ವಾಕಿಂಗ್ ಹೋಗುತ್ತಿದ್ದ ಬಿಜೆಪಿ ನಾಯಕನನ್ನು ನಡು ರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ
ಮೊರಾದಾಬಾದ್: ಉತ್ತರ ಪ್ರದೇಶದ ಸಂಭಾಲ್ನ ಬಿಜೆಪಿ ನಾಯಕ ಅನುಜ್ ಚೌಧರಿ ಅವರನ್ನು ಮೊರಾದಾಬಾದ್ನಲ್ಲಿರುವ ಅವರ ನಿವಾಸದ ಹೊರಗೆ ಗುರುವಾರ ಸಂಜೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಸಂಭಾಲ್ನ ಬಿಜೆಪಿ ನಾಯಕ ಅನುಜ್ ಚೌಧರಿ ಅವರು ಗುರುವಾರ ಸಂಜೆ ತನ್ನ ಗೆಳೆಯನ ಜೊತೆ ತನ್ನ ಅಪಾರ್ಟ್ಮೆಂಟ್ನ ಹೊರಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಮೂವರು ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಚೌಧರಿ ಅವರನ್ನು ಕೂಡಲೇ ಮೊರಾದಾಬಾದ್ನಲ್ಲಿರುವ ಬ್ರೈಟ್ಸ್ಟಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳೀಯ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ಚೌಧರಿ ಅವರು ಸಂಭಾಲ್ನ ಅಸ್ಮೋಲಿ ಬ್ಲಾಕ್ನಿಂದ ಬ್ಲಾಕ್ ಮುಖ್ಯಸ್ಥರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ ಎನ್ನಲಾಗಿದೆ. ಚೌಧರಿ ಮೇಲೆ ದಾಳಿ ನಡೆಸುವ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಚೌಧರಿ ಕುಟುಂಬ ನೀಡಿದ ದೂರಿನ ಮೇಲೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.