LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್‌ಡಿಪಿಐಗೆ ಮತ ಹಾಕಲು ಹೇಳು

ದಾವಣಗೆರೆ,ಜೂ.01 : ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾ ವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಚಿವರಾಗಿದ್ದ ಜಮೀರ್ ಅಹ್ಮದ್ ಖಾನ್ ಮತ್ತು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಚ್ಚಾಟಿತ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉಪಚುನಾವಣೆಯ ಮತದಾನದ ದಿನವಾದ ಏ.೯ರಂದು ಇಬ್ಬರ ನಡುವೆ ನಡೆದ ಮಾತುಕತೆಯ ಆಡಿಯೊವನ್ನು ‘ಕನ್ನಡ ಕಾಕ್ರೋಚ್’ ಎಂಬ ‘ಎಕ್ಸ್’ ಖಾತೆಯಲ್ಲಿ ಸೋಮವಾರ ನಸುಕಿನ 3 ಕ್ಕೆ ಹಂಚಿ ಕೊಳ್ಳಲಾಗಿದೆ. ಉರ್ದು ಮತ್ತು ಕನ್ನಡದಲ್ಲಿ ನಡೆದ ಈ ಸಂಭಾಷಣೆಯ ಪೂರ್ಣ ಪಠ್ಯ ಕೂಡ ಇದರಲ್ಲಿದೆ.
‘ಮತದಾನ ಹೇಗೆ ನಡೆಯುತ್ತಿದೆ..’ ಎಂಬುದರಿಂದ ಆರಂಭಗೊಳ್ಳುವ ಈ ಆಡಿಯೊದಲ್ಲಿ ಇಬ್ಬರ ನಡುವೆ ೩ ನಿಮಿಷ ೫೦ ಸೆಕೆಂಡ್ ಮಾತುಕತೆ ನಡೆದಿದೆ. ನೂತನ ಸರ್ಕಾರ ರಚನೆಯ ಸಂದರ್ಭದಲ್ಲಿ ಈ ಆಡಿಯೊ ಹೊರಬಂದಿರುವುದರ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಹಲವು ಬೂತ್‌ಗಳಿಗೆ ಭೇಟಿ ನೀಡಿದ್ದೆ. ಎಲ್ಲೆಡೆ ಕುಕ್ಕರ್ (ಎಸ್‌ಡಿಪಿಐ ಗುರುತು) ಚಾಲ್ತಿಯಲ್ಲಿದೆ, ಡೈಮಂಡ್ (ಪಕ್ಷೇತರ ಅಭ್ಯರ್ಥಿಯ ಚಿಹ್ನೆ) ಕಡಿಮೆ ಇದೆ. ಕಾಂಗ್ರೆಸ್‌ನ ಕೆಲವರು ಹಣ ಹಂಚುತ್ತಿದ್ದಾರೆ. ಜನರು ಹಣವನ್ನು ತಿರಸ್ಕರಿಸಿ ಮತ ಹಾಕುವುದು ಗೊತ್ತಿದೆ ಎಂದು ಹೇಳುತ್ತಿದ್ದಾರೆ. ಸಾದಿಕ್ ಸಹೋದ ರನಿಗೆ ರೂ. 1.5 ಲಕ್ಷ ಹಣ ಕೊಟ್ಟಿದ್ದೇನೆ. ಎಸ್‌ಡಿಪಿಐಗೆ ಮತಗಳು ಬರುವಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ ಎಂಬುದಾಗಿ ಸಿರಾಜ್ ಮಾತನಾಡಿರುವುದು ಆಡಿಯೊದಲ್ಲಿದೆ.
ಮತದಾನಕ್ಕೆ ಯಾರನ್ನೂ ಒತ್ತಾಯ ಪೂರ್ವಕವಾಗಿ ಮನೆಯಿಂದ ಕರೆತರಬೇಡ. ನಮ್ಮವರಿಗೆ ಯಾವಾ ಗಲೂ ಕಾಂಗ್ರೆಸ್‌ಗೆ ಮತಹಾಕಿ ರೂಢಿಯಾಗಿದೆ. ಒಂದು ವೇಳೆ ಜನರು ಮನೆಯಿಂದ ಹೊರಬರಲು ಆರಂಭಿಸಿದರೆ ನಮಗೆ ಪ್ರಯೋಜನವಾಗದು. ಮನೆಯಿಂದ ಹೊರಬರುವವರು ಕೂಡ ಎಸ್‌ಡಿಪಿಐ ಅಥವಾ ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಹೇಳು ಎಂಬುದಾಗಿ ಜಮೀರ್ ಅಹ್ಮದ್ ಅವರು ಸಿರಾಜ್ ಅವರಿಗೆ ಸೂಚಿಸಿದ್ದು ಆಡಿಯೊದಲ್ಲಿದೆ.
ಸಾದಿಕ್ ಪೈಲ್ವಾನ್ ದೊಡ್ಡ ನಾಯಕ ಎಂದು ಭಾವಿಸಿದಂತೆ ಕಾಣುತ್ತಿದೆ. ಅವರ ವಾರ್ಡ್‌ನಲ್ಲಿ ಕಾಂಗ್ರೆಸ್ ವೋಟುಗಳು ಕೈತಪ್ಪಬೇಕು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರೊಂದಿಗೆ ಮಾತನಾಡಿದ್ದೇನೆ. ಕಣದಲ್ಲಿದ್ದು ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ಜಮೀರ್ ಹೇಳಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಜಮೀರ್ ವಿರುದ್ಧ ಷಡ್ಯಂತ್ರ: ಸಿರಾಜ್
ನನ್ನೊಂದಿಗೆ ಜಮೀರ್ ಅಹಮ್ಮದ್ ಅವರು ಪಕ್ಷ ವಿರೋಯಾಗಿ ಮಾತನಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೊಗೂ ನನಗೂ ಯಾವುದೇ ಸಂಬಂಧವಿಲ್ಲ. ಇದೊಂದು ತಿರುಚಿದ ಆಡಿಯೊ. ಇದು ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಉಚ್ಚಾಟಿತ ಮುಖಂಡ ಮೊಹಮ್ಮದ್ ಸಿರಾಜ್ ತಿಳಿಸಿದರು.
ಉಪಚುನಾವಣೆಯ ಸಂದರ್ಭದಲ್ಲಿ ನಮ್ಮ ವಿರುದ್ಧವೂ ಷಡ್ಯಂತ್ರ ನಡೆದಿದೆ. ಮುಸ್ಲಿಂ ನಾಯಕರಿಗೆ ಗೂಬೆ ಕೂರಿಸುವ ಪ್ರಯತ್ನ ನಡೆಯಿತು. ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕವೂ ಇದು ಮುಂದುವರಿದಿದೆ. ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಜಮೀರ್ ಅಹಮ್ಮದ್ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಈ ಆಡಿಯೊ ಬಿಡುಗಡೆ ಮಾಡಲಾಗಿದೆ ಎಂದು ಸೋಮವಾರ ಸುದ್ದಿಗಾರರ ಬಳಿ ದೂರಿದರು.
ಹರಿದಾಡುತ್ತಿರುವುದು ನಕಲಿ ಆಡಿಯೊ
ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೊ ನಕಲಿಯಾಗಿದ್ದು, ಎ.ಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ. ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೊ ಮಾಡಿ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಡಿಯೊ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ, ಇದನ್ನು ಯಾರೂ ನಂಬಬಾರದು.
-ಜಮೀರ್ ಅಹಮದ್ ಖಾನ್

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST