ಶಿವಮೊಗ್ಗ: ವಾಹನ ಚಾಲನೆ ಮಾಡುವಾಗ ಚಾಲಕರು ಅತ್ಯಂತ ಎಚ್ಚರಿಕೆಯಿಂದಿರಬೇಕು. ನಮ್ಮನ್ನು ನಂಬಿರುವ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವುದರ ಜೊತೆಗೆ, ನಮ್ಮನ್ನೇ ನೆಚ್ಚಿಕೊಂಡಿರುವ ಕುಟುಂಬದ ಭದ್ರತೆಯ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂಬುದನ್ನು ಪ್ರತಿಯೊಬ್ಬ ಚಾಲಕನೂ ಸದಾ ನೆನಪಿನಲ್ಲಿಡಬೇಕು ಎಂದು ತಾಲ್ಲೂಕು ಕಾರು ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗಿರೀಶ್ ಕೋವಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಗ್ರೀನ್ ಎಂಬೆಸ್ಸಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲ್ಲೂಕು ಕಾರು ಚಾಲಕರ ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಸಂಘವು ಕೇವಲ ವೃತ್ತಿಪರ ಚಟುವಟಿಕೆಗಳಿಗೆ ಸೀಮಿತವಾಗದೆ ಹಲವು ಸಾಮಾಜಿಕ ಕಾರ್ಯಗಳಲ್ಲೂ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಚಾಲಕರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಿರುವ ಸಂಘವು, ಅವರ ಸುರಕ್ಷತೆಗಾಗಿ ಕಾಲಕಾಲಕ್ಕೆ ಜಾಗೃತಿ ಹಾಗೂ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ಹೊಸದಾಗಿ ಸಂಘಕ್ಕೆ ಸೇರ್ಪಡೆಯಾಗಿರುವ ಸದಸ್ಯರು ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಸಭೆಯ ವೇದಿಕೆಯಲ್ಲಿ ಪ್ರಮುಖರಾದ ಗಣಪತಿ ಮಂಡಗಳಲೆ, ಟಿ.ವಿ. ಪಾಂಡುರಂಗ, ಎಸ್.ಎಂ. ಮಂಜುನಾಥ್, ವೀರೇಶ್, ನಾರಾಯಣ ಪೂಜಾರಿ, ಫ್ರಾನ್ಸಿಸ್ ಡಿಕಾಸ್ಟ ಹಾಗೂ ಸರಸ್ವತಿ ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ:
ವಾರ್ಷಿಕ ಮಹಾಸಭೆಯ ನಂತರ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಗಿರೀಶ್ ಕೋವಿ ಅವರು ಪುನರಾಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಉಪಾಧ್ಯಕ್ಷರಾಗಿ ಮಹೇಶ್ ಆರ್., ಪ್ರಧಾನ ಕಾರ್ಯದರ್ಶಿಯಾಗಿ ಫ್ರಾನ್ಸಿಸ್ ಡಿಕಾಸ್ಟ, ಕೋಶಾಧ್ಯಕ್ಷರಾಗಿ ಕೃಷ್ಣಮೂರ್ತಿ ಎ. ಹಾಗೂ ಸಹ ಕಾರ್ಯದರ್ಶಿಯಾಗಿ ಜಗದೀಶ್ ಕೆ.ಆರ್. ಅವರುಗಳು ಆಯ್ಕೆಯಾದರು. ನಿರ್ದೇಶಕರುಗಳಾಗಿ ಶರಣ್ ಡಿ., ಪ್ರದೀಪ್ ಎಂ.ಈ., ಪ್ರವೀಣ ಕುಮಾರ್, ಇಮ್ರಾನ್, ಪ್ರವೀಣ್ ಎಚ್.ಜೆ. ಮತ್ತು ಸಂತೋಷ್ ಸಿ.ಆರ್. ಅವರನ್ನು ತೀರ್ಮಾನಿಸಲಾಯಿತು.
ವರದಿ: ವಸಂತ ಬಿ ಈಶ್ವರಗೆರೆ