ರಾಜಕಾರಣಿಗಳ ಉದ್ದಟತನ, ಅಧಿಕಾರಿಗಳ ಕಮಿಷನ್ ದಂದೆ: ಎಸ್.ಆರ್.ಹಿರೇಮಠ್ ಆರೋಪ.!
ಚಿತ್ರದುರ್ಗ : ರಾಜಕಾರಣಿಗಳ ಉದ್ದಟತನ, ಅಧಿಕಾರಿಗಳ ಕಮಿಷನ್ ದಂದೆಯಿಂದ ಎಗ್ಗಿಲ್ಲದೆ ನಡೆಯುತ್ತಿರುವ ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ ಗಣಿ ಬಾದಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟದಿಂದ ಆ.16 ರ ಬೆಳಿಗ್ಗೆ 10 ರಿಂದ ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ ನಡೆಯಲಿದೆ ಎಂದು ಜನಾಂದೋಲನಗಳ ಮಹಾ ಮೈತ್ರಿ ಮತ್ತು ಜನ ಸಂಗ್ರಾಮ ಪರಿಷತ್ನ ಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗಾಲಿ ಜನಾರ್ಧನರೆಡ್ಡಿರವರ ಉದ್ದಟತನದಿಂದ ಬಳ್ಳಾರಿ, ವಿಜಯಪುರ, ಚಿತ್ರದುರ್ಗ, ತುಮಕೂರಿನಲ್ಲಿ ಗಣಿ ಮಾಫಿಯ ತಲೆ ಎತ್ತಿದೆ. ಇದರಿಂದ ಬಡವರು ಗೌರವಯುತವಾಗಿ ಜೀವನ ನಡೆಸಲು ಆಗುತ್ತಿಲ್ಲ. ಪರಿಸರ ಹಾಳಾಗಿದೆ. ನಿರಂತರ ಅಕ್ರಮ ಗಣಿಗಾರಿಕೆಯಿಂದ ಪ್ರಕೃತಿ ಪರಿಸರದ ಮೇಲುಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಲ್ಲಿಕೆಯಾಗಿರುವ ವರದಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೆಂಟ್ರಲ್ ಎಂಪವರ್ಮೆಂಟ್ ಕಮಿಟಿಯನ್ನು ನೇಮಿಸಿತು. ಅಕ್ರಮ ಗಣಿಗಾರಿಕೆ ಪರಿಣಾಮ ಅಗಾಧತೆ ಹಾಗೂ ಗಂಭೀರತೆಯನ್ನು ಅರ್ಥಮಾಡಿಕೊಂಡು ಗಣಿ ಬಾಧಿತ ಪ್ರದೇಶದ ಪರಿಸರ ಪುನಶ್ಚೇತನ ಯೋಜನೆ ಅನ್ವಯ ವಿಶೇಷ ಆದ್ಯತೆಯ ನಿಧಿ ಸ್ಥಾಪಿಸುವಂತೆ ಸಿಇಸಿ. ಶಿಫಾರಸ್ಸು ಮಾಡಿತು. 2013 ರಲ್ಲಿ ಸುಪ್ರೀಂಕೋರ್ಟ್ ಇದನ್ನು ಸಮ್ಮತಿಸಿ ತೀರ್ಪು ನೀಡಿತ್ತು ಎಂದು ಹೇಳಿದರು.
ಹೊಸದಾಗಿ ಕುದುರೆಮುಖ, ಭದ್ರಾವತಿ ಉಕ್ಕು ಕಾರ್ಖಾನೆ, ಜಿಂದಾಲ್, ವೇದಾಂತ ಇನ್ನಿತರೆ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಗಣಿಗಾರಿಕೆ ಪರವಾನಗಿ ನೀಡಬಾರದು. ಸಂಡೂರಿನ ದೇವದಾರಿ, ರಾಮಘಡ ಮತ್ತು ತುಮಕೂರಿನ ಸಾರಂಗಪಾಣಿ ಹಾಗು ಇನ್ನಿತರೆ ಕಡೆ ಲಕ್ಷಾಂತರ ಮರಗಳನ್ನು ಕಡಿದು ಎಬಿಸಿ. ವರ್ಗದ 18 ಗಣಿಗಳನ್ನು ಒಟ್ಟುಗೂಡಿಸಿ 3 ಗಣಿ ಬ್ಲಾಕ್ಲ್ಗಳನ್ನಾಗಿ ಮಾಡಿ ವಿತರಿಸುವುದನ್ನು ನಿಲ್ಲಿಸಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಖನಿಜ ಸಂಪನ್ಮೂಲಗಳು ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಗಣಿಗಾರಿಕೆಯನ್ನು ವಾರ್ಷಿಕ 20 ಮಿಲಿಯನ್ ಮೆ.ಟನ್ಗೆ ಮಿತಿಗೊಳಿಸಬೇಕು. ಗಣಿಭಾಧಿತ ಜಿಲ್ಲೆಗಳ ಅಭಿವೃದ್ದಿ ಹಾಗೂ ಜನ ಬದುಕಿನ ಪುನಶ್ಚೇತನಕ್ಕೆ ಗ್ರಾಮ ಸಭೆಗಳನ್ನು ನಡೆಸಿ ಜನರ ಅಹವಾಲುಗಳನ್ನು ಆಲಿಸಿ ವೈಜ್ಞಾನಿಕ ನೀಲಿ ನಕಾಶೆಯನ್ನು ತಯಾರಿಸಬೇಕೆಂದು ಒತ್ತಾಯಿಸಿದರು.
ಎಲೆಕ್ಟ್ರೋಲ್ ಬಾಂಡ್ನಿಂದ ಬಿಜೆಪಿ.ಗೆ ಆರು ಸಾವಿರ ಕೋಟಿ ರೂ.ಗಳು ಬಂದಿದೆ. ಗಾಲಿ ಜನಾರ್ಧನರೆಡ್ಡಿ, ಬಿ.ಎಸ್.ಯಡಿಯೂರಪ್ಪ, ಕರುಣಾಕರರೆಡ್ಡಿ, ಶ್ರೀರಾಮುಲು ಇವರುಗಳು ಅಧಿಕಾರ ಕಳೆದುಕೊಂಡರು. ಮುಂದೆ ಪ್ರಧಾನಿ ಮೋದಿ, ನಿರ್ಮಲ ಸೀತಾರಾಮನ್ ಇವರುಗಳು ಅಧಿಕಾರ ಕಳೆದುಕೊಳ್ಳಲಿದ್ದಾರೆ. ನಾನು ಮತ್ತು ಪ್ರಶಾಂತ್ ಭೂಷಣ್ ಸೇರಿಕೊಂಡು ಅಕ್ರಮ ಗಣಿಗಾರಿಕೆ ನಿಲ್ಲುವತನಕ ಬಿಡಲ್ಲ. ಸಂಸತ್ನಲ್ಲಿ ಶೇ.20 ರಷ್ಟು ಕ್ರಿಮಿನಲ್ಗಳಿದ್ದರು. ಈಗ ಅದು ಶೇ.40 ಕ್ಕೆ ಏರಿದೆ. ಚಿತ್ರದುರ್ಗದಲ್ಲಿ ಸಮಿತಿ ನಿಶ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಬಲಪಡಿಸಲಾಗುವುದೆಂದರು.
ಕೆ.ವಿ.ಭಟ್, ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ಅಭಿರುಚಿ ಗಣೇಶ್, ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.