ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳ ಚರ-ಸ್ಥಿರಾಸ್ತಿಗಳು, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಪುರಾತನ ಬೆಲೆಬಾಳುವ ವಸ್ತುಗಳ ಸಮಗ್ರ ವಿವರಗಳನ್ನು ಡಿಜಿಟಲೀಕರಣಗೊಳಿಸಿ ಅಧಿಕೃತ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಕುರಿತು ವಿವರವಾದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.
ಅರ್ಚಕನ ಅಮಾನತು ಪ್ರಶ್ನಿಸಿದ್ದ ಅರ್ಜಿ ವಜಾ
ಬೆಂಗಳೂರಿನ ಬಾಳೆಪೇಟೆಯ ಐತಿಹಾಸಿಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಬೆಳ್ಳಿ ವಸ್ತುಗಳ ಕಳ್ಳತನ ಆರೋಪದ ಹಿನ್ನೆಲೆಯಲ್ಲಿ ತಮ್ಮನ್ನು ಸಹಾಯಕ ಅರ್ಚಕ ಹುದ್ದೆಯಿಂದ ಅಮಾನತುಗೊಳಿಸಿದ್ದ ಆಡಳಿತ ಮಂಡಳಿಯ ಕ್ರಮವನ್ನು ಪ್ರಶ್ನಿಸಿ ವಿನೀತ್ ಎಸ್. ಎಂಬುವವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಕಳುವಾಗಿದೆ ಎನ್ನಲಾದ ವಸ್ತುಗಳು ತಮ್ಮ ಸುಪರ್ದಿಯಲ್ಲಿ ಇರಲಿಲ್ಲ ಮತ್ತು ಆಡಳಿತ ಮಂಡಳಿಯು ತಾರತಮ್ಯದಿಂದ ಈ ಕ್ರಮ ಕೈಗೊಂಡಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಆದರೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯಡಿ ಇಲಾಖಾ ತನಿಖೆ ಇನ್ನೂ ಬಾಕಿ ಇರುವುದರಿಂದ ಹಾಗೂ ಸತ್ಯಾಸತ್ಯತೆ ಪರಿಶೀಲನೆ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಸೂಕ್ತವಲ್ಲವೆಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಅರ್ಜಿದಾರರು ತಮ್ಮ ವಾದವನ್ನು ವಿಚಾರಣಾಧಿಕಾರಿಯ ಮುಂದೆ ಮಂಡಿಸಲು ಅವಕಾಶ ನೀಡಿ ಅರ್ಜಿಯನ್ನು ವಜಾಗೊಳಿಸಿತು.
ದೇವಾಲಯಗಳ ಸಂಪತ್ತು ರಕ್ಷಣೆಗೆ ಕಟ್ಟುನಿಟ್ಟಿನ ನಿರ್ದೇಶನ
ಅರ್ಜಿಯನ್ನು ವಜಾಗೊಳಿಸಿದರೂ, ರಾಜ್ಯಾದ್ಯಂತ ಇರುವ ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳ ಸ್ವತ್ತುಗಳ ರಕ್ಷಣೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ದೇವಾಲಯಗಳ ಸಂಪತ್ತಿನ ಡಿಜಿಟಲೀಕರಣ ಹಾಗೂ ಧಾರ್ಮಿಕ ದತ್ತಿ ಆಯುಕ್ತರ ಅಧಿಕೃತ ವೆಬ್ಸೈಟ್ನಲ್ಲಿ ಅವುಗಳ ಪ್ರಕಟಣೆಗೆ ಸಂಬಂಧಿಸಿದಂತೆ ಸಮಗ್ರ ಹಾಗೂ ನವೀಕೃತ ವಸ್ತುಸ್ಥಿತಿ ವರದಿಯನ್ನು (Status Report) ಮುಂದಿನ ವಿಚಾರಣಾ ದಿನಾಂಕದೊಳಗೆ ಸಲ್ಲಿಸುವಂತೆ ಹೆಚ್ಚುವರಿ ಸರ್ಕಾರಿ ವಕೀಲರಿಗೆ ತಾಕೀತು ಮಾಡಿದೆ.
ವರದಿಯಲ್ಲಿ ಒಳಗೊಳ್ಳಬೇಕಾದ ಪ್ರಮುಖ ಅಂಶಗಳು
ಸರ್ಕಾರ ಸಲ್ಲಿಸಬೇಕಾದ ವರದಿಯಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕುವಾರು ದೇವಾಲಯಗಳ ಆಸ್ತಿಗಳ ಸಂಪೂರ್ಣ ಪಟ್ಟಿ ಇರಬೇಕು. ಪ್ರತಿಯೊಂದು ದೇವಾಲಯದಲ್ಲಿರುವ ಚಿನ್ನಾಭರಣಗಳು, ನಾಣ್ಯಗಳು, ವಿಗ್ರಹಗಳು, ಪವಿತ್ರ ಸಾಮಗ್ರಿಗಳ ಮಾರುಕಟ್ಟೆ ಮೌಲ್ಯ, ನಿಖರ ತೂಕ ಹಾಗೂ ಸಾಧ್ಯವಾದಲ್ಲಿ ಹೈ-ರೆಸಲ್ಯೂಶನ್ ಛಾಯಾಚಿತ್ರ ಮತ್ತು ವಿಡಿಯೋ ದಾಖಲೆಗಳನ್ನು ಒಳಗೊಂಡಿರಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಇದರೊಂದಿಗೆ, ಈ ವಸ್ತುಗಳು ದೇಣಿಗೆ, ಉಡುಗೊರೆ ಅಥವಾ ಸರ್ಕಾರಿ ಅನುದಾನದ ಮೂಲಕ ಬಂದಿದ್ದೇ ಎಂಬ ಮೂಲ ವಿವರ, ಅವುಗಳ ವಿಮಾ ರಕ್ಷಣೆ, ಬ್ಯಾಂಕ್ ಲಾಕರ್ಗಳು ಅಥವಾ ಸ್ಟ್ರಾಂಗ್ ರೂಮ್ಗಳಲ್ಲಿ ಇರಿಸಲಾಗಿರುವ ಭದ್ರತಾ ವ್ಯವಸ್ಥೆ ಹಾಗೂ ಕೊನೆಯದಾಗಿ ಭೌತಿಕ ತಪಾಸಣೆ ನಡೆಸಿದ ದಿನಾಂಕದ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಸೂಚಿಸಲಾಗಿದೆ.
ಕಳ್ಳತನ ಹಾಗೂ ಕಾನೂನು ಹೋರಾಟದ ಮಾಹಿತಿ ಸಲ್ಲಿಕೆಗೆ ತಾಕೀತು
ದೇವಾಲಯಗಳಲ್ಲಿ ಈವರೆಗೆ ನಡೆದಿರುವ ಕಳ್ಳತನ, ವಸ್ತುಗಳ ದುರ್ಬಳಕೆ ಅಥವಾ ನಾಪತ್ತೆಯಾಗಿರುವ ಪ್ರಕರಣಗಳ ವಿವರ, ದಾಖಲಾಗಿರುವ ಎಫ್ಐಆರ್ಗಳು, ತಪ್ಪಿತಸ್ಥ ಅಧಿಕಾರಿ-ನೌಕರರ ವಿರುದ್ಧ ತೆಗೆದುಕೊಂಡ ಶಿಸ್ತುಕ್ರಮಗಳ ಸಮಗ್ರ ಮಾಹಿತಿಯನ್ನು ಸರ್ಕಾರ ಒದಗಿಸಬೇಕಿದೆ. ಜೊತೆಗೆ, ನ್ಯಾಯಾಲಯಗಳಲ್ಲಿ ಬಾಕಿ ಇರುವ ವ್ಯಾಜ್ಯಗಳು, ಅಕ್ರಮ ಪರಭಾರೆ, ಆಸ್ತಿ ಒತ್ತುವರಿ ಪ್ರಕರಣಗಳ ಪ್ರಸ್ತುತ ಸ್ಥಿತಿ ಹಾಗೂ ಇದುವರೆಗೆ ವಶಪಡಿಸಿಕೊಳ್ಳಲಾದ ವಸ್ತುಗಳ ಮರುದಾಖಲಾತಿ ಕುರಿತು ಸಂಪೂರ್ಣ ವರದಿ ನೀಡುವಂತೆ ಆದೇಶಿಸಿರುವ ಹೈಕೋರ್ಟ್, ಈ ಪ್ರಕ್ರಿಯೆಯ ಪರಿಶೀಲನೆಗಾಗಿ ಪ್ರಕರಣದ ವಿಚಾರಣೆಯನ್ನು ಮುಂಬರುವ ದಿನಗಳಿಗೆ ಮುಂದೂಡಿದೆ.