ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯ ಹಣ ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕೆಂಬ ಆಶಯದಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಎಲ್ಲಾ ಫಲಾನುಭವಿಗಳ ಬಯೋಮೆಟ್ರಿಕ್ ಹಾಗೂ ಮುಖಚಹರೆ (Face Recognition) ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (ಇಡಿಸಿಎಸ್) ನಿರ್ದೇಶನಾಲಯವು ವಿಶೇಷ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದರ ಮೂಲಕವೇ ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆ ನಡೆಯಲಿದೆ.
ಮನೆ-ಮನೆ ಸಮೀಕ್ಷೆಗೆ ಚಾಲನೆ: ಸೇವಾ ಕೇಂದ್ರಗಳ ಮೂಲಕ ಪರಿಶೀಲನೆ ಈ ಬೃಹತ್ ಪರಿಶೀಲನಾ ಅಭಿಯಾನವು ಮನೆ-ಮನೆ ಸಮೀಕ್ಷೆಯ ಜೊತೆಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಅನುಷ್ಠಾನಗೊಳ್ಳಲಿದೆ. ಸರ್ಕಾರ ಹೊರಡಿಸಿರುವ ನಿರ್ದಿಷ್ಟ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ (SOP) ಅನ್ವಯವೇ ಕಟ್ಟುನಿಟ್ಟಾಗಿ ಈ ಪರಿಶೀಲನೆ ನಡೆಸಲು ಆದೇಶಿಸಲಾಗಿದೆ. ಇದರಿಂದಾಗಿ ಅನರ್ಹರನ್ನು ಯೋಜನೆಯಿಂದ ಹೊರಗಿಟ್ಟು, ಅರ್ಹರಿಗೆ ಯೋಜನೆಯ ಸೌಲಭ್ಯ ಸಿಗುವಂತೆ ಮಾಡಲು ಸರ್ಕಾರ ಪಕ್ಕಾ ಪ್ಲಾನ್ ಮಾಡಿದೆ.
ಒಂದು ತಿಂಗಳ ಕಡು ಗಡುವು: ಸಿಬ್ಬಂದಿಗೆ ಮಾಸ್ಟರ್ ತರಬೇತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಪ್ರಕ್ರಿಯೆಗೆ ಮಾದರಿ ನಮೂನೆಗಳನ್ನು (Forms) ಸಿದ್ಧಪಡಿಸಿದ್ದು, ಮಾಸ್ಟರ್ ತರಬೇತುದಾರರ ಮೂಲಕ ಕ್ಷೇತ್ರ ಗಣತಿದಾರರಿಗೆ ವಿಶೇಷ ತರಬೇತಿ ನೀಡಲಿದೆ. ಈ ತಿಂಗಳ 30ರಿಂದ ಆರಂಭಗೊಂಡು ಒಂದು ತಿಂಗಳ ಕಾಲಮಿತಿಯಲ್ಲಿ ಕ್ಷೇತ್ರ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗಿದೆ. ಜಿಲ್ಲಾ ಮತ್ತು ತಾಲೂಕು ಗ್ಯಾರಂಟಿ ಸಮಿತಿಗಳು ಹಾಗೂ ಸ್ಥಳೀಯ ಮಟ್ಟದ ಸಮಿತಿಗಳು ಈ ಪ್ರಕ್ರಿಯೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಜ್ಜಾಗಿರಲು ಸೂಚಿಸಲಾಗಿದೆ.
ಕ್ಷೇತ್ರ ಮಟ್ಟದ ಅಧಿಕಾರಿಗಳ ನೇಮಕ: ಜಿಲ್ಲಾಧಿಕಾರಿಗಳಿಂದ ಆದೇಶ ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಲು ಸ್ಪಷ್ಟ ಸಿಬ್ಬಂದಿ ಪಡೆ ರಚಿಸಲಾಗಿದೆ. ನಗರ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್ಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಯನ್ನು ಗಣತಿದಾರರನ್ನಾಗಿ ನೇಮಿಸಲಾಗುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳು ವಾರ್ಡ್ ಹಾಗೂ ಗ್ರಾಮವಾರು ಸ್ಪಷ್ಟ ನಿಯೋಜನೆಯೊಂದಿಗೆ ಗಣತಿದಾರರಿಗೆ ಲಿಖಿತ ಆದೇಶ ನೀಡಲಿದ್ದಾರೆ.
ಮನೆ ಬಾಗಿಲಿಗೆ ಆ್ಯಪ್, ಜಿಪಿಎಸ್ ಮ್ಯಾಪಿಂಗ್ ಮತ್ತು ಸ್ಥಳದಲ್ಲೇ ದೃಢೀಕರಣ ಗ್ಯಾರಂಟಿ ಸಮಿತಿ ಸದಸ್ಯರು ಮತ್ತು ಗಣತಿದಾರರು ಕಡ್ಡಾಯವಾಗಿ ಪ್ರತಿಯೊಬ್ಬ ಫಲಾನುಭವಿಯ ಮನೆಗೆ ಭೇಟಿ ನೀಡಿ ಅರ್ಜಿ ನಮೂನೆಗಳನ್ನು ವಿತರಿಸಬೇಕಿದೆ. ಯಾವುದೇ ಕಾರಣಕ್ಕೂ ಮನೆ ಭೇಟಿಯನ್ನು ತಪ್ಪಿಸುವಂತಿಲ್ಲ. ಸ್ಥಳದಲ್ಲಿಯೇ ಮೊಬೈಲ್ ಆ್ಯಪ್ ಬಳಸಿ ಫಲಾನುಭವಿಯ ಭಾವಚಿತ್ರ, ಮನೆಯ ಫೋಟೊ ಹಾಗೂ ಜಿಪಿಎಸ್ ಮ್ಯಾಪಿಂಗ್ ಮಾಡಲಾಗುತ್ತದೆ. ಇದರೊಂದಿಗೆ ಮುಖ ದೃಢೀಕರಣ ಮತ್ತು ಮತದಾರರ ಗುರುತಿನ ಚೀಟಿಯ ವಿವರಗಳನ್ನು ಸ್ಥಳದಲ್ಲೇ ಮೊಬೈಲ್ ಆ್ಯಪ್ನಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.
ಫಲಾನುಭವಿಯ ಯಾವೆಲ್ಲಾ ದಾಖಲೆ ನೀಡಬೇಕು?
* ಗಣತಿದಾರರಿಂದ ಪಡೆದು ಭರ್ತಿ ಮಾಡಿದ ಅರ್ಜಿ ನಮೂನೆ.
* ಇತ್ತೀಚಿನ ಫೋಟೋ ಮತ್ತು ಆಧಾರ್ ಪ್ರತಿ.
* ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್.
* ಹಣ ಜಮೆಯಾಗುವ ಬ್ಯಾಂಕ್ ಖಾತೆ ವಿವರ.
* ಮತದಾರರ ಗುರುತಿನ ಚೀಟಿ.
* ಮೊಬೈಲ್ ನಂಬರ್.
* ಫಲಾನುಭವಿಗಳು ಮೃತಪಟ್ಟಿದ್ದರೆ, ವಲಸೆ ಹೋಗಿದ್ದರೆ, ಸ್ಥಳಾಂತರಗೊಂಡಿದ್ದರೆ ಗಣತಿದಾರರಿಗೆ ವಿವರ ನೀಡಬೇಕು.
* ವಾಸಿಸುತ್ತಿರುವ ಮನೆ ಮ್ಯಾಪಿಂಗ್, ಬಯೋಮೆಟ್ರಿಕ್ (ಗಣತಿದಾರರು ಸ್ಥಳದಲ್ಲಿಯೇ ಮೊಬೈಲ್ ಆಪ್ ಮೂಲಕ ಪಡೆಯಲಿದ್ದಾರೆ.)
ಸದ್ಯ ಗೃಹಲಕ್ಷ್ಮಿ ಯೋಜನೆಯ ಪರಿಶೀಲನೆಯು ಗೃಹಜ್ಯೋತಿ ಮಾದರಿಯಲ್ಲಿಯೇ ನಡೆಯುತ್ತದೆ. ಎಸ್ಕಾಂ (ವಿದ್ಯುತ್ ಕಂಪನಿ) ಸಿಬ್ಬಂದಿ ಮನೆಗೆ ಹುಡುಕೊಂಡು ಬಂದು ಅರ್ಜಿ ನಮೂನೆ ನೀಡಿ ಭರ್ತಿ ಮಾಡಿಸಿಕೊಂಡು ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಆಪ್ ಮೂಲಕ ಅಪ್ಡೇಟ್ ಮಾಡಿದರು. ಅಂತೆಯೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ಗ್ಯಾರಂಟಿ ಸಮಿತಿ ಸದಸ್ಯರು ಅಥವಾ ಸರ್ಕಾರದ ವಿವಿಧ ಇಲಾಖೆ ಸಿಬ್ಬಂದಿ ತಮ್ಮ ವ್ಯಾಪ್ತಿಯ ಫಲಾನುಭವಿಗಳ ಮನೆಗಳಿಗೆ ಬಂದು ಮಾಹಿತಿ ಪಡೆಯಲಿದ್ದಾರೆ. ಮುಂದಿನ ಹಂತದಲ್ಲಿ ಮನೆ ಭೇಟಿ ತಪ್ಪಿದರೆ, ಸ್ಥಳೀಯ ನ್ಯಾಯಬೆಲೆ ಅಂಗಡಿ, ಗ್ರಾಮ್ ಒನ್, ಬೆಂಗಳೂರು ಒನ್ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.