ಸಂತ್ರಸ್ತರಿಗೆ ಪರಿಹಾರ ಪಾವತಿಸಲು ತನಗೆ ಸೂಚಿಸಿದ ಅಧೀನ ನ್ಯಾಯಾಲಯ ಆದೇಶ ರದ್ದು ಕೋರಿ ಶ್ರೀರಾಮ ಜನರಲ್ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರ ನ್ಯಾಯಪೀಠ ಈ ಆದೇಶ ನೀಡಿದೆ ಅಪಘಾತ ಉಂಟು ಮಾಡಿರುವ ಸರಕು ಸಾಗಣೆ ವಾಹನಕ್ಕೆ ರಹದಾರಿ ಪರವಾನಿಗೆ ಮತ್ತು ಸದೃಢ ಪ್ರಮಾಣ ಪತ್ರವೇ ಚಾಲ್ತಿಯಲ್ಲಿ ಇರಲಿಲ್ಲ. ಈ ಪ್ರಮಾಣ ಪತ್ರ ನವೀಕರಣ ಮಾಡದಿರುವುದು ವಾಹನ ಮಾಲೀಕನ ತಪ್ಪು. ಇದರಿಂದ ಅವರೇ ಘಟನೆಯ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕಿದ್ದು, ಸರಕು ಸಾಗಣೆ ವಾಹನಕ್ಕೆ ವಿಮಾ ಪಾಲಿಸಿ ವಿತರಿಸಿದ್ದ ಶ್ರೀರಾಮ ಜನರಲ್ ವಿಮಾ ಕಂಪನಿಯು ಕೋರಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ಸದೃಢ ಪ್ರಮಾಣ ಪತ್ರ ಮತ್ತು ನೋಂದಣಿ, ರಹದಾರಿ ಪರವಾನಗಿ ನವೀಕರಣ ಮಾಡದೆ ವಾಹನವನ್ನು ಚಲಾಯಿಸಿದ್ದು ಮಾಲೀಕನ ತಪ್ಪು. ಆದರೆ, ಈ ಒಂದು ಕಾರಣಕ್ಕೆ ವಿಮಾ ಕಂಪನಿ ತನ್ನ ಹೊಣೆಗಾರಿಕೆಯಿಂದ ಬಚಾವಾಗಲು ಸಾಧ್ಯವಿಲ್ಲ. ಹೀಗಾಗಿ, ವಿಮಾ ಕಂಪೆನಿಯು ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ಪಾವತಿಸಬೇಕು. ಮುಂದಿನ ಎಂಟು ವಾರಗಳಲ್ಲಿ ಪರಿಹಾರ ಮೊತ್ತವನ್ನು ಸಂತ್ರಸ್ತರ ಖಾತೆಗೆ ಪಾವತಿ ಮಾಡಬೇಕು. ನಂತರ ಆ ಮೊತ್ತವನ್ನು ವಾಹನ ಮಾಲೀಕರಿಂದ ವಸೂಲಿ ಮಾಡಿಕೊಳ್ಳಬೇಕು ಆದೇಶಿಸಿದೆ. ಅಧೀನ ನ್ಯಾಯಾಲಯವು ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು 18 ಲಕ್ಷ ರು. ಹೆಚ್ಚಿಸಿ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ವಿವರ :
ಸೈಕಲ್ ಸವಾರ ನಂದೀಶಪ್ಪ ಎಂಬುವವರು 2013ರ ಜೂ. 17ರಂದು ಹೊಸ ಕೋಟೆ ಚಿಕ್ಕತಿರುಪತಿ ಮಾರ್ಗದಲ್ಲಿ ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿತ್ತು. ಇದರಿಂದ ತಲೆಗೆ ತೀವ್ರ ಗಾಯದಿಂದಾಗಿ ಸಾವಿಗೀಡಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ಕೋರ್ಟ್ ಮೃತನ ಕುಟುಂಬದವರಿಗೆ 13.88 ಲಕ್ಷ ರೂ. ಪರಿಹಾರ ನೀಡಲು ಸರಕು ಸಾಗಣೆ ವಾಹನಕ್ಕೆ ವಿಮಾ ಪಾಲಿಸಿ ವಿತರಿಸಿದ್ದ ಶ್ರೀರಾಮ ಜನರಲ್ ವಿಮಾ ಕಂಪನಿಗೆ ಸೂಚಿಸಿತ್ತು.