ಬೆಂಗಳೂರು: ಈ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಮುಂದುವರೆದರೆ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ಇಲ್ಲವಾದರೆ ಸಿದ್ದರಾಮಯ್ಯ ಅವರ ನಂತ್ರ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಇದು ನಾನಲ್ಲ, ಇಡೀ ರಾಜ್ಯವೇ ಹೇಳುತ್ತಿರುವ ಮಾತು ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ, ಬೇರೆ ಮಾತುಗಳು, ಬೇರೆಯವರ ಹೇಳಿಕೆಗಳೆಲ್ಲ ಟೈಂ ಪಾಸ್ ಗೆ ಸಿದ್ದರಾಮಯ್ಯನವರ ಗುಂಪಿನ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಟೆನ್ಶನ್ ಕ್ರುಯೇಟ್ ಮಾಡಲು ಹೇಳುತ್ತಿರುವುದು ಅಷ್ಟೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಡಿ.ಕೆ.ಶಿವಕುಮಾರ್ ಅವರ ಪರವಾಗಿಯೇ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.
ಖರ್ಗೆಯಾಗಲಿ, ಪರಮೇಶ್ವರ್ ಆಗಲಿ ಅಥವಾ ಬೇರೆಯಾರೂ ಸಿಎಂ ಆಗಲ್ಲ, ಸಿದ್ದರಾಮಯ್ಯ ಬಿಟ್ಟರೆ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಇದರಲ್ಲಿ ಎರಡನೇ ಮಾತಿಲ್ಲ. ಸಿದ್ದರಾಮಯ್ಯ ಮುಂದುವರೆಯುವುದು ಬೇಡ ಎಂದರೆ ಡಿ.ಕೆ.ಶಿವಕುಮಾರ್ ಅವರೇ ರಾಜ್ಯದ ಸಿಎಂ ಆಗುವುದು ಖಚಿತ ಎಂದು ತಿಳಿಸಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟುಗಳನ್ನು ದಾಟಿ ಅಧಿಕಾರಕ್ಕೆ ಏರುವುದು ಗ್ಯಾರಂಟಿ. ಈ ಬಗ್ಗೆ ನಾನು ಬ್ಲ್ಯಾಂಕ್ ಪೇಪರ್ ನಲ್ಲಿ ಬರೆದು ಕೊಡುತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.