
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸರ್ವಜ್ಞನಗರ ವಿಭಾಗದ ವಾರ್ಡ್ 29 ರ ಕಲ್ಯಾಣ ನಗರದಲ್ಲಿ ಇಂದು ರಸ್ತೆ ಬದಿ ನಾಗರಿಕರೊಬ್ಬರು ವಾಹನದಲ್ಲಿ ಬಂದು ಕಸ ಸುರಿಯುತ್ತಿರುವ ದೃಶ್ಯವನ್ನು ನೆರೆಹೊರೆಯ ನಾಗರಿಕರೊಬ್ಬರು ವಿಡಿಯೋ ಚಿತ್ರೀಕರಿಸಿ ನಗರ ಪಾಲಿಕೆಗೆ ಕಳುಹಿಸಿರುವುದನ್ನು ಗಮನಿಸಿದ ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ರವರು ವಾಹನದ ಮಾಹಿತಿಯನ್ನು ತಕ್ಷಣ ಪತ್ತೆ ಹಚ್ಚಿ ಸದರಿ ವಾಹನದ ಮಾಲೀಕರಿಗೆ ದಂಡ ವಿಧಿಸಿ, ಮತ್ತೊಮ್ಮೆ ಈ ಕಾರ್ಯ ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.
*ವಾಹನ ಮಾಲೀಕರಿಗೆ 5,000 ದಂಡ*
ಆಯುಕ್ತರವರ ಸೂಚನೆ ಮೇರೆಗೆ ಸರ್ವಜ್ಞ ನಗರ ವಿಭಾಗದ ಘನತ್ಯಾಜ್ಯ ನಿರ್ವಹಣೆ ತಂಡವು ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ವಾಹನ ಮಾಲೀಕರ ವಿಳಾಸವಾದ ನಂಬರ್ 45, 3ನೇ ಬಿ ಮುಖ್ಯ ರಸ್ತೆ, ನಾಲ್ಕನೇ ಕ್ರಾಸ್ ಕಲ್ಯಾಣ ನಗರ ಕ್ಕೆ ಭೇಟಿ ನೀಡಿ, ವಾಹನ ಮಾಲೀಕರನ್ನು ಪತ್ತೆ ಹಚ್ಚಿ, ರುಾ. 5,000 ದಂಡ ವಿಧಿಸಿ, ಮತ್ತೊಮ್ಮೆ ಈ ರೀತಿ ಕೃತ್ಯ ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುತ್ತಾರೆ.

ನಗರದ ಸೌಂದರ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಲು ನಾಗರಿಕರು ನಗರ ಪಾಲಿಕೆಯೊಂದಿಗೆ ಕೈಜೋಡಿಸಲು ನಗರ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.