ಮೀಸಲಾತಿ ವಿಚಾರದಲ್ಲಿ ರಾಜಕಾರಣ ಬೇಡ: -ಶಾಸಕ ಟಿ.ರಘುಮೂರ್ತಿ
ಚಿತ್ರದುರ್ಗ: ಕೇಂದ್ರ ಸರ್ಕಾರ ರಾಜಕಾರಣ ಮಾಡದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್ (ಒಂಬತ್ತನೇ ಅನುಸೂಚಿ)ಗೆ ಸೇರಿಸಿ ನ್ಯಾಯ ಒದಗಿಸುವುದನ್ನು ಬಿಟ್ಟು ರಾಜಕಾರಣ ಮಾಡಲು ಹೊರಟಿದೆ ಎಂದು ಕೇಂದ್ರದ ವಿರುದ್ಧ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಮಂಡಲದ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿನ್ನು 2023ರಲ್ಲಿ ಪರಿಶಿಷ್ಟ ಜಾತಿ 15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ 3 ರಿಂದ 7ಕ್ಕೆ ಮೀಸಲಾತಿ ರಾಜ್ಯದಲ್ಲಿ ಜಾರಿಯಲ್ಲಿತ್ತು. ಈಚೆಗೆ ಹೈಕೋರ್ಟ್ನಲ್ಲಿ ದಾವೆ ಹೂಡಿರುವುದರಿಂದ ಮೀಸಲಾತಿ ಹೆಚ್ಚಳಕ್ಕೆ ತಡೆಯಾಗಿ ಸದ್ಯ ಹಳೆ ಮೀಸಲಾತಿ ಜಾರಿಯಲ್ಲಿದೆ.
ಕಳೆದ ಸರ್ಕಾರದಲ್ಲಿ ಒಮ್ಮೆ ಮತ್ತು ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಲು ಪ್ರಸ್ತಾವನೆ ಕಳಿಸಿದರೂ ಸಹ ಕೇಂದ್ರ ಸರ್ಕಾರ ಮಾತ್ರ ಸೇರಿಸಲು ಮನಸ್ಸು ಮಾಡುತ್ತಿಲ್ಲ ಎಂದರು.
ರಾಜ್ಯ ಸರ್ಕಾರ ಪ್ರಸ್ತುತ 50,432 ಉದ್ಯೋಗ ಭರ್ತಿ ಮಾಡುತ್ತಿದೆ. ಈ ಸಂದರ್ಭದಲ್ಲಿ ಮೀಸಲಾತಿ ಶೇ.24 ರಂತೆ ಭರ್ತಿ ಮಾಡಿದರೆ 14,543 ಹುದ್ದೆಗಳು ದೊರೆಯುತ್ತವೆ. ಮೀಸಲಾತಿ ಶೇ.18 ರಂತೆ ಭರ್ತಿ ಮಾಡಿದರೆ 11,156 ಮಾತ್ರ ದೊರೆಯುವ ಜೊತೆಗೆ 3087 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರು ಉದ್ಯೋಗದಿಂದ ವಂಚಿತರಾಗುತ್ತಾರೆ.
ಕೇಂದ್ರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಲಿ ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರ ಬದುಕಲ್ಲಿ ಆಟವಾಡುವುದು ಬಿಟ್ಟು 2023 ರಿಂದ ಪ್ರಸ್ತಾವನೆಯನ್ನು ಹಾಗೆಯೇ ಇಟ್ಟುಕೊಂಡಿರುವ ಕೇಂದ್ರ ಸರ್ಕಾರ ಕೂಡಲೇ ಸಂವಿಧಾನದ 9 ಶೆಡ್ಯೂಲ್ ಗೆ ಸೇರಿಸುವ ಕೆಲಸ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಸಂದರ್ಭದಲ್ಲಿ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಸೇರಿ ಹಲವು ಮಂತ್ರಿಗಳು ಈಗ ಸಂಸದರಾಗಿದ್ದು, ಪರಿಶಿಷ್ಟರ ಬದುಕಿನಲ್ಲಿ ರಾಜಕಾರಣ ಮಾಡದೇ ಕೇಂದ್ರ ಸರ್ಕಾರಕ್ಕೆ 9 ಶೆಡ್ಯೂಲ್ಗೆ ಸೇರಿಸಲು ಶ್ರಮಿಸಬೇಕು. ಸದ್ಯ ಮೀಸಲಾತಿ ಸಮಸ್ಯೆಯಿಂದ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಯುವಕರಿಗೆ ಮೆಡಿಕಲ್, ಇಂಜಿನಿಯರಿಂಗ್ ಸೇರಿ ಎಲ್ಲಾ ಕೋರ್ಸ್ ಮತ್ತು ಉದ್ಯೋಗದಿಂದ ವಂಚಿತರಾಗುತ್ತಿದ್ದು ಕೂಡಲೇ ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ನಮ್ಮ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್, ಗಾಂಧೀಜಿಯ ಕನಸು, ಸ್ವಾವಲಂಬನೆ, ಬುದ್ದನ ಕರುಣೆ, ಅಂಬೇಡ್ಕರ್ ಸಾಮಾಜಿಕ ನ್ಯಾಯ, ಬಸವಣ್ಣನವರು ಕಾಯಕ ನಿμÉ್ಠ ಸೇರಿ ಎಲ್ಲಾ ಇಲಾಖೆಗಳಿಗೂ ನಮ್ಮ ಬಜೆಟ್ನಲ್ಲಿ ನ್ಯಾಯ ಒದಗಿಸಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕಾರ 22 ಸಾವಿರ ಕೋಟಿಯಿಂದ 16 ಸಾವಿರ ಕೋಟಿಗೆ ಇಳಿಸಿ 5300 ಕೋಟಿ ನೀಡುತ್ತೇವೆ ಎಂದು ತಿಳಿಸಿದ್ದರು. ಇದನ್ನು ಪ್ರಸ್ತುತ ಕೇಂದ್ರದ ತಾಂತ್ರಿಕ ಸಲಹಾ ಸಮಿತಿ ಭದ್ರಾ ಯೋಜನೆಯ ಮೊತ್ತವನ್ನು ಪುನರ್ ಪರಿಶೀಲಿಸಿ ಭದ್ರಕ್ಕೆ 6 ಸಾವಿರ ಕೋಟಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡಿರುವ ಚಿತ್ರದುರ್ಗ ಶಾಖಾ ಕಾಲುವೆ, 157 ಕೆರೆ ತುಂಬಿಸುವುದು, ಫೀಡರ್ ಚಾನಲ್ ಮುಗಿಸುತ್ತೇವೆ ಮತ್ತು 2027-2028ಕ್ಕೆ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಅನುದಾನ ಒದಗಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಚಿತ್ರದುರ್ಗ ಐತಿಹಾಸಿಕ ನಗರವಾಗಿದ್ದು, ಕೇಂದ್ರದ ಗೃಹ ಸಚಿವರು 2018ರ ಚುನಾವಣೆಯಲ್ಲಿ ದುರ್ಗದಲ್ಲಿ ಮದಕರಿನಾಯಕರ ಕುರಿತ ಥೀಮ್ ಪಾರ್ಕ್ ಮಾಡುತ್ತೇವೆ ಎಂದು ಮಾತು ಕೊಟ್ಟು ಇಲ್ಲಿಯವರೆಗೂ ಯಾವ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮದಕರಿನಾಯಕ ಥೀಮ್ ಪಾರ್ಕ್ ಮಾಡಲು ಅಗತ್ಯ ಸಹಕಾರ ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಚಳ್ಳಕೆರೆ ಕ್ಷೇತ್ರದ ಸಾಣಿಕೆರೆ 93 ಎಕರೆ ಜಾಗ ಮೀಸಲಿದ್ದು, ಕೃಷಿ ಸಂಶೋಧನಾ ಕೇಂದ್ರ ಮಾಡಬೇಕು. ಪ್ರತಿ ವರ್ಷ ದುರ್ಗೋತ್ಸವ ಆಚರಣೆ, ಅಡಿಕೆ ಮತ್ತು ತೆಂಗು ಬೆಳೆಗೆ ಪರಿಹಾರ 6 ರಿಂದ 12 ಸಾವಿರಕ್ಕೆ ಹೆಚ್ಚಿಸಬೇಕು. ರಾಜ್ಯಕ್ಕೆ ನೀಡಿರುವ ಒಂದು ಲಕ್ಷ ಮನೆಗಳನ್ನು ಸರ್ಕಾರ ಎರಡು ಲಕ್ಷಕ್ಕೆ ಹೆಚ್ಚಳ ಮಾಡಬೇಕು. ಆಶಾ ಕಾರ್ಯಕರ್ತೆಯರಿಗೆ ಪ್ರತಿ ವರ್ಷ ಸಂಬಳ ಹೆಚ್ಚಳ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಒತ್ತಾಯಿಸಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.