ಹಾಸನ: ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಹೈಕಮಾಂಡ್ ಬುಲಾವ್ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಗೆ ಸಚಿವರು, ಶಾಸಕರು ದೆಹಲಿಗೆ ತೆರಳಿದ್ದು, ಇದೇ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಅಧಿಕಾರ ಹಂಚಿಕೆ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ಕೋಮಾದಲ್ಲಿದೆ. ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ಸಿಎಂ ಆಗಿ ಯಾರು ಇರ್ತಾರೋ, ಯಾರು ಹೋಗ್ತಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ. ಯಾವುದೇ ನಿರ್ಧಾರಗಳನ್ನು ತೆಗೆಫ಼ುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದರು.. ರಾಜ್ಯದಲ್ಲಿ ಒಂದೆಡೆ ರೈತರು, ಜನರು ಸಂಕಷ್ಟಕ್ಕೆ ಸಿಲುಕಿ ತತ್ತರಿಸುತ್ತಿದ್ದಾರೆ. ಆದರೆ ಸಚಿವರು, ಶಾಸಕರು ಜಾಲಿ ಮಾಡುವುದಕ್ಕೆ ದೆಹಲಿಗೆ ಹೋಗಿದ್ದಾರೆ ಎಂದರು.
ಹೈಕಮಾಂಡ್ ನವರು ಸಿಎಂ ಸಿದ್ದರಾಮಯ್ಯರನ್ನಷ್ಟೇ ಕರೆದರೆ ಸಿದ್ದರಾಮಯ್ಯ ಯಾಕೆ ಸಚಿವರನ್ನು ಕರೆದುಕೊಂಡು ಹೋಗಿದ್ದಾರೆ? ಮಂತ್ರಿಗಳು, ಶಾಸಕರು ಎಲ್ಲರೂ ದೆಹಲಿಗೆ ಹೋಗಿದ್ದಾರೆ. ಯಾಕಾದರೂ ಕಾಂಗ್ರೆಸ್ ಗೆ ಮತ ಹಾಕಿದೆವು ಅಂತಿದ್ದಾರೆ ಜನರು. ಜನರ ಪಾಲಿಕೆ ಇದು ಸತ್ತ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.