ಮಂಡ್ಯ: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನಿಗೆ ರಾಜಾತಿಥ್ಯ ನೀಡಿದ ಹಾಗೂ ಜೈಲಿನ ಕೊಠಡಿಗಳಿಗೆ ಹಣ ನಿಗದಿಪಡಿಸಿದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಕಾರಾಗೃಹ ಅಧೀಕ್ಷಕಿ ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಭೂ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಡಿಎಲ್ಆರ್ (ADLR) ಅಧಿಕಾರಿ ಮಹಮದ್ ಹುಸೇನ್ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದನು. ಯಾವುದೇ ಗಂಭೀರ ಕಾಯಿಲೆ ಇಲ್ಲದಿದ್ದರೂ ಬೆನ್ನು ನೋವಿನ ನೆಪವೊಡ್ಡಿ ಆತನನ್ನು ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿದ್ದ ವೇಳೆ ಹುಸೇನ್ ತನ್ನ ಗೆಳತಿಯೊಂದಿಗೆ ರಾಜಾರೋಷವಾಗಿ ಕಾಲ ಕಳೆಯುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು.
ನ್ಯಾಯಾಧೀಶರ ಭೇಟಿ ವೇಳೆ ಬಂಡವಾಳ ಬಯಲು:
ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡದೆ ಕೈದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ್ ಅವರು ಮಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ ಈ ಕರ್ಮಕಾಂಡ ಬಯಲಾಗಿತ್ತು. ವಿಚಾರಣೆ ನಡೆಸದೆ ಕೈದಿಗೆ ಆಸ್ಪತ್ರೆಯಲ್ಲಿ ಸೌಲಭ್ಯ ಕಲ್ಪಿಸಿದ್ದಕ್ಕಾಗಿ ನ್ಯಾಯಾಧೀಶರು ಸ್ಥಳದಲ್ಲೇ ಅಧೀಕ್ಷಕಿ ಶಾಂತಮ್ಮ ಅವರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಕೊಠಡಿಗಳಿಗೆ ರೇಟ್ ಫಿಕ್ಸ್ ಆರೋಪ & ಕ್ರಮ:
ಈ ಘಟನೆಯ ಬೆನ್ನಲ್ಲೇ ಜೈಲಿನೊಳಗಿನ ಸೆಲ್ಗಳಿಗೆ (ಕೊಠಡಿ) ದರ ನಿಗದಿಪಡಿಸಿ ಅಕ್ರಮ ಎಸಗುತ್ತಿರುವ ಬಗ್ಗೆಯೂ ಮಾಧ್ಯಮಗಳಲ್ಲಿ ವಿಸ್ತೃತ ವರದಿಗಳು ಪ್ರಸಾರವಾಗಿದ್ದವು. ಮಾಧ್ಯಮಗಳ ವರದಿ ಹಾಗೂ ಪ್ರಾಥಮಿಕ ತನಿಖೆಯನ್ನು ಆಧರಿಸಿ ಇಲಾಖೆ ತಕ್ಷಣ ಎಚ್ಚೆತ್ತುಕೊಂಡಿದ್ದು, ಶಾಂತಮ್ಮ ಅವರನ್ನು ಮಂಡ್ಯದಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಎತ್ತಂಗಡಿ ಮಾಡಿದೆ.
ವರದಿ: ಗಿರೀಶ್ ರಾಜ್, ಮಂಡ್ಯ