ಬಗರ್ಹುಕುಂ ಸಾಗುವಳಿದಾರರು ಅರ್ಜಿ ಮರು ಪರಿಶೀಲಿಸಿ: ಕುಮಾರ್ ಸಮತಳ
ಚಿತ್ರದುರ್ಗ : ಕಾನೂನು ತೊಡಕುಗಳನ್ನು ಮುಂದಿಟ್ಟುಕೊಂಡು ಬಗರ್ಹುಕುಂ ಸಾಗುವಳಿದಾರರು ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಿವುದನ್ನು ಮರು ಪರಿಶೀಲಿಸಿ ಹಕ್ಕುಪತ್ರತಗಳನ್ನು ನೀಡುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 25 ಲಕ್ಷ ಅರ್ಜಿಗಳು ಬಾಕಿಯಿದ್ದು, ಸಾಮಾಜಿಕ ಭದ್ರತೆ, ಬಡವರ ರಕ್ಷಣೆಗಾಗಿ ಕಾನೂನು ಬದಲಾವಣೆ ಮಾಡಿ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ಕೊಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಬಡವರು, ದಲಿತರು, ಹಿಂದುಳಿದವರ ಭವಿಷ್ಯದ ಪ್ರಶ್ನೆಯಾಗಿರುವುದರಿಂದ ಫೆ.10 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದರು.
ಅರಣ್ಯ ಭೂಮಿಗಳನ್ನು ಸಾಗುವಳಿ ಮಾಡುತ್ತಿರುವವರು ಸಲ್ಲಿಸಿರುವ ಅರ್ಜಿಗಳನ್ನು ಅರಣ್ಯ ಹಕ್ಕು ಕಾಯಿದೆಯಡಿ ಪರಿಶೀಲಿಸಿ ಹಕ್ಕುಪತ್ರಗಳನ್ನು ನೀಡಬೇಕು. ಅಲ್ಲಿಯತನಕ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದೆಂದು ಕುಮಾರ್ ಸಮತಳ ಆಗ್ರಹಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡ ಸತ್ಯಪ್ಪ ಮಲ್ಲಾಪುರ ಮಾತನಾಡಿ ಸಾಗುವಳಿ ಹಕ್ಕುಪತ್ರಕ್ಕಾಗಿ ಜಿಲ್ಲೆಯಿಂದ 52 ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಅನಾದಿ ಕಾಲದಿಂದಲೂ ಜೀವನೋಪಾಯಕ್ಕಾಗಿ ಬಗರ್ಹುಕುಂ ಭೂಮಿಗಳನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಲು ಭೂಮಿ ಇಲ್ಲ ಎನ್ನುತ್ತಿರುವ ಸರ್ಕಾರ ಕಂಪನಿಗಳಿಗೆ ಭೂಮಿ ನೀಡಲು ತುದಿಗಾಲಲ್ಲಿ ನಿಂತಿದೆ. ಸ್ಥಳೀಯವಾಗಿ ಶಾಸಕರು ಧ್ವನಿ ಎತ್ತುತ್ತಿಲ್ಲ. ಬಗರ್ಹುಕುಂ ಸಮಿತಿ ಸಭೆಗಳು ನಡೆದಿಲ್ಲ. ಬಾಕಿಯಿರುವ ಅರ್ಜಿಗಳನ್ನು ಪರಿಗಣಿಸಿ ತುರ್ತಾಗಿ ಸಾಗುವಳಿ ಚೀಟಿಗಳನ್ನು ನೀಡಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದೆಂದರು.
ಹೆಚ್.ವೆಂಕಟೇಶ್, ಹನುಮಂತಪ್ಪ, ರಾಮಚಂದ್ರಪ್ಪ, ಹನುಮಂತಪ್ಪ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.