ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ಶಾಕಿಬ್ ಉದ್ಘಾಟಿಸಿ ಮಾತನಾಡಿ, ಸಮಾಜದ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ತರವಾದುದು ಎಂದು ಹೇಳಿದರು. ಅನೇಕ ಕಾರ್ಮಿಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶ್ರದ್ಧೆ, ನಿಷ್ಠೆ ಮತ್ತು ಪರಿಶ್ರಮದ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ. ಅವರಲ್ಲಿ ಕೆಲವರ ಜೀವನವೇ ಸಮಾಜಕ್ಕೆ ಪ್ರೇರಣೆಯಾಗಿದ್ದು, ಅಂತಹವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಕೆಲವರು ತೀವ್ರ ಸಂಕಷ್ಟಗಳ ನಡುವೆಯೇ ಸಾಧನೆ ಮಾಡುತ್ತಿರುವುದನ್ನು ಉಲ್ಲೇಖಿಸಿದ ಅವರು, ಮಹಿಳೆಯೊಬ್ಬರು ಎಂಟು ಮನೆಗಳಲ್ಲಿ ಕೆಲಸ ಮಾಡಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಉದಾಹರಣೆಯನ್ನು ಹಂಚಿಕೊಂಡರು. ಇಂತಹ ಪರಿಶ್ರಮಿ ವ್ಯಕ್ತಿಗಳ ಬದುಕು ನಮಗೆ ಆದರ್ಶವಾಗಬೇಕು. ಎಲ್ಲವೂ ಇದ್ದರೂ ಸಾಧನೆ ಮಾಡದೆ ಇರುವವರಿಗಿಂತ, ಸಂಕಷ್ಟದಲ್ಲಿಯೇ ಸಾಧನೆ ಮಾಡುವವರಿಂದ ಪಾಠ ಕಲಿಯಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಗೆ ಆಹ್ವಾನಿಸಲಾದ ಹಲವಾರು ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಕಾರ್ಮಿಕರ ಜೀವನ, ಅವರ ಕಷ್ಟ ಮತ್ತು ಪರಿಶ್ರಮವನ್ನು ಪ್ರತಿಬಿಂಬಿಸುವ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು. ಅವರ ಅಭಿವ್ಯಕ್ತಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದಿತು.

ಇದೇ ವೇಳೆ ಕೆಲವು ವಿದ್ಯಾರ್ಥಿಗಳು ಕಾರ್ಮಿಕರ ಮಹತ್ವದ ಕುರಿತು ಪ್ರಭಾವಿ ಭಾಷಣಗಳನ್ನು ಮಾಡಿ, ಅವರ ಸೇವೆಯ ಅಗತ್ಯತೆ ಮತ್ತು ಸಮಾಜದಲ್ಲಿ ಅವರ ಸ್ಥಾನವನ್ನು ಹೈಲೈಟ್ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ನಸ್ರೀನ್ ಸುಲ್ತಾನಾ ಮಾತನಾಡಿ, ಕಾರ್ಮಿಕರ ಪರಿಶ್ರಮದಿಂದಲೇ ಸಮಾಜ ಸುಸೂತ್ರವಾಗಿ ಸಾಗುತ್ತಿದೆ. ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಸಂಸ್ಕೃತಿ ಬೆಳೆಸಬೇಕು ಎಂದು ಹೇಳಿದರು ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು