Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಜೆಡಿಎಸ್-ಬಿಜೆಪಿ ಮೈತ್ರಿಗೆ ಅಡ್ಡಿ ಇಲ್ಲ, ನನ್ನ ಮೋದಿ ಸ್ನೇಹ ಶಾಶ್ವತ-ದೇವೇಗೌಡರು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ಯಾರಂಟಿ ಕಾರ್ಯಕ್ರಮ ಅನುಷ್ಠಾನದಿಂದಾಗಿ ರಾಜ್ಯ ಆರ್ಥಿಕವಾಗಿ ಬರಡಾಗಿದೆ. ಹಣಕಾಸಿನ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.


ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆ. ಪಿ. ಭವನದಲ್ಲಿ ಶುಕ್ರವಾರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿರು, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಮಾತನ್ನು ನಾನು ಹೇಳುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅವರಲ್ಲೇ ಗೊಂದಲ ಇದೆ. ದುಡ್ಡಿಲ್ಲ ದುಡ್ಡಿಲ್ಲ ಅಂತಿದ್ದಾರೆ. ಸರ್ಕಾರ ಇಂಥ ಅತಿವೃಷ್ಟಿ ಬಂದಾಗ ತನ್ನ ಸಂಪನ್ಮೂಲದಿಂದ ಸಂಕಷ್ಟಕ್ಕೀಡಾದ ಜನರಿಗೆ ಶಕ್ತಿ ಮೀರಿ ಸಹಾಯ ಮಾಡುವ ಜವಾಬ್ದಾರಿ ಹೊಂದಿದೆ. ಆದರೆ, ಅವರಲ್ಲಿ ಗೊಂದಲ ಇದೆ ಎಂದು ದೇವೇಗೌಡರು ಟೀಕಿಸಿ ಅಸಮಾಧಾನ ವ್ಯಕ್ತಪಡಿಸಿದರು.‌


ಮೈತ್ರಿಗೆ ಯಾವುದೇ ಆತಂಕವಿಲ್ಲ :
ದೇವೇಗೌಡರು ಮುಂದುವರೆದು ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆ ಕುರಿತು ಪ್ರತಿಕ್ರಿಯಿಸಿ
, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಕಾರಣಕ್ಕೂ ಅಡ್ಡಿ ಆತಂಕವಿಲ್ಲ. ಮೈತ್ರಿ ಮುಂದುವರಿಯುತ್ತದೆ. ಜಿಪಂ, ತಾಪಂ, ವಿಧಾನಸಭೆ ಚುನಾವಣೆ ಆಗಲಿ ಮೈತ್ರಿಗೆ ಎಂದೂ ಆತಂಕ ಇಲ್ಲ. ಪ್ರಧಾನಿ ಮೋದಿ ಮತ್ತು ನನ್ನ ಸಂಬಂಧ ಯಾವುದೇ ಕಾರಣಕ್ಕೂ ಯಾರೂ ಕೂಡ ಬದಲಾವಣೆ ಮಾಡಲು ಆಗುವುದಿಲ್ಲ. ಎಂದಿಗೂ ನಾನು ಪ್ರಧಾನಿ ಮೋದಿ ಬಗ್ಗೆ ಲಘುವಾಗಿ ಮಾತನಾಡಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.


ಅ-12ಕ್ಕೆ ಸಮಾವೇಶ:
ಬೆಂಗಳೂರಿನಲ್ಲಿ ಕನಿಷ್ಠ ಐವತ್ತು ಸಾವಿರ ಜನ ಹೆಣ್ಣು ಮಕ್ಕಳನ್ನು ಸೇರಿಸಿ ಅಕ್ಟೋಬರ್-12ರಂದು ಶಕ್ತಿ ಪ್ರದರ್ಶನ ಮಾಡಲು ತೀರ್ಮಾನಿಸಲಾಗಿದೆ ಎಂದು ದೇವೇಗೌಡರು ತಿಳಿಸಿದರು.


ರಾಜ್ಯದ ಮೂಲೆ‌ಮೂಲೆಯಿಂದ ಹೆಣ್ಣು ಮಕ್ಕಳನ್ನು ಸೇರಿಸಬೇಕು. ಆ ಮೂಲಕ ಜಿಪಂ, ತಾಪಂ ಚುನಾವಣೆಯಲ್ಲಿ ನಿಲ್ಲಲು ಶಕ್ತಿ ಇದೆ ಎಂಬುದನ್ನು ಸಾಬೀತು ಮಾಡಬೇಕು. ನಿಖಿಲ್ ಕುಮಾರಸ್ವಾಮಿ ಹೋದಾಗ ಜನ ಸೇರುತ್ತಾರೆ. ಸ್ಥಳೀಯ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಆದರೆ, ನಮ್ಮ ಶಕ್ತಿ ಚುನಾವಣೆ ಬಂದಾಗ ಪ್ರದರ್ಶನ ಆಗುತ್ತದೆ. ಹಣಕಾಸಿನ ಅಡಚಣೆ ಇದ್ದರೆ ತಿಳಿಸಿ, ನಾನು ಸಂಪೂರ್ಣ ಹೊಣೆ ಹೊರುತ್ತೇನೆ. ಆದರೆ, ಹಿಂದೆ ಬೀಳಬಾರದು. ಅ.12 ರಂದು ಈ ಕಾರ್ಯಕ್ರಮ ಮಾಡಿ ಶಕ್ತಿ ಪ್ರದರ್ಶನ ಮಾಡಬೇಕು. ಬೆಂಗಳೂರು ಸಿಟಿಯಲ್ಲಿ 50 ಸೀಟ್ ಆದರೂ ಗೆಲ್ಲುತ್ತೇವೆ ಎಂಬ ಸಂಕಲ್ಪ ಇದೆ ಎಂದು ದೇವೇಗೌಡರು ಹೇಳಿದರು.

ನೆರೆ ಹಾನಿ ಪರಿಶೀಲನೆ : ಮುಖ್ಯಮಂತ್ರಿಗಳು ನೆರೆ ಹಾವಳಿ ಬಗ್ಗೆ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಅವರ ಮೇಲೆ ಆಪಾದನೆ ಮಾಡುವುದಿಲ್ಲ. ಆರು ಜಿಲ್ಲೆಗಳಲ್ಲಿ ರೈತರು ಬೆಳೆದ ಎಲ್ಲ ಬೆಳೆಗಳು ನಾಶ ಆಗಿದೆ. 50ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಸಿಎಂ ಅವರೇ ತಿಳಿಸಿ ಪರಿಹಾರ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಫೀಲ್ಡ್​​ಗೆ ಹೋಗಿ ಇಷ್ಟು ಪ್ರದೇಶ ಹಾನಿಯಾಗಿದೆ ಎಂದು ಗೊತ್ತು ಮಾಡಿ ಸಂಬಂಧಪಟ್ಟವರಿಗೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿಗಳು, ಡಿಸಿಗಳು ಮಾಡಬೇಕು ಎಂದು ಮಾಜಿ ಪ್ರಧಾನಿಗಳು ಒತ್ತಾಯಿಸಿದರು.

ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಆ ದಿಕ್ಕಿನಲ್ಲಿ ಕಾರ್ಯಾಚರಣೆ ಮಾಡುತ್ತಾರೆ ಎಂದು ಭಾವಿಸುತ್ತೇನೆ. 48 ತಾಸಿನಲ್ಲಿ ಅವರ ಉಸ್ತುವಾರಿ ಸಚಿವರು ಏನು ಮಾಡಿದ್ದಾರೆ ಎಂದು ಹೇಳಲಿ, ಬೆಳೆ ಹಾನಿ ಪ್ರದೇಶಕ್ಕೆ ಹೋಗಬೇಕು. ಮೂರು ನಾಲ್ಕು ದಿನ ಆದ ಮೇಲೆ ನಾನೇ ಕಲಬುರ್ಗಿಗೆ ಹೋಗುತ್ತೇನೆ. ಅಲ್ಲಿನ ವಾಸ್ತವ ಪರಿಶೀಲನೆ ಮಾಡುತ್ತೇನೆ. ನಾಲ್ಕಾರು ಕಡೆ ಭೇಟಿ ನೀಡುತ್ತೇನೆ. ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲಿಸುತ್ತೇನೆ. ಬಳಿಕ ವಾಸ್ತವಾಂಶವನ್ನು ಹೇಳುತ್ತೇನೆ ಎಂದು ದೇವೇಗೌಡರು ತಿಳಿಸಿದರು.

ನೆರೆ ಹಾವಳಿ ಮತ್ತು ಮಳೆ ಹಾನಿ ಸಂಬಂಧ ಹೆಚ್. ಡಿ. ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಧಾನಿಗೆ ಬೆಳೆ ಹಾನಿ ಬಗ್ಗೆ ನಾನು ಪತ್ರ ಬರೆಯುತ್ತೇನೆ. ಅವಶ್ಯಕತೆ ಬಿದ್ದರೆ ನಾನು ಕೂಡ ದಿಲ್ಲಿಗೆ ಹೋಗಿ ಭೇಟಿ ಆಗುತ್ತೇನೆ. ನಾನು ರಾಜಕೀಯ ಬೆರೆಸಲು ಹೋಗುವುದಿಲ್ಲ ಎಂದು ಗೌಡರು ಸ್ಪಷ್ಟಪಡಿಸಿದರು.

ಜನರ ತೀರ್ಮಾನ :
ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರವಾಗಿ ದೇವೇಗೌಡರು ಪ್ರತಿಕ್ರಿಯಿಸಿ
, ಬೇರೊಬ್ಬರ ಹೆಸರು ತೆಗೆದು ಚರ್ಚೆ ಮಾಡುವುದು ಬೇಡ. ನಾನು ಆ ವಿಚಾರದಲ್ಲಿ ಯಾವುದೇ ರೀತಿಯ ಹೇಳಿಕೆ ಕೊಡುವುದಿಲ್ಲ. ಅದರ ಹಿಂದೆ ಯಾವ ಶಕ್ತಿ ಇದೆ. ಅದರ ಬಗ್ಗೆ ಚರ್ಚೆ ಬೇಡ. ಯಾರು ಏನೇ ಮಾಡಿದರೂ ನಮ್ಮದು ಸಣ್ಣ ರಾಜಕೀಯ ಪಕ್ಷ. ಅದನ್ನು ಉಳಿಸಲು, ಬೆಳೆಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ ಎಂದು ಗೌಡರು ಮಾರ್ಮಿಕವಾಗಿ ನುಡಿದರು.

ನೀವು ಯಾರ ಹೆಸರು ಹೇಳುತ್ತಿದ್ದೀರಿ ಅವರ ಹೆಸರಿನ ಬಗ್ಗೆ ನಾನು ಮಾತನಾಡುವುದಿಲ್ಲ. ಕಳೆದ 20 ವರ್ಷಗಳ ಹಿಂದೆ ನನಗೆ ಅವರಿಗೆ ಚುನಾವಣೆ ಆಯ್ತು. ಅಲ್ಲಿಂದ ಇಲ್ಲಿವರೆಗೆ ಅವರ ಬಗ್ಗೆ ಏನೂ ಮಾತನಾಡುತ್ತಿಲ್ಲ. ನೀವು ಏನೇ ಹೇಳಿದರೂ ಅದನ್ನು ತಿರಸ್ಕಾರದ ಮನೋಭಾವದಿಂದ ನೋಡುವುದು ಒಳ್ಳೆಯದು. ಚುನಾವಣೆ ಬಂದಾಗ ಜನ ತೀರ್ಪು ಕೊಡುತ್ತಾರೆ. ಅಲ್ಲಿವರೆಗೆ ನೀವು ಕಾಯಬೇಕು ಎಂದು ಗೌಡರು ಕಿವಿ ಮಾತು ಹೇಳಿದರು.

ಆರೋಗ್ಯ ಸುಧಾರಿಸಿದೆ :
ಕುಮಾರಸ್ವಾಮಿ ನಾಲ್ಕು‌ತಿಂಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿಲ್ಲ. ಸ್ವಲ್ಪ ಆರೋಗ್ಯ ಸುಧಾರಿಸಿಕೊಳ್ಳಬೇಕಿತ್ತು. ಈಗ ಕುಮಾರಸ್ವಾಮಿ ಆರೋಗ್ಯ ಸಂಪೂರ್ಣ ಚೇತರಿಕೆ ಆಗಿದೆ. ವಿದೇಶದಿಂದ ಬಂದು ವೈದ್ಯರು ಪರೀಕ್ಷಿಸಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ ಗೌಡರು ಪಕ್ಷದ ಸಂಘಟನೆ ಮಾಡುತ್ತಿದ್ದೇನೆ, ಎಷ್ಟು ಬೇಕಾದರು ರಾಜಕೀಯದಲ್ಲಿ ಹೋರಾಡಲು ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಕೆಲ ದಿನಗಳ ಬಳಿಕ ಹೆಚ್​ಡಿ ಕುಮಾರಸ್ವಾಮಿ ಪ್ರವಾಸ ಆರಂಭಿಸಲಿದ್ದಾರೆ ಎಂದು ತಿಳಿಸಿದರು.


ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತ ಮೇಲೆ,‌ಚುರುಕಾಗಿ ಎಲ್ಲೆಡೆ ಓಡಾಡುತಿದ್ದಾರೆ. ಮೂರು ಬಾರಿ ಸೋತಿದ್ದರು, ಅನುಭವಿ ರಾಜಕಾರಣಿ ರೀತಿ ನಿಖಿಲ್ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆಯಲ್ಲಿ ನಾವು ಕನಿಷ್ಠ 50-60 ಸ್ಥಾ‌ನ‌ಗೆಲ್ಲಬೇಕು. ಅದಕ್ಕಾಗಿ ಸಭೆ ನಡೆಸಲು ತೀರ್ಮಾನ ಮಾಡಿದ್ದೇನೆ. ಮಹಿಳಾ ವಿಭಾಗದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನನ್ನ ಆರೋಗ್ಯ ಹದಗೆಟ್ಟಾಗ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ ಎಂದು ದೇವೇಗೌಡರು ತಿಳಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ