Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

“ದುರಾಸೆಯ ಬಂಧನದಲ್ಲಿ ಕಳೆದುಹೋಗುವ ಮಾನ”

ಚಂದ್ರವಳ್ಳಿ ನ್ಯೂಸ್, ಮೈಸೂರು:
ದುರಾಸೆ ಮನುಷ್ಯನನ್ನು ಒಳಗಿನಿಂದ ಕುಗ್ಗಿಸುತ್ತದೆ.ಅತಿಯಾದ ಆಸೆ ಆತ್ಮಶಾಂತಿಯನ್ನು ನಾಶಮಾಡುತ್ತದೆ, ತೃಪ್ತಿಯ ಬದುಕೇ ನಿಜವಾದ ಸುಖದ ದಾರಿ.ತೃಪ್ತಿಯೇ ನಿಜವಾದ ಶಾಂತಿಯ ಮೂಲ. ಮಾನ ಉಳಿದರೆ ಬದುಕಿಗೆ ಅರ್ಥ ಉಳಿಯುತ್ತದೆ ಆಲೋಚಿಸುವ.

ದುರಾಸೆಯ ಹಿಂದೆ ಓಡಿದ ಮಾನವ
ಮಾನವತ್ವವನ್ನೇ ಕಳೆದುಕೊಂಡ ದಾನವ
ತೃಪ್ತಿಯ ಬೆಳಕು ಮರೆತ ಮನದ ದಾರಿ
ಶಾಂತಿ ಕಳೆದು ಸಿಕ್ಕಿತು ಅಂಧಕಾರ ಭಾರಿ.

ಮಾನವನಿಗೆ ಆಸೆ ಇರಬೇಕು, ಅದು ಇಲ್ಲದಿದ್ದರೆ ಬದುಕು‌‌ನಿಷ್ಕ್ರಿಯವಾಗು ತ್ತದೆ,ಮನಸ್ಸಿಗೂ ಮನೆಗೂ ಸಂತೋಷ ನೀಡಲು ಸಾಧ್ಯವಿಲ್ಲ. ಆದರೆ ಆ ಆಸೆ ತೂಕ ಮಾಡಿಸಿಕೊಂಡ ಬೆಲ್ಲದಂತೆ ಇರಬೇಕು, ಬೆಟ್ಟದಂತೆ ಬೆಳೆದು ನಿಲ್ಲಬಾರದು. ದುರಾಸೆಯಾಗಿ ಬಂದು ಎಲ್ಲವನ್ನೂ ಬಾಚಿಕೊಳ್ಳುವ ಸ್ವಭಾವವಾಗಿರಬಾರದು.

ಅತಿಯಾದ ಆಸೆಯನ್ನು ಬೆಳೆಸಿಕೊಂಡು ಓಡಿದರೆ, ಅದು ಒಂದಿಲ್ಲೊಂದು ದಿನ ನಮ್ಮನ್ನೇ ಕಂದಕಕ್ಕೆ ತಳ್ಳುತ್ತದೆ. ಎಷ್ಟು ಇದ್ದರೂ ಇನ್ನಷ್ಟು, ಮತ್ತಷ್ಟು, ಮಗದೊಷ್ಟು ಎಂದು ಹಂಬಲಿಸುವ ಮನಸ್ಸು ಕೊನೆಗೆ ತೃಪ್ತಿಯನ್ನೇ ಕಳೆದುಕೊಳ್ಳುತ್ತದೆ. ಹೀಗೆ ಅಳೆಯಲಾರದಷ್ಟು ದುರಾಸೆ ಗುಡ್ಡದಂತೆ ಜಮೆಯಾಗುತ್ತಾ ಹೋಗಿ, ಬದುಕಿನ ಸಮತೋಲನವನ್ನು ಕಳೆದುಹಾಕುತ್ತದೆ.

ಮಾನವನ ಮನದ ದುರಾಸೆ ಶಾಂತಿಯನ್ನು ನೀಡುವುದಿಲ್ಲ, ನೆಮ್ಮದಿಯನ್ನೂ ಕೊಡುವುದಿಲ್ಲ. ದುಡಿದು ದುಡಿದು ಹೊಟ್ಟೆಗೆ ಹಿಟ್ಟಿಲ್ಲದ ಸ್ಥಿತಿಯಲ್ಲಿ ದಿನರಾತ್ರಿ ಸಂಪತ್ತನ್ನು ಸಂಗ್ರಹಿಸಿದರೂ, ಅದನ್ನು ಅನುಭವಿಸುವ ಸಮಯ ಬಹಳ ಕಡಿಮೆಯಾಗಿರುತ್ತದೆ. ಕೊನೆಗೆ ಎಲ್ಲವನ್ನೂ ಬಿಟ್ಟು ಹೊರಡುವಾಗ, ಸಂಪಾದಿಸಿದದ್ದು ಪರರ ಕೈ ಸೇರಿ, ಮಾನವನು ಮಣ್ಣಿನಲ್ಲೇ ಲೀನವಾಗುತ್ತಾನೆ.

ಆದುದರಿಂದ ಆಸೆ ಇರಲಿ, ಆದರೆ ಅದು ನಿಯಂತ್ರಿತವಾಗಿರಲಿ, ದುರಾಸೆ ಯಾಗದಂತೆಬದುಕಿನ ಮಿತಿಯೊಳಗೆ ಇರಬೇಕು.

ಮಾನವ ಜೀವನವು ಆಸೆ ಮತ್ತು ವಿವೇಕದ ನಡುವೆ ನಡೆಯುವ ಒಂದು ನಿರಂತರ ಪರೀಕ್ಷೆ. ಆಸೆ ಜೀವನಕ್ಕೆ ಚಲನೆ ನೀಡಿದರೆ, ವಿವೇಕ ಅದಕ್ಕೆ ದಿಕ್ಕು ನೀಡುತ್ತದೆ. ಆದರೆ ಈ ಸಮತೋಲನ ತಪ್ಪಿದಾಗ, ಆಸೆ ದುರಾಸೆಯಾಗಿ ರೂಪಾಂತರಗೊಂಡು ಮಾನವ ಮನಸ್ಸನ್ನು ಬಂಧನದಲ್ಲಿಡುತ್ತದೆ. ಈ ಬಂಧನವು ಹೊರಗೆ ಕಾಣದು, ಆದರೆ ಒಳಗೆ ವ್ಯಕ್ತಿತ್ವವನ್ನು ನಿಧಾನವಾಗಿ ಕುಗ್ಗಿಸುತ್ತದೆ. ಇಂತಹ ಸ್ಥಿತಿಯಲ್ಲೇ ಮನುಷ್ಯ ತನ್ನ ಮಾನ, ಗೌರವ ಮತ್ತು ಆತ್ಮಗೌರವವನ್ನು ಕಳೆದುಕೊಳ್ಳುತ್ತಾನೆ.

ದುರಾಸೆ ಎಂದರೆ ಮಿತಿಯಿಲ್ಲದ ಬಯಕೆ. ಬೇಕಾದ್ದನ್ನು ಮೀರಿ ಇನ್ನೂ ಬೇಕು ಎಂಬ ಮನೋಭಾವವೇ ಇದರ ಮೂಲ. ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಅಗತ್ಯವಿರುವಷ್ಟು ಸಂಪತ್ತು ಇದ್ದರೂ, ಇನ್ನಷ್ಟು ಪಡೆಯಬೇಕೆಂಬ ಹಂಬಲ ಅವನನ್ನು ತಪ್ಪು ದಾರಿಯತ್ತ ಕರೆದೊಯ್ಯುತ್ತದೆ. ಅವನು ಸತ್ಯ, ನಿಷ್ಠೆ ಮತ್ತು ಮಾನವೀಯತೆಯನ್ನು ಬದಿಗಿಟ್ಟು ಲಾಭದ ಹಿಂದೆ ಓಡಲು ಆರಂಭಿಸುತ್ತಾನೆ. ಆರಂಭದಲ್ಲಿ ಇದು ಚಿಕ್ಕ ಹೊಂದಾಣಿಕೆಯಂತೆ ಕಾಣಬಹುದು, ಆದರೆ ಕ್ರಮೇಣ ಅದು ಅವನ ವ್ಯಕ್ತಿತ್ವದ ಕುಸಿತಕ್ಕೆ ಕಾರಣವಾಗುತ್ತದೆ.

ಇಂದಿನ ಸಮಾಜದಲ್ಲಿ ದುರಾಸೆಯ ಪರಿಣಾಮ ಸ್ಪಷ್ಟವಾಗಿ ಕಾಣುತ್ತದೆ. ಕೆಲವು ಜನರು ಸ್ಥಾನಮಾನಕ್ಕಾಗಿ ತಮ್ಮ ತತ್ವಗಳನ್ನು ಬದಿಗಿಡುತ್ತಾರೆ, ಕೆಲವರು ಹಣಕ್ಕಾಗಿ ಸಂಬಂಧಗಳನ್ನು ಮರೆತು ಬಿಡುತ್ತಾರೆ, ಇನ್ನೂ ಕೆಲವರು ತಾತ್ಕಾಲಿಕ ಯಶಸ್ಸಿಗಾಗಿ ನೈತಿಕತೆಯನ್ನು ಬಲಿಪಡೆಸುತ್ತಾರೆ. ಈ ಎಲ್ಲವುಗಳ ಮೂಲವೇ ದುರಾಸೆ. ಇದು ವ್ಯಕ್ತಿಯ ಹೊರಗಿನ ಸಾಧನೆಯನ್ನು ಹೆಚ್ಚಿಸಿದರೂ ಒಳಗಿನ ಶಾಂತಿಯನ್ನು ಸಂಪೂರ್ಣವಾಗಿ ನಾಶಮಾಡುತ್ತದೆ.

ಮಾನ ಉಳಿದರೆ ಜೀವ ಉಳಿದಂತೆಎಂಬ ಗಾದೆ ಇಲ್ಲಿ ಅತ್ಯಂತ ಮಹತ್ವದ ಸಂದೇಶ ನೀಡುತ್ತದೆ. ಮಾನವೇ ವ್ಯಕ್ತಿಯ ನಿಜವಾದ ಸಂಪತ್ತು. ಹಣ ಕಳೆದುಹೋದರೂ ಮತ್ತೆ ಸಂಪಾದಿಸಬಹುದು; ಆದರೆ ಮಾನ ಕಳೆದುಹೋದರೆ ಅದನ್ನು ಮರಳಿ ಪಡೆಯುವುದು ಅತ್ಯಂತ ಕಷ್ಟ. ದುರಾಸೆಯ ಬಂಧನದಲ್ಲಿ ಸಿಕ್ಕ ವ್ಯಕ್ತಿ ತನ್ನ ಮಾನವನ್ನು ಕಳೆದುಕೊಳ್ಳುವ ಕ್ಷಣದಲ್ಲಿ ಅವನ ವ್ಯಕ್ತಿತ್ವದ ಮೂಲವೇ ಕುಸಿಯುತ್ತದೆ.

ಬೌದ್ಧ ತತ್ತ್ವ ಸ್ವಯಂ ದೀಪೋ ಭವಈ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಈ ನುಡಿ ಮಾನವನಿಗೆ ಹೊರಗಿನ ಆಕರ್ಷಣೆಗಳ ಹಿಂದೆ ಓಡಬೇಡ, ಒಳಗಿನ ಅರಿವಿನಿಂದ ಬದುಕು ಕಟ್ಟಿಕೊಳ್ಳು ಎಂದು ಹೇಳುತ್ತದೆ. ಆದರೆ ದುರಾಸೆಯ ಬಂಧನದಲ್ಲಿ ಸಿಕ್ಕ ವ್ಯಕ್ತಿ ತನ್ನ ಒಳಗಿನ ಅರಿವನ್ನು ಕಳೆದುಕೊಂಡು ಹೊರಗಿನ ಪ್ರದರ್ಶನದ ಹಿಂದೆ ಓಡುತ್ತಾನೆ. ಇದರಿಂದ ಅವನ ಜೀವನ ನಿರಂತರ ಅಶಾಂತಿಯ ಗೂಡಾಗುತ್ತದೆ.

news_1785420279_4_940.webp

 

ಒಂದು ಸರಳ ಉದಾಹರಣೆಯನ್ನು ನೋಡಬಹುದು: ಒಬ್ಬ ವಿದ್ಯಾರ್ಥಿ ತಾತ್ಕಾಲಿಕ ಅಂಕಗಳಿಗಾಗಿ ನಕಲು ಮಾಡಿದರೆ, ಅವನು ಕ್ಷಣಿಕವಾಗಿ ಯಶಸ್ವಿಯಾಗಬಹುದು. ಆದರೆ ಆ ನಕಲು ಅವನ ಆತ್ಮಗೌರವವನ್ನು ಕುಗ್ಗಿಸುತ್ತದೆ. ಮುಂದೆ ಅವನು ತನ್ನ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾನೆ. ಇದು ದುರಾಸೆಯ ಸಣ್ಣ ರೂಪವಾದರೂ ಅದರ ಪರಿಣಾಮ ಜೀವನಪರ್ಯಂತ ಇರುತ್ತದೆ.

ಅದೇ ರೀತಿ, ಒಬ್ಬ ಉದ್ಯೋಗಿ ಅನೈತಿಕ ಮಾರ್ಗಗಳಿಂದ ಹಣ ಸಂಪಾದಿಸಿ  ದರೆ, ಅವನು ತಾತ್ಕಾಲಿಕವಾಗಿ ಶ್ರೀಮಂತನಾಗಬಹುದು. ಆದರೆ ಒಳಗಿನ ಆತ್ಮಶಾಂತಿ ಕಳೆದುಹೋಗುತ್ತದೆ. ಆತನು ಸದಾ ಭಯ, ಅನುಮಾನ ಮತ್ತು ಆತಂಕದಲ್ಲಿ ಬದುಕಬೇಕಾಗುತ್ತದೆ. ಇದು ದುರಾಸೆಯ ಬಂಧನದ ನಿಜವಾದ ರೂಪ.

ಮಾನವನು ಪ್ರಕೃತಿಯಿಂದ ಅಪಾರವಾದ ಸಂಪನ್ಮೂಲಗಳನ್ನು ಪಡೆದಿದ್ದಾನೆ. ಆದರೆ ಅವನು ತೃಪ್ತಿಯನ್ನು ಮರೆತು ಅತಿಯಾದ ಬಳಕೆ ಮತ್ತು ಅತಿಯಾದ ಸಂಗ್ರಹಣೆಯತ್ತ ಹೋಗುತ್ತಿದ್ದಾನೆ. ಇದರಿಂದ ಪರಿಸರ ಹಾನಿ ಮಾತ್ರವಲ್ಲ, ಮಾನಸಿಕ ಅಸಮತೋಲನವೂ ಉಂಟಾಗುತ್ತಿದೆ. ಪ್ರಕೃತಿ ಸದಾ ಸಮತೋಲನವನ್ನು ಬೋಧಿಸುತ್ತದೆ; ಆದರೆ ದುರಾಸೆ ಆ ಸಮತೋಲನವನ್ನು ಭಂಗಪಡಿಸುತ್ತದೆ.

ಕಾಯಕ ಮತ್ತು ನಿಷ್ಠೆ ಮಾನವನ ಜೀವನದ ಮೂಲಾಧಾರ. ಶ್ರಮದಿಂದ ಗಳಿಸಿದುದು ಸದಾ ಶಾಶ್ವತವಾಗಿರುತ್ತದೆ. ಆದರೆ ದುರಾಸೆ ಮಾನವನನ್ನು ಶಾರ್ಟ್‌ಕಟ್‌ಗಳತ್ತ ಕರೆದೊಯ್ಯುತ್ತದೆ. ಈ ಶಾರ್ಟ್‌ಕಟ್‌ಗಳು ಕೊನೆಗೆ ಅವನ ವ್ಯಕ್ತಿತ್ವವನ್ನು ಕುಗ್ಗಿಸುತ್ತವೆ. ಹೀಗಾಗಿ ನೈತಿಕತೆ ಮತ್ತು ಶ್ರಮವೇ ನಿಜವಾದ ಯಶಸ್ಸಿನ ಮಾರ್ಗ.

ದುರಾಸೆಯ ಇನ್ನೊಂದು ಅಪಾಯವೆಂದರೆ ಅದು ಹೋಲಿಕೆಯ ಮನೋಭಾವವನ್ನು ಹುಟ್ಟಿಸುತ್ತದೆ. ನನ್ನಿಗಿಂತ ಹೆಚ್ಚು ಹೊಂದಿದ್ದಾನೆಎಂಬ ಚಿಂತನೆ ಮನುಷ್ಯನ ತೃಪ್ತಿಯನ್ನು ನಾಶಮಾಡುತ್ತದೆ. ಈ ಹೋಲಿಕೆ ಮನಸ್ಸನ್ನು ಸದಾ ಅಸಮಾಧಾನದಲ್ಲಿ ಇಡುತ್ತದೆ. ತೃಪ್ತಿ ಕಳೆದುಹೋದರೆ ಶಾಂತಿಯೂ ಕಳೆದುಹೋಗುತ್ತದೆ.

ಕೊನೆಗೆ ಹೇಳುವುದಾದರೆ, ದುರಾಸೆ ಮನುಷ್ಯನನ್ನು ಹೊರಗೆ ಯಶಸ್ವಿಯಂತೆ ತೋರಿಸಿದರೂ ಒಳಗೆ ಶೂನ್ಯನಾಗಿಸುತ್ತದೆ. ಅದು ಮಾನವ ವ್ಯಕ್ತಿತ್ವವನ್ನು ನಿಧಾನವಾಗಿ ಕುಸಿತದತ್ತ ಕರೆದೊಯ್ಯುವ ಅಡಗಿದ ಶಕ್ತಿ. ಆದ್ದರಿಂದ ಜೀವನದಲ್ಲಿ ಬೇಕಾದ್ದನ್ನು ಅರಿತು, ಬೇಡದದರ ಹಿಂದೆ ಓಡದಿರುವುದು ಅತ್ಯಂತ ಮುಖ್ಯವಾಗುತ್ತದೆ.

ದುರಾಸೆಯ ಬಂಧನದಲ್ಲಿ ಕಳೆದುಹೋಗುವ ಮಾನಎಂಬುದು ಕೇವಲ ಶೀರ್ಷಿಕೆಯಲ್ಲ ಅದು ಮಾನವ ಜೀವನದ ಎಚ್ಚರಿಕೆಯ ಗಂಟೆ. ಆಸೆಯ ನಿಯಂತ್ರಣವೇ ಮಾನವನ ಶಕ್ತಿ, ಮಾನವೇ ಅವನ ನಿಜವಾದ ಸಂಪತ್ತು; ಮತ್ತು ತೃಪ್ತಿಯೇ ಶಾಂತಿಯ ಮೂಲ.
ಲೇಖನ :ಕಾಶಿಗೌ, ಸಾಹಿತಿ, ನಿವೃತ್ತ ಪ್ರಾಂಶುಪಾಲರು, ಮೈಸೂರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ