ಬ್ರಿಟಿಷ್ ಅಧಿಕಾರಿಗಳಲ್ಲೂ ಮಾನವೀಯತೆ ಇತ್ತು: ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬ್ರಿಟಿಷ್ ಸಾಮ್ರಾಜ್ಯದ ವಿಸ್ತಾರಕ್ಕೆ ನೈಸರ್ಗಿಕ ಸಂಪತ್ತು ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದ ಡಾ. ಫ್ರಾನ್ಸಿಸ್ಬುಕಾನನ್, ಆರ್.ಎಸ್.ಡಾಬ್ಸ್ಹಾಗೂ ಮೆಕೆಂಜಿ ಅವರಂತಹ ಕಂಪನಿ ಸರ್ಕಾರದ ಅಧಿಕಾರಿಗಳ ಪೈಕಿ ಕೆಲವರು ಮಾನವೀಯ ಗುಣಗಳನ್ನು ಹೊಂದಿದ್ದ ಸಜ್ಜನರಾಗಿದ್ದರು ಎಂದು ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಸಿವಿಜಿ ಪಬ್ಲಿಕೇಶನ್ಸ್, ಕರ್ನಾಟಕ ಇತಿಹಾಸ ಅಕಾದೆಮಿ, ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ರಾಮಚಂದ್ರ ಪ್ರಕಾಶನ ಹಿರಿಯೂರು ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಪ್ರೊ. ಎಂ.ಜಿ. ರಂಗಸ್ವಾಮಿ ಅವರು ಅನುವಾದಿಸಿರುವ ‘ಬೆಂಗಳೂರು ಸೀಮೆಯಲ್ಲಿ ಬುಕಾನನ್’ ಹಾಗೂ ‘ಡಾಬ್ಸ್ಆಡಳಿತದ ನೋಟಗಳು’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಸಾಹತುಶಾಹಿ ಆಡಳಿತ ಮತ್ತು ಲಾಭ-ನಷ್ಟದ ಲೆಕ್ಕಾಚಾರ
ಬಿಳಿಯರು ಆಫ್ರಿಕನ್ನರು, ಪೌರ್ವಾತ್ಯರು ಹಾಗೂ ದಕ್ಷಿಣಪೂರ್ವ ದೇಶಗಳ ಜನರನ್ನು ನಾಗರಿಕರನ್ನಾಗಿ ಮಾಡುವುದು ತಮ್ಮ ಹೊಣೆಗಾರಿಕೆ ಎಂಬ ಭಾವನೆ ಹೊಂದಿದ್ದರು.
ವಸಾಹತು ಕಾಲದಲ್ಲಿ ರಸ್ತೆ, ಸೇತುವೆ, ರೈಲು ಸಂಪರ್ಕ ಮತ್ತು ಶಿಕ್ಷಣದಿಂದ ನಮಗೆ ಶೇ. 20ರಷ್ಟು ಲಾಭವಾಗಿದ್ದರೆ, ಬ್ರಿಟಿಷರಿಗೆ ದೇಶದ ಸಂಪತ್ತನ್ನು ಬಂದರುಗಳಿಗೆ ಸಾಗಿಸಲು ಶೇ. 80ರಷ್ಟು ಅನುಕೂಲವಾಯಿತು.
ಡಾಬ್ಸ್ಕೃತಿಯಲ್ಲಿ ಕಾಡುಪ್ರಾಣಿಗಳ ಹತೋಟಿ, ರಸ್ತೆ ನಿರ್ಮಾಣ ಮತ್ತು ಶಿಕ್ಷಣ ನೀಡಲು ಕೈಗೊಂಡ ಪ್ರಯತ್ನಗಳ ವಿವರಗಳಿವೆ.
ಬುಕಾನನ್ವರದಿ: ಇತಿಹಾಸದ ಮಾಹಿತಿಯ ಗಣಿ
ರಾಜ್ಯ ಇತಿಹಾಸ ಅಕಾದೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಮಾತನಾಡಿ ಬುಕಾನನ್ವರದಿಯು 19ನೇ ಶತಮಾನದ ಆರಂಭದ ಹಳೆಯ ಮೈಸೂರು ಪ್ರಾಂತದ ಸಾಮಾಜಿಕ, ಕೃಷಿ, ಜಾತಿ ವ್ಯವಸ್ಥೆ, ಧರ್ಮ ಮತ್ತು ನೈಸರ್ಗಿಕ ಸಂಪತ್ತಿನ ಕುರಿತು ಮಹತ್ವದ ಮಾಹಿತಿ ಒದಗಿಸುತ್ತದೆ.
ಇಂಗ್ಲೆಂಡಿನಿಂದ ಉಪ್ಪು ಆಮದಾಗಲು ಪ್ರಾರಂಭಿಸಿದ ನಂತರ ಸ್ಥಳೀಯ ಉಪ್ಪು ತಯಾರಕರು, ಕಬ್ಬಿಣ ತಯಾರಕರು ಮತ್ತು ನೇಕಾರರು ತಮ್ಮ ಮೂಲ ಕಸುಬನ್ನು ಕಳೆದುಕೊಂಡು ನಿರುದ್ಯೋಗಿಗಳಾದರು.
ಹತ್ತಾರು ಯುದ್ಧಗಳ ನಂತರವೂ ಟಿಪ್ಪು ಸುಲ್ತಾನ್ ಆರ್ಥಿಕವಾಗಿ ಬಲಿಷ್ಠನಾಗಿದ್ದ. ಆತನ ನಿಧನದ ನಂತರ ಕಲ್ಕತ್ತಾದ ವೈಸ್ರಾಯ್ಲಾರ್ಡ್ವೆಲ್ಲೆಸ್ಲೆ, ವೈದ್ಯನಾಗಿದ್ದ ಬುಕಾನನ್ನನ್ನು ಹಳೆ ಮೈಸೂರು ಪ್ರಾಂತದ ಸರ್ವೇಕ್ಷಣೆಗೆ ನಿಯೋಜಿಸಿದನು.
ಜನಪರ ಕಾರ್ಯಕ್ಕೆ ಸಾಕ್ಷಿ
ಜಾನಪದ ವಿದ್ವಾಂಸ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, "ಡಾಬ್ಸ್ನ ಜನಪರ ಕೆಲಸಗಳಿಗೆ ಮೆಚ್ಚಿ ಸ್ಥಳೀಯರೇ ‘ಸೋಂಪುರ’ ಎಂಬ ಊರನ್ನು ಆತನ ಹೆಸರಿನಲ್ಲಿ (ಡಾಬ್ಸ್ಪೇಟೆ) ಕರೆಯಲಾರಂಭಿಸಿದ್ದು ಆತನ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ" ಎಂದರು.
ಅಲ್ಲದೆ, ಇತಿಹಾಸ ಅಕಾಡೆಮಿ ಕಾರ್ಯದರ್ಶಿ ಕೆ.ಎಲ್.ರಾಜಶೇಖರ್ಹಾಗೂ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ.ವೆಂಕಟೇಶ್ ಅವರು 19ನೇ ಶತಮಾನದ ಸಂಕೀರ್ಣ ಇತಿಹಾಸವನ್ನು ಕನ್ನಡದ ಓದುಗರಿಗೆ ಸುಲಭವಾಗಿ ತಲುಪಿಸಿದ ಅನುವಾದಕ ಪ್ರೊ. ಎಂ.ಜಿ. ರಂಗಸ್ವಾಮಿ ಅವರ ಶ್ರಮವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ಮತ್ತು ಉಪಸ್ಥಿತಿ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ನಾಡೋಜ ಡಾ. ವೂಡೇ ಪಿ. ಕೃಷ್ಣ ವಹಿಸಿದ್ದರು. ಸಭೆಯಲ್ಲಿ ಪ್ರಕಾಶಕ ಸಿವಿಜಿ ಚಂದ್ರು, ಕತೆಗಾರ ತುಂಬಾಡಿ ರಾಮಯ್ಯ, ಕವಿ ಪ್ರೊ. ಚಂದ್ರಶೇಖರ ತಾಳ್ಯ, ಲೇಖಕ ಪ್ರೊ. ಜಿ. ಶರಣಪ್ಪ, ಪತ್ರಕರ್ತರಾದ ಚಂದ್ರಶೇಖರ ಬೆಳಗೆರೆ, ಹೊನಕೆರೆ ನಂಜುಂಡೇಗೌಡ, ಸಾಹಿತಿ ಡಿ.ಎಸ್.ಲಿಂಗರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.