LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಜೆಪಿ ಅವಧಿಯಲ್ಲಿ ಅಕ್ರಮ ನಿವೇಶನ ಹಂಚಿಕೊಂಡಿರುವ ಪಟ್ಟಿ ಶೀಘ್ರ ಬಿಡುಗಡೆ: ಡಿ.ಕೆ.ಶಿವಕುಮಾರ್

ಬೆಂಗಳೂರು: “ಬಿಜೆಪಿ ಕಾಲದಲ್ಲಿ ಅಕ್ರಮವಾಗಿ ಮುಡಾ ಸೈಟು ಹಂಚಿಕೆ ಮಾಡಲಾಗಿದ್ದು, ಈ ನಿವೇಶನಗಳನ್ನು ಬಿಜೆಪಿಯವರೇ ಹಂಚಿಕೆ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಆ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು “ಎರಡು ವರ್ಷಗಳ ಹಿಂದೆಯೇ ಬಿಜೆಪಿ ಆಡಳಿತಾವಧಿಯಲ್ಲಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಿಜೆಪಿಯವರು ಸದನ ಪ್ರಾರಂಭದ ದಿನವೇ ಈ ವಿಚಾರ ಪ್ರಸ್ತಾಪ ಮಾಡಬಹುದಿತ್ತಲ್ಲವೇ? ಅವರ ಹಗರಣಗಳು ಈಗ ಹೊರಗೆ ಬರುವ ಭಯದಿಂದ ಈಗ ಮಾತನಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.

“ನಿಗಮ ಮಂಡಳಿಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಚರ್ಚೆ ಮಾಡಲು ನಾವು ಅವಕಾಶ ಕಲ್ಪಿಸಿದ್ದೆವು. ಅವರು ತಮಗೆ ಏನೇನು ಬೇಕೋ ಅದನ್ನು ಹೇಳಿದರು. ಆದರೆ ಮುಖ್ಯಮಂತ್ರಿಗಳಿಂದ ಉತ್ತರ ಪಡೆಯಲು ಅವಕಾಶವನ್ನೇ ನೀಡಲಿಲ್ಲ. ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಬಿಜೆಪಿಯವರ ಕಾಲದ ನಿಗಮಗಳಲ್ಲಿನ ಅಕ್ರಮಗಳನ್ನು ಬಿಚ್ಚಿಟ್ಟರು. ಬಿಜೆಪಿಯವರು ತಮ್ಮ ಕಾಲದಲ್ಲಿ ಆಗಿದ್ದ ಹಗರಣಗಳನ್ನು ಬಚ್ಚಿಟ್ಟಿದ್ದರು. ಅವುಗಳು ಬಹಿರಂಗವಾಗಬಾರದು ಎಂದು ಮುಖ್ಯಮಂತ್ರಿಗಳ ಉತ್ತರಕ್ಕೆ ಅವಕಾಶ ನೀಡಲಿಲ್ಲ. ಈ ಅಕ್ರಮಗಳ ಬಗ್ಗೆ ನಮ್ಮ ಸರ್ಕಾರ ತನಿಖೆಗೆ ಆದೇಶ ನೀಡಿದೆ” ಎಂದು ತಿಳಿಸಿದರು.

“ವಾಲ್ಮೀಕಿ ನಿಗಮದಲ್ಲಿ ಅಧಿಕಾರಿಗಳು ಅಕ್ರಮ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು. ಉಪ್ಪು ತಿಂದವನು ನೀರು ಕುಡಿಯುತ್ತಾರೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಬಿಜೆಪಿಯವರು ಈಗ ಮೂಡಾ ನಿವೇಶನದ ಬಗ್ಗೆ ಗದ್ದಲ ಎಬ್ಬಿಸುತ್ತಿದ್ದಾರೆ. ನಾವು ಅವರ ಕಾಲದಲ್ಲಿ ಹೇಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ನಾವು ಹೊರಗೆ ತರುತ್ತಿದ್ದೇವೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದು, ವಿರೋಧ ಪಕ್ಷಗಳ ಬಳಿ ದಾಖಲೆ ಇದ್ದರೆ ಅದನ್ನು ತನಿಖಾಧಿಕಾರಿಗಳಿಗೆ ನೀಡಲಿ. ಆ ಜಮೀನು ಖರೀದಿ ಮಾಡಿದ್ದು, ಅದನ್ನು ದಾನಪತ್ರವಾಗಿ ನೀಡಿದ್ದು ನಿಜವಲ್ಲವೇ? ಅದನ್ನು ಅಕ್ರಮವಾಗಿ ಮೂಡಾದವರು ಬಳಸಿಕೊಂಡಿದ್ದಾರೆ. ಅದಕ್ಕೆ ಪರಿಹಾರ ನೀಡಿದ್ದಾರೆ. ಇದರಲ್ಲಿ ಅವ್ಯವಹಾರ ಏನಿದೆ? ಇಲ್ಲಿ ಅವ್ಯವಹಾರ ನಡೆದಿದ್ದರೆ ಅದು ಬಿಜೆಪಿಯವರ ಕಾಲದಲ್ಲಿ ಆಗಿದೆ” ಎಂದು ತಿರುಗೇಟು ನೀಡಿದರು.

“ಬಿಜೆಪಿ ಶಾಸಕರ, ಸಚಿವರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬೊಮ್ಮಾಯಿ ಅವರ ಹಗರಣಗಳು ಹೊರಗೆ ಬರಲಿವೆ. ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿ ಎಲ್ಲಾ ಹಗರಣಗಳ ಪಿತಾಮಹ. ಅವರ ಹಗರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಿವರವಾಗಿ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಅವರ ಹಗರಣಗಳು ಬಯಲಾಗುತ್ತವೆ ಎನ್ನುವ ಭಯದಿಂದ ಸದನದಲ್ಲಿ ಗದ್ದಲ ಎಬ್ಬಿಸಿ ನಮ್ಮನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಕಾಲದ ಎಲ್ಲಾ ಅಕ್ರಮಗಳನ್ನು ತೆಗೆಯುತ್ತಿದ್ದೇವೆ” ಎಂದರು.

“ವಾಲ್ಮೀಕಿ ಹಗರಣದಲ್ಲಿ ಅಕ್ರಮವಾಗಿ ವರ್ಗಾವಣೆಯಾಗಿರುವ 89 ಕೋಟಿ ಹಣದಲ್ಲಿ ನಮ್ಮ ತನಿಖಾಧಿಕಾರಿಗಳು ಸುಮಾರು 40 ಕೋಟಿಗೂ ಹೆಚ್ಚಿನ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮಧ್ಯೆ ಇಡಿ, ಸಿಬಿಐ ಕೂಡ ತನಿಖೆ ನಡೆಸಲು ಬಂದಿದ್ದು ಅವರನ್ನು ನಾವು ತಡೆದಿಲ್ಲ. ಅವರಿಗೂ ತನಿಖೆ ನಡೆಸುವ ಹಕ್ಕಿದೆ. ನಾವು ಯಾವುದೇ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಹೇಳಿದರು.

ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಲು ಬಿಜೆಪಿ ಮುಂದಾಗಿದೆ ಎಂದು ಕೇಳಿದಾಗ “ದೆಹಲಿಯ ವರೆಗೂ ಮಾಡಲಿ, ಆಮೇಲೆ ನಾವು ಪಟ್ಟಿ ಬಿಡುಗಡೆ ಮಾಡುತ್ತೇವೆ” ಎಂದು ಉತ್ತರಿಸಿದರು.

ಭೋವಿ ನಿಗಮ ಹಗರಣದ ಹಣ ಹಿಂಪಡೆಯಲಾಗಿಲ್ಲ ಎನ್ನುವ ಪ್ರಶ್ನೆಗೆ "ನನಗೆ ತನಿಖೆಯ ಸಂಪೂರ್ಣ ಮಾಹಿತಿ ತಿಳಿದಿಲ್ಲ. ಮಾಧ್ಯಮಗಳ ಮೂಲಕ ಮಾತ್ರ ವಿಚಾರ ತಿಳಿದುಕೊಂಡಿದ್ದೇನೆ. ಬಿಜೆಪಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ಸಮುದಾಯಕ್ಕೆ ಮೋಸ ಮಾಡಿದೆ. ಬಿಜೆಪಿಯ ಭ್ರಷ್ಟಾಚಾರ ಕಂಡು ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ” ಎಂದು ಹೇಳಿದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆಂಟ್ರಲ್‌ ಬ್ಯಾಂಕ್‌ನಿಂದ ಹುದ್ದೆಗಳಿಗೆ ಅರ್ಜಿ ಆಹ್ವಾನಗೃಹರಕ್ಷಕ ದಳದ ಸಿಬ್ಬಂದಿಯ ಬಂಧನ..!! ಕಾರಣ??ಅಯೋಧ್ಯೆಯಲ್ಲಿ 22 ವರ್ಷದ ಯುವತಿಯ ಅತ್ಯಾಚಾರ, ಕೊಲೆ- ಕಣ್ಣೀರಿಟ್ಟ ಸಂಸದಆಧಾರ ಕಾರ್ಡ್‌ ಮೂಲಕ ಕಡಿಮೆ ಬಡ್ಡಿ ದರದಲ್ಲಿ 2.5 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯಹಿಂದೂ ಧರ್ಮ ಎಂದರೆ ಯಾರನ್ನೂ ಬಲವಂತವಾಗಿ ಜೈ ಶ್ರೀ ರಾಮ್ ಎಂದು ಹೇಳುವಂತೆ ಒತ್ತಾಯಿಸುವುದಲ್ಲ: ತರೂರ್ಮಹಾ ಕುಂಭ ಮೇಳದಲ್ಲಿ 'ಅಮೃತ ಸ್ನಾನ' ಕ್ಕಾಗಿ 'ಆಪರೇಷನ್ ಇಲೆವೆನ್'ಸಂಗೀತ ಕಾರ್ಯಕ್ರಮದಲ್ಲೇ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲುನ್ಯಾಕ್ ಗ್ರೇಡ್ ಕೊಡಲು ಲಂಚ ಪಡೆದ ವಿವಿ ಪ್ರಾಧ್ಯಾಪಕಿ ಬಂಧನಕಾಲೇಜು ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿ ಶಿಶುವನ್ನು ಕಸದ ಬುಟ್ಟಿಯಲ್ಲಿ ಬಚ್ಚಿಟ್ಟು ಕ್ಲಾಸಿಗೆ ಹಾಜರ್!ವಸಂತ ಪಂಚಮಿಯ ಪವಿತ್ರ ದಿನ- ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ 3ನೇ ಅಮೃತಸ್ನಾನ