ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ₹1 ಕೋಟಿಗೂ ಅಧಿಕ ಮೊತ್ತದ ಅನುದಾನ ದುರುಪಯೋಗ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮಸ್ಥ ಮಧು ತಾಳಗುಪ್ಪ ಆಗ್ರಹಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಮೇತ ಮಾತನಾಡಿದ ಅವರು, ಪಂಚಾಯಿತಿಯ ಹಿಂದಿನ ಅಧ್ಯಕ್ಷರು, ಪಿಡಿಒ ಮತ್ತು ಸದಸ್ಯರು ಶಾಮೀಲಾಗಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಮುಖ ಆರೋಪಗಳು ಹಾಗೂ ದಾಖಲೆ ವಿವರಗಳು:
-
ಗೋದ್ರೆಜ್ ಅಲ್ಮೇರಾ ಖರೀದಿ ಅಕ್ರಮ: 15ನೇ ಹಣಕಾಸು ಯೋಜನೆಯಡಿ 3 ಗೋದ್ರೆಜ್ ಕಪಾಟುಗಳಿಗೆ ₹1,09,000 ಪಾವತಿಸಲಾಗಿದೆ. ಆದರೆ, ಅದೇ ಸಂಸ್ಥೆಯಿಂದ ತಾವು ತಂದ ಕೊಟೇಶನ್ ಪ್ರಕಾರ 3 ಕಪಾಟುಗಳ ಮೌಲ್ಯ ₹66,000 (ಪ್ರತಿಗೆ ₹22,000). ಇದರಲ್ಲಿ ₹43,000 ಲೂಟಿ ಮಾಡಲಾಗಿದೆ.
-
ವೀಲ್ ಚೇರ್ ಖರೀದಿ ಹಗರಣ: ಎರಡು ವೀಲ್ ಚೇರ್ಗಳಿಗೆ ₹40,000 ಬಿಲ್ ಮಾಡಲಾಗಿದೆ. ಅದೇ ಅಂಗಡಿಯಲ್ಲಿ ಕೊಟೇಶನ್ ಪಡೆದಾಗ ಒಂದಕ್ಕೆ ₹9,000 (ಎರಡಕ್ಕೆ ₹18,000) ದರವಿದ್ದು, ₹22,000 ದುರುಪಯೋಗವಾಗಿದೆ.
-
ಶೋ ಗಿಡಗಳ ಬಿಲ್ ಗೋಲ್ಮಾಲ್: ಶಿವಮೊಗ್ಗದಿಂದ ತಂದ ಶೋ ಗಿಡ (ಮಾರುಕಟ್ಟೆ ಬೆಲೆ ₹220) ಹಾಗೂ ಕ್ರಿಸ್ಮಸ್ ಗಿಡಗಳಿಗೆ (ಮಾರುಕಟ್ಟೆ ಬೆಲೆ ₹300) ಪಂಚಾಯಿತಿಯಿಂದ ತಲಾ ₹1,500 ರಂತೆ ಒಟ್ಟು ₹34,000 ಬಿಲ್ ಮಾಡಿ, ಸುಮಾರು ₹24,000 ಲೂಟಿ ಮಾಡಲಾಗಿದೆ.
-
ಹಳೆಯ ಕಂಬಕ್ಕೆ ಲೈಟ್ ಹಾಕಿ ₹93,000 ಬಿಲ್: ಪಂಚಾಯಿತಿ ಮಧ್ಯಭಾಗದಲ್ಲಿರುವ ಹಳೆಯ ಕಂಬಕ್ಕೆ 6 ಫ್ಲಡ್ ಲೈಟ್ಗಳನ್ನು ಅಳವಡಿಸಿ ₹93,000 ಬಿಲ್ ಪಾವತಿಸಲಾಗಿದೆ. ಮಾರುಕಟ್ಟೆ ದರದ ಪ್ರಕಾರ ಇದರ ವೆಚ್ಚ ₹25,000 ರಿಂದ ₹30,000 ಮೀರದು. ಇದೇ ರೀತಿ ಹಲವು ಕಂಬಗಳಿಗೆ ₹96,000 ರಿಂದ ₹97,000 ಬಿಲ್ ಮಾಡಲಾಗಿದೆ.
-
ರಸ್ತೆ ಮತ್ತು ಚರಂಡಿ ಕಾಮಗಾರಿ ಅಕ್ರಮ: ಸೋಮಣ್ಣ ಅವರ ಮನೆಯಿಂದ ರಾಮಯ್ಯನವರ ಮನೆವರೆಗಿನ ಚರಂಡಿಗೆ 2024-25ರಲ್ಲಿ ₹2.27 ಲಕ್ಷ ವೆಚ್ಚ ತೋರಿಸಲಾಗಿದೆ. ಆದರೆ, ಇದೇ ರಸ್ತೆಯಲ್ಲಿ 2021-22ರಲ್ಲೇ ₹1.4 ಲಕ್ಷ ವೆಚ್ಚದಲ್ಲಿ ಕೆಲಸ ಮುಗಿದಿತ್ತು ಎಂದು ಆರೋಪಿಸಿದರು.
-
ಇತರ ಅವ್ಯವಹಾರಗಳು:
-
ಗ್ರಾಮ ಪಂಚಾಯಿತಿ ಆವರಣದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ತ್ಯಾಜ್ಯ ವಿಲೇವಾರಿ ಶೆಡ್ ಅನ್ನು ಕೆಡವಿ, ₹96,447 ವೆಚ್ಚದಲ್ಲಿ ಮರು ನಿರ್ಮಾಣ.
-
₹4.68 ಲಕ್ಷ ವೆಚ್ಚದ ತಡೆಗೋಡೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆರೋಪ.
-
ಯಾವುದೇ ಫೋಟೋ ದಾಖಲೆಗಳಿಲ್ಲದೆ ಸತ್ತ ಜಾನುವಾರು ವಿಲೇವಾರಿ ಹೆಸರಿನಲ್ಲಿ ₹5,000, ₹12,000 ನಕಲಿ ಬಿಲ್ ಸೃಷ್ಟಿ.
-
ಸ್ವಾತಂತ್ರ್ಯೋತ್ಸವ ಆಚರಣೆಗೆ ಹಿಂದೆ ₹15,000 ಖರ್ಚಾಗುತ್ತಿದ್ದುದನ್ನು ₹70,000 ಕ್ಕೆ ಏರಿಸಿ ಬಿಲ್ ಪಡೆದಿರುವುದು.
-
₹5,337 ಎಸ್ಆರ್ ದರವಿರುವ ಕಾಂಕ್ರೀಟ್ ಪೈಪ್ ಅಳವಡಿಕೆಗೆ ತಲಾ ₹9,000 ರಂತೆ ₹36,000 ಬಿಲ್ ಸೃಷ್ಟಿ.
-
9/11 ನೀಡುವಲ್ಲಿ ಸಾರ್ವಜನಿಕರಿಗೆ ಕಿರುಕುಳ:
ಗ್ರಾಮಠಾಣಾ ವ್ಯಾಪ್ತಿಯಲ್ಲಿ ಪೂರ್ವಜರ ಆಸ್ತಿಯ ಎಲ್ಲಾ ದಾಖಲೆಗಳು ಸರಿಯಿದ್ದರೂ ಸಾಮಾನ್ಯ ಜನರಿಗೆ 9/11 ನೀಡದೆ ಸತಾಯಿಸಲಾಗುತ್ತಿದೆ. ಆದರೆ, ಕೆಲವರಿಗೆ ಸಾಮಾನ್ಯ ಸಭೆಯಲ್ಲಿ ಕಾನೂನುಬಾಹಿರವಾಗಿ 9/11 ನಡವಳಿ ಪಾಸ್ ಮಾಡಲಾಗುತ್ತಿದ್ದು, ಇದರ ವಿರುದ್ಧ ತಾವು ಲೋಕಾಯುಕ್ತಕ್ಕೆ ದೂರು ನೀಡಿ ತಡೆ ಹಿಡಿದಿರುವುದಾಗಿ ಮಧು ತಾಳಗುಪ್ಪ ವಿವರಿಸಿದರು.
ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹ:
ಈ ಹಗರಣಗಳಲ್ಲಿ ಹಿಂದಿನ ಪಿಡಿಒ ಇಮ್ತಿಯಾಜ್ ಪಾಷಾ, ಮಾಜಿ ಅಧ್ಯಕ್ಷರಾದ ಪ್ರೇಮಾ ಭಾಸ್ಕರ್ ಶೆಟ್ಟಿ, ಲಕ್ಷ್ಮೀನಾರಾಯಣ ಬ್ಯಾಕೋಡು ಹಾಗೂ ಪಂಚಾಯಿತಿ ಸದಸ್ಯರು ಶಾಮೀಲಾಗಿದ್ದಾರೆ. ಈ ಎಲ್ಲಾ ಅವ್ಯವಹಾರಗಳ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಂದ ಹಣ ವಸೂಲಿ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಅಧ್ಯಕ್ಷರಾದಂತ ಗಣಪತಿ, ರಾಘು, ಸಂತೋಷ್ ಹಾಗೂ ಸೂರಜ್ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..