ಮೂವರ ಜೀವ ಉಳಿಸಿ ಅಪರೂಪದ ಸಾಧನೆ ಮೆರೆದ ಕೆಎಲ್ ಇ
ಬೆಳಗಾವಿ :ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಸಪ್ಟೆಂಬರ್ 2023ರಲ್ಲಿ ಒಂದರ ಹಿಂದೆ ಒಂದು ಹೀಗೆ ಕೇವಲ 12 ದಿನಗಳಲ್ಲಿ ಮೂರು ಲೀವರ್ ಕಸಿ ಮಾಡಿ ಸಾವಿನಂಚಿನಲ್ಲಿದ್ದ ಮೂವರ ಜೀವ ಉಳಿಸುವ ಅಪರೂಪದ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಮತ್ತೊಮ್ಮೆ ಸಾಧನೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 25 ವರ್ಷದ ಯುವಕ ದುರ್ಗೇಶ ಉಪ್ಪಾರ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾರಾಷ್ಟ್ರ ಜೈಸಿಂಗಪುರ ಸಾಕ್ಷಿ ಬಂಡಿವಡ್ಡರ (42), 25 ವರ್ಷದ ಯುವಕನೋರ್ವ ಮೆದುಳು ಮೃತಗೊಂಡ ನಂತರ ತಮ್ಮ ಅಂಗಾಂಗಳನ್ನು ದಾನ ಮಾಡಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬೆಲ್ಲದ ಬಾಗೇವಾಡಿ, ಚಿಕ್ಕಮಗಳೂರು ಹಾಗೂ ಕರೋಶಿಯ ರೋಗಿಗಳಿಗೆ ಲೀವರ್ ಕಸಿ ಮಾಡಲಾಗಿದೆ.
ಮೂವರು ಗುಣಮುಖರಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಗ್ಯಾಸ್ಟೊಎಂಟ್ರಾಲಾಜಿ ಮುಖ್ಯಸ್ಥ ಡಾ. ಸಂತೋಷ ಹಜಾರೆ ಹೇಳಿದ್ದಾರೆ.
ಅಂಗಾಂಗ ದಾನ ಮಾಡಿದ ಕುಟುಂಬ ಸದಸ್ಯರ ಕಾರ್ಯವನ್ನು ಶ್ಲಾಘಿಸಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು, ಓರ್ವ ವ್ಯಕ್ತಿಯು ನೀಡುವ ಅಂಗಾಂಗ ಇನ್ನೊಬ್ಬರಿಗೆ ಪ್ರೇರೆಪಿಸುತ್ತದೆ. ಅಲ್ಲದೇ ಇನ್ನೊಬ್ಬರ ಜೀವ ಉಳಿಸುತ್ತದೆ. ಈ ಭಾಗದ ಯಾವುದೇ ರೋಗಿಯು ಒಳ್ಳೆಯ ಗುಣಮಟ್ಟದ, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯಿಂದ ವಂಚಿತರಾಗಬಾರದು ಹಾಗೂ ವೈದ್ಯಕೀಯ ಸೇವೆಗಳೆಲ್ಲವನ್ನೂ ಕೈಗೆಟುಕುವ ದರದಲ್ಲಿ ಲಭಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೀವರ್ ಸೇರಿದಂತೆ ಅಂಗಾಂಗಗಳ ಕಸಿ ಮಾಡಲು ಅತ್ಯಾಧುನಿಕ ಬೃಹತ್ ವೈದ್ಯಕೀಯ ಮೂಲಸೌಕರ್ಯ, ತರಬೇತಿ ಪಡೆದ ವೃತ್ತಿನಿರತ ಕಾರ್ಯಪಡೆ, ನಿಖರವಾದ ಯೋಜನೆ, ಕಸಿ ನಂತರದ ತೀವ್ರ ನಿಗಾ ವಹಿಸಬೇಕಾಗಿರುತ್ತದೆ. ವೃತ್ತಿನಿರತ ತಂಡದ ಕಾರ್ಯಕ್ಕೆ ಆಡಳಿತಾತ್ಮಕ ಸಹಕಾರದ ಅಗತ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಅದೆಲ್ಲ ಇಲ್ಲಿ ಸಮ್ಮಿಳಿತಗೊಂಡಿದೆ. ಆದ್ದರಿಂದಲೇ ಕೇವಲ 12 ದಿನಗಳಲ್ಲಿ 3 ಲೀವರ್ ಕಸಿ ಮಾಡಲು ಸಾಧ್ಯವಾಗಿದೆ.
ಅದರಂತೆ ಕೇವಲ 10 ತಿಂಗಳಲ್ಲಿ 9 ಯಶಸ್ವಿ ಲೀವರ್ ಕಸಿ ಮಾಡಲಾಗಿದ್ದು, ಉತ್ತರ ಕರ್ನಾಟಕ ಮತ್ತು ಗೋವಾ ರಾಜ್ಯವನ್ನೊಳಗೊಂಡಂತೆ ಏಕೈಕ ಕೇಂದ್ರ. ಬೆಳಗಾವಿ- ಹುಬ್ಬಳ್ಳಿ-ಧಾರವಾಡ ಪೋಲೀಸರ ಸಹಕಾರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಸಿರು ಪಥದಲ್ಲಿ ಕೇವಲ 58 ನಿಮಿಷಗಳಲ್ಲಿ ಬೆಳಗಾವಿಗೆ ಅಂಗಾಂಗಗಳನ್ನು ತರಲು ಸಾಧ್ಯವಾಗುತ್ತಿದೆ. ಪೊಲೀಸರ ಕಾರ್ಯಕ್ಕೆ ನಮ್ಮದೊಂದು ಸಲಾಮ ಹಾಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಬೆಂಗಳೂರಿನ ಅಸ್ಟರ ಆಸ್ಪತ್ರೆಯ ಗ್ಯಾಸ್ಟೊಎಂಟ್ರಾಲಾಜಿ ಮತ್ತು ಉದರ ರೋಗ ವಿಭಾಗದ ಡಾ. ಸೋನಲ್ ಅಸ್ಥಾನಾ ಮತ್ತು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಡಾ. ಸಂತೋಷ ಹಜಾರೆ, ಲೀವರ ಕಸಿ ಶಸ್ತ್ರಚಿಕಿತ್ಸಕ ಡಾ. ಸುದರ್ಶನ ಚೌಗಲೆ ಅವರು ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದು, ಅರವಳಿಕೆ ತಜ್ಞವೈದ್ಯ ಡಾ ರಾಜೇಶ ಮಾನೆ ಮತ್ತು ಡಾ. ಮಂಜುನಾಥ ಪಾಟೀಲ ಅವರು ಸಹಕಾರ ನೀಡಿದರು. ಆಡಳಿತಾಧಿಕಾರಿ ಡಾ. ಬಸವರಾಜ ಬಿಜ್ಜರಗಿ, ಗೀತಾ ದೇಸಾಯಿ ಬಸವರಾಜ ಮಜತಿ ಅವರು ಸಹಕಾರ ನೀಡಿದರು.
ಯಶಸ್ವಿ ಕಸಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ ಅಭಿನಂದಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.