ಬೆಂಗಳೂರು: ಗ್ಯಾಸ್ ದರ ಏರಿಕೆ, ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಹೋಟೆಲ್ ಗಳಲ್ಲಿ ತಿಂಡಿ, ಊಟದ ದರ ಹೆಚ್ಚಿಸಲು ರಾಜ್ಯ ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ.
ಕಾರ್ಮಿಕರ ಕನಿಷ್ಠ ವೇತನವನ್ನು ಒಮ್ಮೆಲೇ ಶೇಕಡ 60 ರಷ್ಟು ಏರಿಸಿದರೆ ಹೋಟೆಲ್ ಗಳಲ್ಲಿ ಊಟ ತಿಂಡಿ ದರ ಒಂದೂವರೆಯಿಂದ ಎರಡು ಪಟ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಸಾಮಾನ್ಯ ಹೋಟೆಲ್ ಗಳಲ್ಲಿ ಒಂದು ಪ್ಲೇಟ್ ಇಡ್ಲಿ ದರ 40 ರಿಂದ 45 ರೂ. ಇದ್ದು, ಅದು 90 ರೂ.ಗೆ ಏರಿಕೆಯಾಗಲಿದೆ. 150 ರೂಪಾಯಿ ಇರುವ ಊಟದ ದರ 250 ರಿಂದ 350 ರೂಪಾಯಿಗೆ ಏರಿಕೆ ಮಾಡುವುದು ಅನಿವಾರ್ಯ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಹೋಟೆಲ್ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಈಗ ಕಾರ್ಮಿಕ ಇಲಾಖೆ ಕಾರ್ಮಿಕರ ಕನಿಷ್ಠ ವೇತನವನ್ನು 60% ರಷ್ಟು ಹೆಚ್ಚಳ ಮಾಡಿರುವುದರಿಂದ ಹೋಟೆಲ್ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಕಾರ್ಮಿಕರಿಗೆ ಪರಿಷ್ಕೃತ ವೇತನ ಜಾರಿಯಾದರೆ 23,000 ರೂ. ವೇತನ ಕೊಡಬೇಕು. ಇದರೊಂದಿಗೆ ಅವರಿಗೆ ಪಿಎಫ್, ಊಟ, ತಿಂಡಿ, ವಸತಿ ವ್ಯವಸ್ಥೆ ಸೇರಿ ಸುಮಾರು 30 ರಿಂದ 35 ಸಾವಿರ ರೂಪಾಯಿವರೆಗೆ ವೆಚ್ಚವಾಗುತ್ತದೆ. ಪ್ರತಿ ಹೋಟೆಲ್ ನಲ್ಲಿ ಐದರಿಂದ ಆರು ಕಾರ್ಮಿಕರು ಇರುತ್ತಾರೆ. ಇಷ್ಟು ವೇತನ ನೀಡಿದರೆ ಹೋಟೆಲ್ ಕಟ್ಟಡದ ಬಾಡಿಗೆ, ನೀರು, ವಿದ್ಯುತ್, ತೆರಿಗೆ ಪಾವತಿ ಮೊದಲಾದವುಗಳನ್ನು ಭರಿಸುವುದು ಕಷ್ಟವಾಗುತ್ತದೆ. ಸರ್ಕಾರ ಅವೈಜ್ಞಾನಿಕವಾಗಿ ಕನಿಷ್ಠ ವೇತನ ಹೆಚ್ಚಳ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪರಿಷ್ಕೃತ ಕಾರ್ಮಿಕರ ಕನಿಷ್ಠ ವೇತನ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಒಂದು ಪ್ಲೇಟ್ ಇಡ್ಲಿ ಬೆಲೆ 80 ರಿಂದ 90 ರೂಪಾಯಿ, ಮಸಾಲೆ ದೋಸೆ 150 ರೂಪಾಯಿ, ಸಸ್ಯಹಾರಿ ಊಟದ ಬೆಲೆ ರೂ.250 ರಿಂದ 300 ರೂ., ಬಿರಿಯಾನಿ ಬೆಲೆ 500 ರೂಪಾಯಿಗೆ ಏರಿಕೆಯಾಗಬಹುದು ಎಂದು ರಾಜ್ಯ ಹೋಟೆಲ್ ಗಳ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಎಚ್ಚರಿಸಿದ್ದಾರೆ.