Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ವಿಶೇಷ ಸಂಸತ್‌ ಕಲಾಪಕ್ಷೆ ಕ್ಷಣಗಣನೆ

 

ನವದೆಹಲಿ:
ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ತೆರೆ ಬಿದ್ದು ಒಂದೂವರೆ ತಿಂಗಳು ಪೂರ್ಣಗೊಳ್ಳುವ ಮುನ್ನವೇ ಇಂದಿನಿಂದ ಐದು ದಿನಗಳ ವಿಶೇಷ ಸಂಸತ್‌ ಕಲಾಪ ಆರಂಭವಾಗಲಿದ್ದು, ದೇಶಾದ್ಯಂತ ತೀವ್ರ ಕುತೂಹಲ, ಕಾತರಕ್ಕೆ ಕಾರಣವಾಗಿದೆ. ಸಂಸತ್ತಿನ 75 ವರ್ಷಗಳ ಹಾದಿಯ ಬಗ್ಗೆ ಚರ್ಚೆ ಹಾಗೂ ನಾಲ್ಕು ಮಸೂದೆ ಮಂಡನೆ ಮಾಡುವ ಉದ್ದೇಶವನ್ನು ಈ ವಿಶೇಷ ಅಧಿವೇಶನದಲ್ಲಿ ಹೊಂದಿರುವುದಾಗಿ ಸರ್ಕಾರ ಹೇಳುತ್ತಿದೆಯಾದರೂ, ಅಚ್ಚರಿಯ ನಿರ್ಧಾರಗಳನ್ನು ಕೈಗೊಳ್ಳುವ ಉದ್ದೇಶದಿಂದಲೇ ಈ ಕಲಾಪವನ್ನು ಸರ್ಕಾರ ಕರೆದಿದೆ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಮಹಿಳಾ ಮೀಸಲು ಮಸೂದೆ, ಒಂದು ದೇಶ ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆಯಂತಹ ಮಹತ್ವದ ತೀರ್ಮಾನವನ್ನು ಈ ಅಧಿವೇಶನದಲ್ಲಿ ಸರ್ಕಾರ ತೆಗೆದುಕೊಳ್ಳಬಹುದು ಎಂಬ ವದಂತಿ ದಟ್ಟವಾಗಿದೆ. ಇದೇ ವೇಳೆ, ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿರುವ ಹೊಸ ಸಂಸತ್‌ ಭವನಕ್ಕೆ ಸಂಸದೀಯ ಕಲಾಪ ಸ್ಥಳಾಂತರವಾಗಬಹುದು ಎನ್ನಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ, ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ಜಗದೀಪ್‌ ಧನಕರ್‌ ಅವರು ನಿನ್ನೆ ಹೊಸ ಸಂಸತ್‌ ಭವನದ ಮುಂಭಾಗದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದಾರೆ. ಉತ್ತರ ಭಾರತದಲ್ಲಿ ಸೆ.19ರ ಮಂಗಳವಾರ ಗಣೇಶ ಚರ್ತುರ್ಥಿ ಇದ್ದು ಅಂದೇ ನೂತನ ಸಂಸತ್‌ ಭವನದಲ್ಲಿ ಮೊದಲ ಕಾರ್ಯ ಕಲಾಪ ಆರಂಭವಾಗಲಿದೆ ಎಂದು ಹೇಳಲಾಗಿದೆಯಾದರೂ ಈ ಕುರಿತು ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈ ಮಧ್ಯೆ, ಕೇಂದ್ರ ಸರ್ಕಾರ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಭಾನುವಾರ ಸರ್ವಪಕ್ಷಗಳ ಸಭೆ ನಡೆಸಿ, ಕಾರ್ಯಕಲಾಪಗಳ ಕುರಿತು ವಿವಿಧ ಪಕ್ಷಗಳ ಸದನದ ನಾಯಕರಿಗೆ ಕೆಲವೊಂದು ವಿವರಣೆ ನೀಡಿ, ಅಭಿಪ್ರಾಯಗಳನ್ನು ಪಡೆದಿದೆ.

 

ಸಂವಿಧಾನ ರಚನಾ ಸಮಿತಿಯಿಂದ ಇಲ್ಲಿವರೆಗೆ 75 ವರ್ಷಗಳಲ್ಲಿ ಸಂಸತ್‌ ನಡೆದು ಬಂದ ಹಾದಿಯ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚೆಯಾಗಲಿದೆ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ವಿಧೇಯಕ, ವಕೀಲರ (ತಿದ್ದುಪಡಿ) ಮಸೂದೆ, ಅಂಚೆ ಇಲಾಖೆ ಮಸೂದೆ ಸೇರಿ 4 ಮಸೂದೆಗಳನ್ನು ಮಂಡಿಸುವುದಾಗಿ ಸರ್ಕಾರ ಹೇಳಿದೆ. ಆದಾಗ್ಯೂ ಅಧಿವೇಶನದ ಸಂದರ್ಭದಲ್ಲಿ ಅಜೆಂಡಾದಲ್ಲಿ ಇಲ್ಲದ ಹೊಸ ಮಸೂದೆಗಳು ಅಥವಾ ವಿಷಯಗಳನ್ನು ಮಂಡಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಸಾಮಾನ್ಯವಾಗಿ ವರ್ಷಕ್ಕೆ 3 ಸಂಸತ್‌ ಅಧಿವೇಶನಗಳು ನಡೆಯುತ್ತವೆ. ಜನವರಿಯಲ್ಲಿ ಬಜೆಟ್‌, ಜುಲೈ- ಆಗಸ್ಟ್‌ನಲ್ಲಿ ಮುಂಗಾರು, ವರ್ಷಾಂತ್ಯಕ್ಕೆ ಚಳಿಗಾಲದ ಅಧಿವೇಶನ ನಡೆಯುತ್ತವೆ. ಒಂದರಿಂದ ಮತ್ತೊಂದು ಅಧಿವೇಶನಕ್ಕೆ ಆರು ತಿಂಗಳಿಗಿಂತ ಅಧಿಕ ಅಂತರವಿರಬಾರದು ಎಂಬ ನಿಯಮವಿದೆ.

ದೆಹಲಿಯಲ್ಲಿ ನಿರ್ಮಾಣವಾಗಿರುವ ಹೊಸ ಸಂಸತ್‌ ಭವನದಲ್ಲಿ ಇದೇ ಮೊದಲ ಬಾರಿ ಭಾನುವಾರ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸ್ಪೀಕರ್‌ ಓಂ ಬಿರ್ಲಾ ಉಪಸ್ಥಿತರಿದ್ದರು. ವರ್ಷದ 365 ದಿನಗಳ ಕಾಲವೂ ಈ ಧ್ವಜ ಸಂಸತ್ತಿನ 'ಗಜ ದ್ವಾರದಲ್ಲಿ' ಹಾರಾಡಲಿದೆ.

ಇಂದಿನಿಂದ 5 ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಈ ನಿಮಿತ್ತ ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಕೆಲವು ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದೆ. ಇದರಿಂದ ಅಧಿವೇಶನ ರಂಗೇರುವ ಸಾಧ್ಯತೆ ಇದೆ.

ಲೋಕಸಭೆಯಲ್ಲಿ ಸದನದ ಉಪನಾಯಕರೂ ಆಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ವಿಪಕ್ಷಗಳು ಒಗ್ಗಟ್ಟಾಗಿ ಒತ್ತಾಯಿಸಿದವು ಎಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು. ಈ ಮೂಲಕ ಮಸೂದೆ ಇದೇ ಅಧಿವೇಶನದಲ್ಲಿ ಮಂಡನೆ ಆಗಬಹುದು ಎಂಬ ಆಸೆಯನ್ನು ಜೀವಂತವಾಗಿ ಉಳಿಸಿದರು.

ಈ ಮಸೂದೆಯು ಸಂಸತ್ತು ಹಾಗೂ ವಿಧಾನಮಂಡಲಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲನ್ನು ಒದಗಿಸುತ್ತದೆ. ಮೂಲಗಳ ಪ್ರಕಾರ, ಈ ಶೇ.33 ಮೀಸಲಲ್ಲೇ ಎಸ್ಸಿಎಸ್ಟಿ ಹಾಗೂ ಹಿಂದುಳಿದ ಮಹಿಳೆಯರಿಗೆ ಮೀಸಲು ನೀಡಬೇಕು ಎಂದು ಪಕ್ಷಗಳು ಒತ್ತಾಯಿಸಿದವು. ಹೀಗಾಗಿ ಮಂಡನೆ ಬಗ್ಗೆ ಕೂಡಲೇ ಏನೂ ಹೇಳದೇ ಸರ್ಕಾರ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ ಎನ್ನಲಾಗಿದೆ. ಸಭೆಯಲ್ಲಿ ರಾಜ್ಯಸಭೆಯಲ್ಲಿ ಸದನದ ನಾಯಕ, ಕೇಂದ್ರ ಸಚಿವ ಪಿಯೂಷ್ ಗೋಯಲ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಡಿಎಂಕೆ ನಾಯಕಿ ಕನ್ನಿಮೋಳಿ, ಆಪ್‌ ಸಂಸದ ಸಂಜಯ ಸಿಂಗ್‌ ಮೊದಲಾದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ