
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆ.ಆರ್.ಡಿ.ಸಿ.ಎಲ್ ವತಿಯಿಂದ ಕೈಗೊಳ್ಳಬೇಕಿರುವ ರಸ್ತೆ ಅಗಲೀಕರಣ, ಗ್ರೇಡ್ ಸೆಪರೇಟರ್ ಹಾಗೂ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳ ಭೂಸ್ವಾಧೀನ ಮತ್ತು ಟಿ.ಡಿ.ಆರ್. ಪ್ರಕ್ರಿಯೆಗೆ ಸಂಬಂಧಿಸಿದ ಜಟಿಲತೆಯನ್ನು ಬಗೆಹರಿಸಿ ಅಭಿವೃದ್ದಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವ ಸಂಬಂಧ *ಆಯುಕ್ತರಾದ ಡಿ.ಎಸ್.ರಮೇಶ್* ರವರು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಭೆಯನ್ನು ನಡೆಸಿದರು.
*ಕಾಡುಗೋಡಿ ಹೆಚ್ಚುವರಿ ರೈಲ್ವೆ ಮೇಲ್ಸೇತುವೆ ಕಾಮಗಾರಿ*
ಕಾಡುಗೋಡಿ ಹೆಚ್ಚುವರಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ತೊಡಕುಗಳ ಬಗ್ಗೆ ಆಯುಕ್ತರು ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿದರು, ಅಗತ್ಯವಿರುವ ಭೂಮಿಯನ್ನು ಸ್ವತ್ತಿನ ಮಾಲೀಕರ ಮನವೊಲಿಸುವ ಮೂಲಕ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ವರ್ತೂರು ಕೋಡಿಯಿಂದ ವರ್ತೂರು ಗ್ರಾಮದವರೆಗೆ ರಸ್ತೆ ಅಗಲೀಕರಣ*
ವರ್ತೂರು ಕೋಡಿಯಿಂದ ವರ್ತೂರು ಗ್ರಾಮದವರೆಗಿನ ಪರಿಷ್ಕೃತ ಮಹಾಯೋಜನೆಯಂತೆ 45.00ಮೀ ಅಗಲದ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ 14 ಸ್ವತ್ತುಗಳ ಮಾಲೀಕರಿಂದ ರಸ್ತೆ ಅಗಲೀಕರಣಕ್ಕೆ ಅವಶ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸುವ ಸಲುವಾಗಿ ಮಾಲೀಕರ ಮನವೊಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
*ಆರ್.ಡಿ. ಲ್ಯಾಂಡ್ ವಶಕ್ಕೆ ಪಡೆಯಿರಿ*
ವಿನಾಯಕ ಥಿಯೇಟರ್ ಬಳಿ ರಸ್ತೆ ಅಗಲೀಕರಣಕ್ಕಾಗಿ 143 ಸ್ವತ್ತುಗಳನ್ನು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಆ ಪೈಕಿ ಪರಿತ್ಯಾಜನ ಪತ್ರ (ಆರ್.ಡಿ ಲ್ಯಾಂಡ್) ಆಗಿರುವ ಸ್ವತ್ತುಗಳನ್ನು ಈ ಕೂಡಲೇ ವಶಕ್ಕೆ ಪಡೆದು ಅಭಿವೃದ್ದಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ಜಂಟಿ ಸರ್ವೆಗೆ ಸೂಚನೆ*

ಕಾಡುಗೋಡಿ ಗ್ರಾಮದ ಸರ್ವೆ ಸಂಖ್ಯೆ 307 ಮತ್ತು 308 ರಲ್ಲಿರುವ ಸರ್ಕಾರಕ್ಕೆ ಸೇರಿರುವ ಸ್ವತ್ತು ಇದ್ದು, ಬೆಂಗಳೂರು ಪೂರ್ವ ತಾಲ್ಲೂಕ್ ಹಾಗೂ ನಗರ ಪಾಲಿಕೆಯ ಭೂ ದಾಖಲೆಗಳು ಇಲಾಖೆ ಜಂಟಿಯಾಗಿ ಸ್ವತ್ತಿನ ಮಾಲೀಕರ ಸಮ್ಮುಖದಲ್ಲಿ ಸಮೀಕ್ಷೆ ನಡೆಸಿ ಇನ್ನೆರಡು ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ರಸ್ತೆ ಅಗಲೀಕರಣ*
ಕಾಡುಗೋಡಿ ಗ್ರಾಮದ ಸರ್ವೆ ಸಂಖ್ಯೆ 271ರಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವದ ದಾಖಲೆಗಳನ್ನು ಪರಿಶೀಲಿಸಿ ಸ್ವತ್ತಿನ ಮಾಲೀಕರೊಂದಿಗೆ ರಸ್ತೆ ಅಗಲೀಕರಣಕ್ಕೆ ಅವಶ್ಯವಿರುವ ಜಾಗವನ್ನು ಭೂಸ್ವಾಧೀನ ಪಡೆಯಲು ಮನವೊಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
*ವರ್ತೂರು ಕೋಡಿ ಗ್ರೇಡ್ ಸೆಪರೇಟರ್*
ವರ್ತೂರು ಕೋಡಿ ಗ್ರೇಡ್ ಸೆಪರೇಟರ್ ಕಾಮಗಾರಿಗೆ ಸಂಬಂಧಿಸಿದಂತೆ 11 ಸ್ವತ್ತುಗಳ ಮಾಲೀಕರ ಮನವೊಲಿಸುವ ಸಂಬಂಧ ಮಾಲೀಕರೊಂದಿಗೆ ಸಭೆಯನ್ನು ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆ.ಆರ್.ಡಿ.ಸಿ.ಎಲ್ ವತಿಯಿಂದ ಕೈಗೊಳ್ಳಬೇಕಿರುವ ರಸ್ತೆ ಅಗಲೀಕರಣ, ಗ್ರೇಡ್ ಸೆಪರೇಟರ್ ಹಾಗೂ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳ ಭೂಸ್ವಾಧೀನ ಮತ್ತು ಟಿ.ಡಿ.ಆರ್. ಪ್ರಕ್ರಿಯೆಗೆ ಸಂಬಂಧಿಸಿದ ಜಟಿಲತೆಯನ್ನು ಬಗೆಹರಿಸಿಕೊಂಡು ಸಮನ್ವಯದೊಂದಿಗೆ ಅಭಿವೃದ್ದಿ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಆಯುಕ್ತರು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಇಂದು ನಡೆದ ಆಯುಕ್ತರ ಸಭೆಯಲ್ಲಿ ಅಪರ ಆಯುಕ್ತರು(ಕಂದಾಯ) ಪ್ರಜ್ಞಾ ಅಮ್ಮೆಂಬಳ, ಜಂಟಿ ಆಯುಕ್ತರಾದ ಡಾ.ದಾಕ್ಷಾಯಿಣಿ.ಕೆ, ಕೆ.ಆರ್.ಡಿ.ಸಿ.ಎಲ್ ಮುಖ್ಯಅಭಿಯಂತರರು ಮತ್ತು ಅಧಿಕಾರಿಗಳು, ನಗರ ಪಾಲಿಕೆಯ ಅಧಿಕಾರಿಗಳು ಮತ್ತು ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.