ಹಾಸನ: ವರ್ಗಾವಣೆ ಪತ್ರಕ್ಕಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ಪರಿಣಾಮ ತಾಯಿ ಮತ್ತು ಮಗ ಮೃತಪಟ್ತಿರುವ ದಾರುಣ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಆಲೂರು ತಾಲೂಕಿನ ಹೊನ್ನಾವಳ್ಳಿ ಕೂಡಿಗೆ ಬಳಿ ಈ ಘಟನೆ ನಡೆದಿದೆ. ಪ್ರಿಯಾಂಕಾ (28) ಮತ್ತು ಪುತ್ರ ವಿನಿತ್ (7) ಮೃತ ದುರ್ದವಿಗಳು. ಆಲೂರು ತಾಲೂಕಿನ, ಕುದುರುವಳ್ಳಿ ಗ್ರಾಮದ ಪ್ರಿಯಾಂಕ ತನ್ನ ಮಗನನ್ನು ಹಾಸನದ ಶಾಲೆಗೆ ಸೇರಿಸಲು ವರ್ಗಾವಣೆ ಪತ್ರ ತರಲು ಆಟೋದಲ್ಲಿ ಪ್ರಯಾಣಿಸುತ್ತಿದ್ದರು.
ಸ್ವಗ್ರಾಮದಿಂದ ಆಟೋದಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಆಟೋ ಪಲ್ಟಿಯಾಗಿದೆ. ಅಪಘಾತದಲ್ಲಿ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಚಾಲಕ ಅಬ್ಬಾಸ್ (52) ಹಾಗೂ ಸಾಗರ್ (13) ಎಂಬ ಬಾಲಕ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.