕುಮಾರ್ ಅವರ ವಾದವನ್ನ ಪುರಸ್ಕರಿಸಿ ಆರೋಪಿಗಳ ಸ್ಥಳಾಂತರಕ್ಕೆ ಆದೇಶಿಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.