ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಗೈರುಹಾಜರಾಗಿರುವ ವಿಚಾರವು ಕರಾವಳಿಯಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ನೆಹರೂ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಜಮೀರ್ ಪರ ಬ್ಯಾಟಿಂಗ್ ಮಾಡಿದರೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಪತ್ರದ ಪದಗಳನ್ನು ಹಿಡಿದು ರಾಜಕೀಯ ಮಾಡಬೇಡಿ: ಯು.ಟಿ. ಖಾದರ್
ಸಚಿವ ಜಮೀರ್ ಅಹ್ಮದ್ ಅವರ ನಿಷ್ಠೆ ಹಾಗೂ ದೇಶಪ್ರೇಮದ ಬಗ್ಗೆ ಯಾರೂ ಸಂಶಯ ಪಡುವಂತಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಖಾದರ್, "ಅನಿವಾರ್ಯ ಕಾರಣಗಳಿಂದಾಗಿ ಅವರಿಗೆ ಇಂದಿನ ಸಮಾರಂಭಕ್ಕೆ ಬರಲು ಸಾಧ್ಯವಾಗಿಲ್ಲ. ಈ ಕುರಿತು ಅವರು ಮುಂಚಿತವಾಗಿಯೇ ಅಸಹಾಯಕತೆ ವ್ಯಕ್ತಪಡಿಸಿ ಪತ್ರ ರವಾನಿಸಿದ್ದಾರೆ. ಆ ಪತ್ರದ ಹಿಂದಿರುವ ಸದುದ್ದೇಶವನ್ನು ಅರ್ಥಮಾಡಿಕೊಳ್ಳದೆ, ಕೆಲವೇ ಕೆಲವು ಪದಗಳನ್ನು ಮುಂದಿಟ್ಟುಕೊಂಡು ಅಪಾರ್ಥ ಕಲ್ಪಿಸುವುದು ಮತ್ತು ರಾಜಕೀಯ ಲಾಭ ಪಡೆಯಲು ಯತ್ನಿಸುವುದು ಸರಿಯಲ್ಲ" ಎಂದರು. ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಖಾತೆ ಹಂಚಿಕೆ ಅಸಮಾಧಾನದ ವದಂತಿಗಳನ್ನು ತಳ್ಳಿಹಾಕಿದರು.
ಅಡಿಕೆ ಬೆಳೆಗಾರರಿಗೆ ತೊಂದರೆಯಿಲ್ಲ
ಪಾನ್ ಮಸಾಲ ಹಾಗೂ ತಂಬಾಕು ನಿಷೇಧದ ಬಗ್ಗೆ ಸ್ಪಷ್ಟನೆ ನೀಡಿದ ಖಾದರ್, "ನಿಕೋಟಿನ್ ಮತ್ತು ಗುಟ್ಕಾ ಬೆರೆಸಿದ ಪಾನ್ ಮಸಾಲ ಮಾರಾಟಕ್ಕೆ ಮಾತ್ರ ತಡೆ ನೀಡಲಾಗಿದೆ. ಶುದ್ಧ ಪಾನ್ ಮಸಾಲ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಇದರಿಂದ ಅಡಿಕೆ ಬೆಳೆಗಾರರಿಗೆ ಅಥವಾ ಮಾರುಕಟ್ಟೆಗೆ ಕಿಂಚಿತ್ತೂ ತೊಂದರೆಯಾಗದು. 2014ರಲ್ಲಿ ಗುಟ್ಕಾ ಬ್ಯಾನ್ ಮಾಡಿದಾಗಲೂ ಇಂತಹ ಅಪಪ್ರಚಾರ ನಡೆದಿತ್ತು, ಆದರೆ ಅಡಿಕೆ ಧಾರಣೆ ಕುಸಿಯಲಿಲ್ಲ. ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ" ಎಂದು ನುಡಿದರು.