ಬೆಂಗಳೂರು: ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕರು, ವಿದ್ಯಾರ್ಥಿಗಳನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಜನವರಿ 9ರಂದು ಹಿಂದಿ ಪರೀಕ್ಷೆ ಇತ್ತು. ಆದರೆ ಜನವರಿ 8ರಂದು ನಿರಂಜನ್ ಶೆಟ್ಟಿ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಪದವಿ ಪೂರ್ವ ಇಲಾಖೆಯ ಜಂಟಿ ನಿರ್ದೇಶಕ ರಾಜು ನೀಡಿದ ದೂರಿನ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಸೈಬರ್ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ತನಿಖೆಗೆ ಇಳಿದ ಪೊಲೀಸರು ಹೆಡ್ಮಾಸ್ಟರ್ಗಳು, ಶಿಕ್ಷಕರು, ಇಬ್ಬರು ವಿದ್ಯಾರ್ಥಿಗಳು ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ. ತುಮಕೂರು, ರಾಮನಗರ, ಕಲಬುರಗಿ ಜಿಲ್ಲೆಯ ಹೆಡ್ ಮಾಸ್ಟರ್ ಹಾಗೂ ಶಿಕ್ಷಕರ ಬಂಧನವಾಗಿದೆ. ಈಗ ಪೊಲೀಸರು ಪ್ರಶ್ನೆ ಪತ್ರಿಕೆ ವೈರಲ್ ಮಾಡಿದವರ ವಾಟ್ಸಪ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಖಾತೆಯ ಜೊತೆ ಮೊಬೈಲ್ ಪರಿಶೀಲನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ.
ತುಮಕೂರಿನ ಮುಖ್ಯೋಪಾಧ್ಯಾಯ ಗಿರೀಶ್ ವಿ.ಡಿ, ರಾಮನಗರದ ಸಹ ಶಿಕ್ಷಕ ಅಮ್ಜದ್ ಖಾನ್, ಕಲಬುರಗಿಯ ಸಹ ಶಿಕ್ಷಕಿ, ಫಾಹ್ಮಿದಾ, ಕಲಬುರಗಿಯ ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ, ಕಲಬುರಗಿಯ ಶಿಕ್ಷಕರಾದ ಮೊಹಮ್ಮದ್ ಸಿರಾಜುದ್ದೀನ್ ಮತ್ತು ಫರ್ಜಾನಾ ಬೇಗಂ ಬಂಧಿತರು.