ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಮತ್ತಷ್ಟು ಚುರುಕುಗೊಳಿಸಿದೆ. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಕೆಪಿಎಸ್ಸಿ ಸದಸ್ಯೆ ಶಾಂತ ಹೊಸಮನಿ ಅವರ ವಿರುದ್ಧ ಸಿಐಡಿ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ.
ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಬೆನ್ನಲ್ಲೇ ಶಾಂತ ಹೊಸಮನಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದ್ದು, ಅವರ ಮೊಬೈಲ್ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಈಗಾಗಲೇ ಇಡಿ ಹಾಗೂ ಸಿಐಡಿ ನೀಡಿದ್ದ ಎರಡು ನೋಟಿಸ್ಗಳಿಗೂ ಅವರು ಉತ್ತರಿಸಿಲ್ಲ. ಬಂಧನದ ಭೀತಿಯಿಂದ ಅವರು ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗೆ ಮೂರನೇ ಬಾರಿ ನೋಟಿಸ್ ಜಾರಿ ಮಾಡಲು ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಆರೋಪ ತಳ್ಳಿಹಾಕಿದ ಶಿವಶಂಕರಪ್ಪ ಸಾಹುಕಾರ್
ಇದೇ ಪ್ರಕರಣದಲ್ಲಿ ವಿಚಾರಣೆ ಎದುರಿಸಿರುವ ಶಿವಶಂಕರಪ್ಪ ಸಾಹುಕಾರ್ ಅವರು ಅಕ್ರಮದ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ತಮ್ಮ ಪುತ್ರಿಯ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಕೆಯಲ್ಲಿ ತಾಂತ್ರಿಕ ದೋಷಗಳು ಉಂಟಾಗಿರಬಹುದೇ ಹೊರತು, ಯಾವುದೇ ಅಕ್ರಮ ನಡೆಸಿಲ್ಲ ಎಂದು ಸಿಐಡಿ ಮುಂದೆ ಸಮರ್ಥಿಸಿಕೊಂಡಿದ್ದಾರೆ. ಪರೀಕ್ಷೆಯ ಸಮಗ್ರ ಉಸ್ತುವಾರಿ ಪರೀಕ್ಷಾ ನಿಯಂತ್ರಕರ ಅಧೀನದಲ್ಲೇ ಇರುತ್ತದೆ; ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಹೇಳಿರುವ ಅವರು, ಈ ಹಿಂದೆ ಹಲವು ಕಾರಣಗಳಿಂದ ನೊಂದಿರುವುದಾಗಿ ವಿಚಾರಣೆ ವೇಳೆ ಭಾವುಕರಾಗಿ ಅಳಲು ತೋಡಿಕೊಂಡಿದ್ದಾರೆ.
ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರೊಂದಿಗೆ ಕೇವಲ ಅಧಿಕೃತ ಆಡಳಿತಾತ್ಮಕ ಕೆಲಸಗಳಿಗಷ್ಟೇ ಸಂವಾದವಿತ್ತು, ಯಾವುದೇ ಪರೀಕ್ಷೆ ಅಥವಾ ಹಣಕಾಸಿನ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಮತ್ತೋರ್ವ ಆರೋಪಿ ಬಸವರಾಜ್ ಕನ್ನಾಳೆ ಅವರನ್ನು ತಾನು ಎಂದಿಗೂ ಮುಖಾಮುಖಿ ಭೇಟಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಕಸ್ಟಡಿಯಲ್ಲಿ ಆರೋಪಿಗಳ ವಿಚಾರಣೆ, ಸ್ಥಳ ಮಹಜರು
ಪ್ರಕರಣದ ತನಿಖೆಯ ಭಾಗವಾಗಿ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ ಪೊಲೀಸರು ಕಸ್ಟಡಿಯಲ್ಲಿಟ್ಟುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಯಾಲಯ ವಿಧಿಸಿರುವ ಕಸ್ಟಡಿ ಅವಧಿ ಸೆಪ್ಟೆಂಬರ್ 9ಕ್ಕೆ ಕೊನೆಗೊಳ್ಳಲಿದ್ದು, ಬಳಿಕ ಇಬ್ಬರನ್ನೂ ನಗರದ 1ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಈಗಾಗಲೇ ಕೆಪಿಎಸ್ಸಿ ಮುಖ್ಯ ಕಚೇರಿ, ಸಂಜಯನಗರ ಹಾಗೂ ರಾಜಾಜಿನಗರದ ಪ್ರಮುಖ ನಿವಾಸಗಳಲ್ಲಿ ತನಿಖಾ ತಂಡ ಮಹಜರು ಪ್ರಕ್ರಿಯೆ ಮುಗಿಸಿದೆ. ಬಂಧಿತರನ್ನು ಮುಖಾಮುಖಿ ಕೂರಿಸಿ ಪಾಟಿ ಸವಾಲು ನಡೆಸಲಾಗುತ್ತಿದ್ದು, ಮಧ್ಯವರ್ತಿಗಳು, ಆಯೋಗದ ಸಿಬ್ಬಂದಿ ಮತ್ತು ಅಭ್ಯರ್ಥಿಗಳನ್ನು ಪ್ರತಿದಿನ ವಿಚಾರಣೆಗೆ ಒಳಪಡಿಸಿ ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗುತ್ತಿದೆ.