LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಾಮಾಣಿಕ, ನಿಷ್ಠುರತೆ ಇದ್ದರೆ ನಿರ್ಭೀತಿ ಕೆಲಸ ಸಾಧ್ಯ

ಶಿವಮೊಗ್ಗ ,ಏ.14 : ಪ್ರಾಮಾಣಿಕತೆ ಮತ್ತು  ನಿಷ್ಠುರ ಮನೋಭಾವವನ್ನು ಹೊಂದಿದಾಗ ಪತ್ರಿಕಾ ಕ್ಷೇತ್ರದಲ್ಲಿ ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ  ಪ್ರೆಸ್‌ಟ್ರಸ್ಟ್  ವತಿಯಿಂದ ಹಮ್ಮಿ ಕೊಳ್ಳಲಾಗಿದ್ದ   ಹಿರಿಯ ಪತ್ರಕರ್ತರಿಗೆ ಪಿ.ಲಂಕೇಶ್ ಹೆಸರಿನ ಹಾಗೂ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಹಣ ಇರುವಲ್ಲಿ ಮನುಷ್ಯ ಭ್ರಷ್ಟನಾ ಗುತ್ತಾನೆ. ಪತ್ರಿಕಾ ಕ್ಷೇತ್ರದಲ್ಲಿ ಯಾವುದಕ್ಕೂ ಅಂಜದೇ ವಾಸ್ತವದ ನೆಲೆಗಟ್ಟಿನಲ್ಲಿ ಮತ್ತು  ನಿಷ್ಠುರವಾಗಿ ಕೆಲಸ ಮಾಡಿದಾಗ ಆ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುತ್ತಾನೆ ಎಂದರು.
ಪಿ.ಲಂಕೇಶ್ ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು. ಸರ್ಕಾರವನ್ನೇ ಬದಲಿಸಿದಂತಹ ಕೀರ್ತಿ ಅವರ ಬರಹಕ್ಕಿದೆ. ಸಮಾಜದಲ್ಲಿ  ಶೋಷಿತರ ಮತ್ತು ನೊಂದವರ ಬಗ್ಗೆ ಬೆಳಕು ಚೆಲ್ಲುವಂತಹ ಕಾರ್ಯವನ್ನು ಪಿ.ಲಂಕೇಶ್ ನಿರಂತರವಾಗಿ ಮಾಡಿಕೊಂಡು ಬಂದವರು. ಅವರೊಂದು ಚುಂಬಕ ಶಕ್ತಿಯಾಗಿದ್ದರು ಎಂದರು.
ಅತ್ಯಂತ ನಿರ್ಭೀತಿಯಿಂದ ಮತ್ತು ಯಾರಿಗೂ ತಲೆಬಾಗದೇ ಅನೇಕ ದಶಕಗಳ ಕಾಲ ಪಿ.ಲಂಕೇಶ್ ಪತ್ರಿಕಾ ಕ್ಷೇತ್ರದಲ್ಲಿ ತಮ್ಮ ಕಾರ್ಯವನ್ನು ಸಾಧಿಸಿದರು. ಅನೇಕ ಪತ್ರಕರ್ತರನ್ನು ಬರಹಗಾರರನ್ನು ಬೆಳೆಸಿದರು. ಇಂತವರ ಹೆಸರಿನಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಿರಿಯ ಪತ್ರಕರ್ತರಿಗೆ ಪ್ರಶಸ್ತಿಯನ್ನು ನೀಡುತ್ತಿ ರುವುದು ಅತ್ಯಂತ ಸಂತಸದ ಸಂಗತಿ. ಆದರೆ ಮಹಿಳಾ ಪತ್ರಕರ್ತರನ್ನು ಕೂಡ ಇಂತಹ ಪ್ರಶಸ್ತಿಗೆ ಗುರುತಿಸಬೇಕು ಎಂಬ ಸಲಹೆಯನ್ನು ನೀಡಿದರು.
ಪೆನ್ನಿನ ಮಾನ,ಮರ್ಯಾದೆ ಉಳಿಯ ಬೇಕಾದರೆ ಪತ್ರಕರ್ತ ತನ್ನ ಬರಹವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಬೇಕಾ ಗುತ್ತದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ  ಮನುಷ್ಯನ ದೌರ್ಬಲ್ಯವನ್ನೇ ಹಿಡಿದು ಸುಲಿಗೆ ಮಾಡುವಂತಹ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರ್ಕಾರ ಪತ್ರಕರ್ತರಿಗೆ ಯಾವುದೇ ಸೌಲಭ್ಯವನ್ನು  ನೀಡದೇ ಇರುವುದು ಇದಕ್ಕೆ ಕಾರಣವಿರಬಹುದು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಓದುಗರೇ ಪತ್ರಿಕೆಯ ಆಸ್ತಿ. ಪತ್ರಕರ್ತರೂ ಕೂಡ ಪತ್ರಿಕೆ ಗಳ ಆಸ್ತಿ. ಉತ್ತಮ ಬರಹಗಳನ್ನು ನೀಡಿದಾಗ ಓದುಗರ ಸಂಖ್ಯೆ ಹೆಚ್ಚಾಗುತ್ತದೆ. ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳ ಆಸ್ತಿ. ಆದರೆ ಇಂದಿನ ದಿನಮಾನದಲ್ಲಿ ಹಣವಂತರ ಕೈಯಲ್ಲಿ ಎಲ್ಲವೂ ಸಿಕ್ಕು ಈ ಪದಗಳ ಅರ್ಥ ಗಳೇ ಕಳೆದು ಹೋಗಿವೆ ಎಂದು ಹೇಳಿದರು.
ಲಂಕೇಶ್ ಬರಹ ತಲೆದಂಡವನ್ನೇ ಮಾಡು ತ್ತಿತ್ತು. ಲಂಕೇಶ್ ಕಾಲವಾದ ನಂತರ ಸೃಷ್ಠಿ ಯಾದ ಶೂನ್ಯವನ್ನು ಇದುವರೆಗೂ ಯಾರಿಗೂ ತುಂಬಲು ಸಾಧ್ಯವಾಗಲಿಲ್ಲ. ಕುಂ.ವೀರಭದ್ರಪ್ಪ  ಪತ್ರಿಕಾ ಕ್ಷೇತ್ರಕ್ಕೆ ಬಂದಿದ್ದರೆ ಅದು ಸಾಧ್ಯವಾಗುತ್ತಿತ್ತೇನೋ  ಎಂದು ಹೇಳಿದರು.
ರಾಷ್ಟ್ರನಾಯಕನಾಗಬೇಕಾದರೆ ಹುಟ್ಟಿನ ಹಿನ್ನೆಲೆ ಬೇಕಾಗುತ್ತದೆ ಎಂಬುದು ಇಂದಿನ ಸನ್ನಿವೇಶ. ಏಕೆಂದರೆ ಅಂಬೇಡ್ಕರ್‌ರವರನ್ನು ಒಂದು ಸಮುದಾಯಕ್ಕೆ ಸೀಮಿತ ಪಡಿಸಿರು ವುದು ಇದನ್ನು ಸ್ಪಷ್ಟಪಡಿಸುತ್ತದೆ. ಸಮಾಜ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಇವರ ಕುರಿತು ಪ್ರಕಟಣೆ, ಜಾಹೀರಾತುಗಳನ್ನು ನೀಡುತ್ತದೆ. ನಿಜವಾಗಿಯೂ ಅಂಬೇಡ್ಕರ್ ಜಯಂತಿಯನ್ನು  ಕಾನೂನು ಇಲಾಖೆ ಮಾಡಬೇಕಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ  ಕನ್ನಡಪ್ರಭ ಮುಖ್ಯ ವರದಿಗಾರ ಗೋಪಾಲ ಯಡಗೆರೆ, ಶಿವಮೊಗ್ಗ ಟೈಮ್ಸ್ ಸಂಪಾದಕ ಎಸ್.ಚಂದ್ರಕಾಂತ್, ಸಂಯುಕ್ತ ಕರ್ನಾಟಕ ವರದಿಗಾರ ಕೆ.ತಿಮ್ಮಪ್ಪ ಇವರುಗಳಿಗೆ ಪಿ.ಲಂಕೇಶ್ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪತ್ರಕರ್ತರಾದ ತೀರ್ಥಹಳ್ಳಿಯ ಶಿವಾನಂದ ಕರ್ಕಿ ಹಾಗೂ ಸೊರಬದ ಸ್ವಾಮಿ ಅವರಿಗೆ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ  ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ, ವಿಜಯಕರ್ನಾಟಕದ ಸ್ಥಾನಿಕ ಸಂಪಾದಕ ರವಿ ಆರಗ, ಕಿರಣ್ ಕಂಕಾರಿ, ಎಸ್.ಕೆ.ಗಜೇಂದ್ರಸ್ವಾಮಿ, ಶಿ.ಜು.ಪಾಶ, ಗೋ.ವಾ.ಮೋಹನಕೃಷ್ಣ, ಪಿ.ಜೇಸುದಾಸ್, ಸುನಿಲ್ ಶಿರನಲ್ಲಿ, ಹೊನ್ನಾಳಿ ಚಂದ್ರಶೇಖರ್, ವಿ.ಸಿ. ಪ್ರಸನ್ನ, ರಾಕೇಶ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ ರಾಮಚಂದ್ರ ಗುಣಾರಿ ಪ್ರಾರ್ಥಿಸಿದರು.
ಶಿವಮೊಗ್ಗ ನಗರದ ಪತ್ರಕರ್ತರ ದೊಡ್ಡಮನೆ ಎಂದರೆ ಪತ್ರಿಕಾಭವನ. ಶಿವಮೊಗ್ಗ ಪ್ರೆಸ್ ಟ್ರಸ್ಟ್ 2009 ರಲ್ಲಿ ಅಸ್ತಿತ್ವಕ್ಕೆ ಬಂದು ಪತ್ರಕರ್ತರಿಗಾಗಿ ಅನೇಕ ಸೇವಾ ಕಾರ್ಯಗಳನ್ನು ಮಾಡಿದೆ. ಇಂತಹ ಟ್ರಸ್ಟ್  ಪಿ.ಲಂಕೇಶ್ ಹೆಸರಿನಲ್ಲಿ ಹಿರಿಯ ಪತ್ರಕರ್ತರಿಗೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಯುವ ಪತ್ರಕರ್ತರು ಈ ಪ್ರಶಸ್ತಿಗೆ ಮೌಲ್ಯ ತರುವ ನಿಟ್ಟಿನಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕು.
-ಎನ್.ಮಂಜುನಾಥ್,
 ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST