ಬೆಂಗಳೂರು: ಉದ್ಯೋಗಿಗೆ ಸಿಗಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಿರುವ ಬಾಕಿ ಅಥವಾ ಬಡ್ಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡುವ ಮೂಲಕ ಸಾರಿಗೆ ನಿಗಮದ ಮನವಿಯನ್ನು ವಜಾಗೊಳಿಸಿದೆ.
1972ರ ಗ್ರಾಚ್ಯುಟಿ ಪಾವತಿ ಕಾಯ್ದೆಯ ಸೆಕ್ಷನ್ 4(6)ರ ಮಾನದಂಡಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ, ಸಂಸ್ಥೆಗೆ ನೌಕರನಿಂದ ನೇರವಾಗಿ ತೀವ್ರ ಆರ್ಥಿಕ ನಷ್ಟ ಸಂಭವಿಸಿದ್ದರೆ ಅಥವಾ ಆತ ಸಮಾಜಘಾತುಕ ಕೃತ್ಯಗಳ ಹಿನ್ನೆಲೆಯಲ್ಲಿ ವಜಾಗೊಂಡಿದ್ದರೆ ಮಾತ್ರ ನಿಯಮಾನುಸಾರ ಗ್ರಾಚ್ಯುಟಿ ಹಣ ತಡೆಹಿಡಿಯಲು ಅವಕಾಶವಿದೆ. ಉಳಿದಂತೆ ಸಂಸ್ಥೆಗೆ ನೌಕರನಿಂದ ಬರಬೇಕಾದ ಯಾವುದೇ ಬಾಕಿ ಹಣವಿದ್ದರೂ ಅದನ್ನು ಕಾನೂನುಬದ್ಧವಾದ ಇತರ ಮಾರ್ಗಗಳಿಂದ ಇಲ್ಲವೇ ಆತನಿಗೆ ಬರಬೇಕಾದ ಇತರ ಸೌಲಭ್ಯಗಳಿಂದ ವಸೂಲಿ ಮಾಡಬಹುದೇ ವಿನಾ, ಗ್ರಾಚ್ಯುಟಿ ಹಣದಲ್ಲಿ ಕಡಿತಗೊಳಿಸಲು ಕಾನೂನಿನಲ್ಲಿ ಜಾಗವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಈ ಹಿಂದೆ ಗ್ರಾಚ್ಯುಟಿ ನಿಯಂತ್ರಣ ಪ್ರಾಧಿಕಾರವು ಶೇಕಡಾ 10ರಷ್ಟು ಬಡ್ಡಿಯೊಂದಿಗೆ ಮೊತ್ತವನ್ನು ಮರುಪಾವತಿಸುವಂತೆ ಕೆಎಸ್ಆರ್ಟಿಸಿಗೆ ನಿರ್ದೇಶನ ನೀಡಿತ್ತು. ಇದನ್ನು ವಿರೋಧಿಸಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತಾದರೂ, ನ್ಯಾಯಪೀಠವು ಪ್ರಾಧಿಕಾರದ ಆದೇಶವನ್ನು ಎತ್ತಿಹಿಡಿದು ಅರ್ಜಿಯನ್ನು ತಳ್ಳಿಹಾಕಿದೆ.