ನವದೆಹಲಿ: ರಾಜ್ಯಸಭಾ ಉಪನಾಯಕನ ಹುದ್ದೆಯಿಂದ ವಜಾಗೊಳಿಸಿದ್ದ ಆಮ್ ಆದ್ಮಿ ಪಕ್ಷಕ್ಕೆ ರಾಘವ್ ಚಡ್ಡಾ ಬಿಗ್ ಶಾಕ್ ನೀಡಿದ್ದಾರೆ. ರಾಘವ್ ಚಡ್ಡಾ ನೇತೃತ್ವದಲ್ಲಿ ಏಳು ರಾಜ್ಯಸಭಾ ಸಂಸದರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಾಜ್ಯಸಭೆಯಲ್ಲಿ ಆಪ್ ಹೊಂದಿದ್ದ 10 ಸಂಸದರ ಪೈಕಿ 7 ಮಂದಿ (2/3 ಕ್ಕಿಂತ ಹೆಚ್ಚು) ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸುವ ಮೂಲಕ ತಮ್ಮ ಸಂಸದ ಸ್ಥಾನಕ್ಕೂ ಸಂಚಕಾರ ಬರದಂತೆ ಚಾಣಾಕ್ಷ ತನ ಮೆರೆದಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಘವ್ ಚಡ್ಡಾ, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಲ್ಲಿ 2/3ರಷ್ಟು ಜನರು ಬಿಜೆಪಿಯೊಂದಿಗೆ ವಿಲೀನವಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಘವ್ ಚಡ್ಡಾ ಅವರೊಂದಿಗೆ ಹಿರಿಯ ನಾಯಕರಾದ ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಕ್ರಿಕೆಟಿಗ ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ರಾಜೇಂದರ್ ಗುಪ್ತಾ ಮತ್ತು ವಿಕ್ರಮಜಿತ್ ಸಿಂಗ್ ಸಾಕ್ಷಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.