Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಆಗುಂಬೆ ಘಾಟ್ ನಲ್ಲಿ ಸಿಂಹಬಾಲದ ಕೋತಿಗಳ ಕಲರವ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಗುಂಬೆಯ 'ಸಿಂಗಳಿಕ'ರ ಭಿಕ್ಷಾಟನೆ 'ದಕ್ಷಿಣ ಭಾರತದ ಚಿರಪುಂಜಿ' ಎಂದೇ ಹೆಸರಾದ ಆಗುಂಬೆಯ ಘಾಟಿ ಪ್ರದೇಶದಲ್ಲಿ ಪ್ರಯಾಣಿಸುವವರಿಗೆ ಇತ್ತೀಚಿನ ದಿನಗಳಲ್ಲಿ ಒಂದು ಅಪರೂಪದ ದೃಶ್ಯ ಕಾಣಸಿಗುತ್ತಿದೆ. ದಟ್ಟ ಕಾಡಿನ ಮೇಲ್ಭಾಗದಲ್ಲಿ ಮಾತ್ರ ವಾಸಿಸುತ್ತಿದ್ದ, ಅತೀ ನಾಚಿಕೆ ಸ್ವಭಾವದ 'ಸಿಂಹಬಾಲದ ಕೋತಿಗಳು' (Lion-tailed Macaque) ಈಗ ರಸ್ತೆ ಬದಿಯ ತಡೆಗೋಡೆಗಳ ಮೇಲೆ ಕುಳಿತು ಪ್ರವಾಸಿಗರು ನೀಡುವ ಆಹಾರಕ್ಕಾಗಿ ಕಾಯುತ್ತಿವೆ.

14 ತಿರುವುಗಳಲ್ಲಿ ಇಂದು ಕೇಳಿಬರುತ್ತಿರುವುದು ಕೇವಲ ಪ್ರಕೃತಿಯ ಸೌಂದರ್ಯದ ಸದ್ದಲ್ಲ, ಬದಲಾಗಿ ಅಳಿವಿನ ಅಂಚಿನಲ್ಲಿರುವ 'ಸಿಂಹಬಾಲದ ಕೋತಿ'ಗಳ (Lion-tailed Macaque - LTM) ಮೌನ ಆರ್ತನಾದ. ಪಶ್ಚಿಮ ಘಟ್ಟಗಳ ಮಳೆಕಾಡಿನ ಕಿರೀಟಪ್ರಾಯವಾದ ಈ ಜೀವಿಗಳು ಪ್ರಾಥಮಿಕವಾಗಿ 'ಆರ್ಬೋರಿಯಲ್' ಜೀವಿಗಳು, ಅಂದರೆ ತಮ್ಮ ಜೀವನದ ಶೇ.99% ಸಮಯವನ್ನು ದಟ್ಟ ಅರಣ್ಯದ ಎತ್ತರದ ಮರಗಳ ಮೇಲೆಯೇ ಕಳೆಯುವಂತಹವು.

ಈಗ ರಸ್ತೆ ಬದಿಯ ತಡೆಗೋಡೆಗಳ ಮೇಲೆ ಕುಳಿತು ಪ್ರವಾಸಿಗರು ನೀಡುವ ಬಿಸ್ಕತ್ತು-ಚಿಪ್ಸ್‌ಗಾಗಿ ಕೈಯೊಡ್ಡಿ ನಿಂತು ಭಿಕ್ಷಾಟನೆ ಮಾಡುತ್ತಿರುವುದು ಕಂಡರೆ ಅದು ನಮ್ಮ ನಾಗರಿಕ ಸಮಾಜದ 'ನೈತಿಕ ದಿವಾಳಿತನ'ದ ಸಂಕೇತವಾಗಿದೆ.

ಇದು ಕೇವಲ ಒಂದು ಪ್ರಾಣಿಯ ನಡವಳಿಕೆಯ ಬದಲಾವಣೆಯಲ್ಲ, ಬದಲಾಗಿ ಒಂದು ಇಡೀ ಮಳೆಕಾಡಿನ ಪರಿಸರ ವ್ಯವಸ್ಥೆ ಅಪಾಯದಲ್ಲಿದೆ ಎಂಬುದರ ಸಂಕೇತವಾಗಿದೆ.

ಮನಃಶಾಸ್ತ್ರದ ದೃಷ್ಟಿಕೋನದಿಂದ ನೋಡುವುದಾದರೆ ಆಗುಂಬೆಯಲ್ಲಿ ಇಂದು ನಡೆಯುತ್ತಿರುವುದು ಕೇವಲ ಪ್ರಾಣಿಗಳಿಗೆ ಆಹಾರ ನೀಡುವ ಕ್ರಿಯೆಯಲ್ಲ; ಬದಲಾಗಿ ಪ್ರಾಣಿಗಳ ನೈಸರ್ಗಿಕ ವಿಕಾಸವನ್ನೇ ಬುಡಮೇಲು ಮಾಡುವ ಅಪಾಯಕಾರಿ ನಡವಳಿಕೆ. ನೈಸರ್ಗಿಕವಾಗಿ ಈ ಕೋತಿಗಳು ಮನುಷ್ಯರನ್ನು ಕಂಡರೆ ದೂರ ಓಡುವ 'Antropophobia' ಗುಣವನ್ನು ಹೊಂದಿರುತ್ತವೆ.

ಆದರೆ ಇಂದಿನ ಪ್ರವಾಸಿಗರು ತಮ್ಮ ವಿಕೃತ ಸಂತೋಷಕ್ಕಾಗಿ ಕೋತಿಗಳಂತೆ ಶಬ್ದ ಮಾಡುವುದು, ಅವುಗಳನ್ನು ರೇಗಿಸುವುದು ಮತ್ತು ಆಹಾರದ ಆಸೆ ತೋರಿಸಿ ಹತ್ತಿರ ಕರೆಯುವ ಮೂಲಕ ಅವುಗಳಲ್ಲಿನ ಸಹಜ ಭಯವನ್ನು ಅಳಿಸಿಹಾಕುತ್ತಿದ್ದಾರೆ. ಪದೇ ಪದೇ ಇಂತಹ ನಡವಳಿಕೆಗಳಿಗೆ ತುತ್ತಾಗುವ ಕೋತಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತವೆ. ಈ ಹತಾಶೆಯು ಅಂತಿಮವಾಗಿ ಮನುಷ್ಯರ ಮೇಲೆ ದಾಳಿ ಮಾಡುವ 'ಆಕ್ರಮಣಕಾರಿ ಪ್ರವೃತ್ತಿ'ಯಾಗಿ ಬದಲಾಗುತ್ತದೆ.

ಸಿಂಹಬಾಲದ ಕೋತಿಗಳು ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡುಗಳಿಗೆ ಮಾತ್ರ ಸೀಮಿತವಾಗಿರುವ ವಿಶಿಷ್ಟ ಪ್ರಭೇದ. ಇವುಗಳ ಮುಖದ ಸುತ್ತ ಇರುವ ಬೆಳ್ಳನೆಯ ಕೇಸರಿ ಮತ್ತು ಸಿಂಹದಂತಿರುವ ಬಾಲ ಇವುಗಳಿಗೆ ರಾಜಗಾಂಭೀರ್ಯವನ್ನು ತಂದುಕೊಟ್ಟಿದೆ. ಇವು ಕಾಡಿನ 'ಬಿತ್ತನೆಗಾರರು'. ವನ್ಯಜೀವಿ ಸಂಶೋಧಕರ ಪ್ರಕಾರ ಇವು ಪ್ರಾಥಮಿಕವಾಗಿ ಮರಗಳ ಮೇಲೆಯೇ ಬದುಕುವ ಜೀವಿಗಳು.

ಹವಾಮಾನ ಬದಲಾವಣೆ ಮತ್ತು ಕಾಡಿನ ಒತ್ತುವರಿಯಿಂದಾಗಿ ಇವುಗಳ ಆವಾಸಸ್ಥಾನ ಈಗಾಗಲೇ ಕುಗ್ಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಗುಂಬೆಯ ಘಾಟ್ ರಸ್ತೆಗಳಲ್ಲಿ ಇವು ನೆಲಕ್ಕಿಳಿದು ವಾಹನಗಳಿಗಾಗಿ ಕಾಯುತ್ತಿರುವುದು ಕಂಡಬರುತ್ತಿದೆ. ಇದು ಕೇವಲ ನಡವಳಿಕೆಯ ಬದಲಾವಣೆಯಲ್ಲ, ಬದಲಾಗಿ ಒಂದು ಇಡೀ ಪ್ರಭೇದದ ಪರಿಸರ ಪತನದ ಮುನ್ಸೂಚನೆಯಾಗಿದೆ. ಇಂತಹ ಸಂದರ್ಭದಲ್ಲಿ ಇವು ರಸ್ತೆಗೆ ಇಳಿಯುತ್ತಿರುವುದು ಇವುಗಳ ವಂಶವನ್ನೇ ನಾಶಮಾಡಬಲ್ಲದು.

ಇಲ್ಲಿ ಅತ್ಯಂತ ಆತಂಕಕಾರಿ ವಿಷಯವೆಂದರೆ 'ತಾಯಿ-ಮರಿಯ ಕಲಿಕೆ'ಯಲ್ಲಿ (Social Learning) ಆಗುತ್ತಿರುವ ಪಲ್ಲಟ. ನೈಸರ್ಗಿಕವಾಗಿ ತಾಯಿ ಕೋತಿಗಳು ತಮ್ಮ ಮರಿಗಳಿಗೆ ಕಾಡಿನ ಗಿಡಮೂಲಿಕೆಗಳನ್ನು ಗುರುತಿಸುವುದನ್ನು ಮತ್ತು ಇನ್ನು ಹತ್ತು ಹಲವು ಹಣ್ಣುಗಳನ್ನು ಶೋಧಿಸುವುದನ್ನು ಕಲಿಸಬೇಕುಆದರೆ ಇಂದು ಆಗುಂಬೆಯ ಘಾಟಿಯಲ್ಲಿ ತಾಯಿ ಕೋತಿಗಳು ಮರಿಗಳಿಗೆ ಪ್ಲಾಸ್ಟಿಕ್ ಚೀಲಗಳನ್ನು ಸೀಳುವುದನ್ನು ಮತ್ತು ವಾಹನಗಳನ್ನು ಬೆನ್ನಟ್ಟುವುದು ಹೇಗೆ ಎಂದು ಕಲಿಸುತ್ತಿವೆ.

ಸಂಸ್ಕರಿಸಿದ ಆಹಾರ ಸೇವನೆಯಿಂದ ಇವುಗಳಲ್ಲಿ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅಷ್ಟೇ ಅಲ್ಲದೆ, ವನ್ಯಜೀವಿ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ಪ್ರಕಾರ ರಸ್ತೆ ಬದಿಯಲ್ಲಿ ಕೇಂದ್ರೀಕೃತವಾಗುವುದರಿಂದ ಈ ಕೋತಿಗಳ ಗುಂಪಿನಲ್ಲಿ ಆಂತರಿಕ ಕಲಹಗಳು ಹೆಚ್ಚುತ್ತಿವೆ.

ನೈಸರ್ಗಿಕವಾಗಿ ಕಾಡಿನ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರಬೇಕಾದ ಈ ಕುಟುಂಬಗಳು ರಸ್ತೆಯ ಒಂದು ಸಣ್ಣ ಭಾಗದಲ್ಲಿ ಆಹಾರಕ್ಕಾಗಿ ಕಿತ್ತಾಡುತ್ತಿವೆ. ಇದು ಈ ಪ್ರಾಣಿಗಳ ಸಾಮಾಜಿಕ ರಚನೆಯನ್ನು ಸಡಿಲಗೊಳಿಸುತ್ತಿದೆ. ಪ್ರವಾಸಿಗರು ನೀಡುವ ಬಿಸ್ಕತ್ತು, ಚಿಪ್ಸ್ ಮತ್ತು ಸಂಸ್ಕರಿಸಿದ ಆಹಾರವು ಇವುಗಳಲ್ಲಿ 'ಫುಡ್ ಕಂಡೀಷನಿಂಗ್' ಎಂಬ ಗಂಭೀರ ಸಮಸ್ಯೆಯನ್ನು ಸೃಷ್ಟಿಸಿದೆ.



ಸಂಶೋಧನೆಗಳು ಹೇಳುವಂತೆ ಮನುಷ್ಯರ ಆಹಾರವು ಈ ವನ್ಯಜೀವಿಗಳಿಗೆ ಮಂದಗತಿಯ ವಿಷವಾಗಿದೆ. ಆಹಾರಕ್ಕಾಗಿ ರಸ್ತೆಗೆ ಬರುವ ಈ ಪ್ರಾಣಿಗಳು ವೇಗವಾಗಿ ಚಲಿಸುವ ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ. ಇವುಗಳ ಸಂತಾನೋತ್ಪತ್ತಿ ದರವು ಅತೀ ಕಡಿಮೆಯಿರುವುದರಿಂದ (ಸುಮಾರು 3-4 ವರ್ಷಕ್ಕೊಮ್ಮೆ ಒಂದು ಮರಿ) ಪ್ರತಿ ಅಪಘಾತವೂ ಈ ಪ್ರಭೇದವನ್ನು ಅಳಿವಿನ ಅಂಚಿಗೆ ಮತ್ತಷ್ಟು ಹತ್ತಿರ ತಳ್ಳುತ್ತಿದೆ.

ನೈಸರ್ಗಿಕ ಕೌಶಲ್ಯದ ನಾಶ - ಕಾಡಿನಲ್ಲಿ ಹಣ್ಣುಗಳನ್ನು ಹುಡುಕಿ ತಿನ್ನುವ ಶ್ರಮದಾಯಕ ಕೆಲಸವನ್ನು ಬಿಟ್ಟು ಸುಲಭವಾಗಿ ಸಿಗುವ ಮನುಷ್ಯರ ಆಹಾರಕ್ಕೆ ಇವು ಒಗ್ಗಿಕೊಳ್ಳುತ್ತಿವೆ. ಇದರಿಂದಾಗಿ ಈ ಕೋತಿಗಳು ಮರ ಹತ್ತುವ ಮತ್ತು ಆಹಾರ ಹುಡುಕುವ ತಮ್ಮ ಸಹಜ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ಸಿಂಗಳಿಕ ರಕ್ಷಣೆಗಾಗಿ ಸರ್ಕಾರ ಕರ್ನಾಟಕದ ಹೊಸನಗರ ತಾಲೂಕಿನ ಕಾರ್ಗಲ್ ಬಳಿ ರಕ್ಷಿತಾಭಯಾರಣ್ಯವನ್ನು ಮಿಸಲಿಟ್ಟಿದೆ ಅಂದಾಜು ಅಲ್ಲಿ 600 ಕ್ಕೂ ಹೆಚ್ಚು ಸಿಂಗಳಿಕಗಳು ಇದೇ ಎಂದು ಅಂದಾಜಿಸಲಾಗಿದೆ. ಇವು ಬಹಳ ಸೂಕ್ಷ್ಮ ಸ್ವಭಾವದ ಪ್ರಾಣಿಯಾಗಿದ್ದು ಕನಿಷ್ಠ 320 ಹಣ್ಣು ಹಂಪಲು ಇರುವ /ಗುರುತಿಸುವ ಪ್ರದೇಶದಲ್ಲಿ ಮಾತ್ರ ಹೆಚ್ಚು ಕಾಣ ಸಿಗುತ್ತದೆ ಎಂಬುದು ಪ್ರಕೃತಿ ವಿಸ್ಮಯ.

ನಮ್ಮಲಿ ಜನ ಎಮ್ಮೆ, ಹಸು, ನಾಯಿ, ಬೆಕ್ಕಿಗೂ ಅಭಯಾರಣ್ಯದ ಜೀವಿಗಳಿಗೂ ಇರುವ ವ್ಯತ್ಯಾಸವನ್ನು ಮರೆತಂತೆ ಇದೇ. ಇದನ್ನು ಸರ್ಕಾರ ಮತ್ತು ಅರಣ್ಯ ಇಲಾಖೆ ಬಹಳ ಗಂಭೀರವಾಗಿ ಗಮನಿಸಿ ಇನ್ನಷ್ಟು ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ.

ಈ ಬಿಕ್ಕಟ್ಟನ್ನು ಎದುರಿಸಲು ಸಮಗ್ರ ಮತ್ತು ದೀರ್ಘಕಾಲದ ಕ್ರಮಗಳ ಅಗತ್ಯವಿದೆ. ಕೇವಲ ಪ್ರವಾಸಿಗರಿಗೆ ಎಚ್ಚರಿಕೆ ನೀಡುವುದಷ್ಟೇ ಸಾಕಾಗುವುದಿಲ್ಲ; ಅರಣ್ಯ ಇಲಾಖೆಯು 'ಕೆನೋಪಿ ಬ್ರಿಡ್ಜ್‌ಗಳ'  ಮೂಲಕ ಈ ಪ್ರಾಣಿಗಳು ನೆಲಕ್ಕಿಳಿಯದಂತೆ ವ್ಯವಸ್ಥೆ ಮಾಡಬೇಕು. ವೈಜ್ಞಾನಿಕವಾಗಿ ಸಿದ್ಧಪಡಿಸಿದ ಮಾಹಿತಿ ಫಲಕಗಳು ಪ್ರವಾಸಿಗರಲ್ಲಿ ಇವುಗಳ ಜೈವಿಕ ಮಹತ್ವವನ್ನು ಸಾರಬೇಕು.

ಸಮುದಾಯ ಮಟ್ಟದಲ್ಲಿ ಆಗುಂಬೆಯ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸಿ, ಅವರನ್ನು 'ವನ್ಯಜೀವಿ ಕಾವಲುಗಾರರನ್ನಾಗಿ' ರೂಪಿಸಬೇಕು. ನಮ್ಮ ಕ್ಷಣಿಕ ಸಂತೋಷಕ್ಕಾಗಿ ನಾವು ನೀಡುವ ಒಂದು ತುತ್ತು ಆಹಾರ, ಪಶ್ಚಿಮ ಘಟ್ಟದ ಈ ಅದ್ಭುತ ಜೀವಿಗಳ ಸ್ವಾತಂತ್ರ್ಯ ಮತ್ತು ಅಸ್ತಿತ್ವವನ್ನೇ ಕಸಿದುಕೊಳ್ಳುತ್ತಿದೆ ಎಂಬ ಸತ್ಯ ನಮಗೆ ಅರಿವಾಗಬೇಕಿದೆ.

ಆಗುಂಬೆಯ ಮಳೆಕಾಡುಗಳು ಈ ಸಿಂಹಬಾಲದ ಕೋತಿಗಳಿಲ್ಲದೆ ಮೌನವಾದರೆ ಅದು ನಮ್ಮ ಪರಿಸರ ವ್ಯವಸ್ಥೆಗೆ ತುಂಬಲಾರದ ನಷ್ಟವಾಗಲಿದೆ. ನಮ್ಮ ಕ್ಷಣಿಕ ಸಂತೋಷಕ್ಕಾಗಿ ನಾವು ನೀಡುವ ಒಂದು ತುತ್ತು ಆಹಾರ, ಪಶ್ಚಿಮ ಘಟ್ಟದ ಈ ಅದ್ಭುತ ಜೀವಿಗಳ ಸ್ವಾತಂತ್ರ್ಯ ಮತ್ತು ಅಸ್ತಿತ್ವವನ್ನೇ ಕಸಿದುಕೊಳ್ಳುತ್ತಿದೆ ಎಂಬ ಸತ್ಯ ನಮಗೆ ಅರಿವಾಗಬೇಕಿದೆ. ನಾವು ಪ್ರಕೃತಿಯ ಅತಿಥಿಗಳು ಮಾತ್ರ, ಮಾಲೀಕರಲ್ಲ ಎಂಬುದನ್ನು ನೆನಪಿಟ್ಟುಕೊಳ್ಳೋಣ.
ಲೇಖನ ಬರಹ : ಮಂಜುನಾಥ್.ಎಸ್
, ಸಹಾಯಕ ಪ್ರಾಧ್ಯಾಪಕರು ಮತ್ತು ಮನಃಶಾಸ್ತ್ರಜ್ಞರು, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ