ಕಲಬುರಗಿ – ಗೋಹತ್ಯೆ ನಿಷೇಧವಾಗಬೇಕು ಹಾಗೂ ಗೋಆಧಾರಿತ ಕೃಷಿ ಮರುಾರಂಭವಾಗಬೇಕೆಂಬ ಹರಕೆಯೊಂದಿಗೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ 27 ವರ್ಷದ ಯುವಕ ಕೇದಾರನಾಥ ಕುಂಬಾರ ಕೈಗೊಂಡಿದ್ದ ಪಾದಯಾತ್ರೆ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಮಾಡುವುದರೊಂದಿಗೆ ಸಂಪನ್ನಗೊಂಡಿದೆ.
ಜನವರಿ 3ರಂದು 55 ಕೆ.ಜಿ. ತೂಕದ ಜೋಳದ ಚೀಲ ಹೊತ್ತು ಪಾದಯಾತ್ರೆ ಆರಂಭಿಸಿದ ಅವರು ಸುಮಾರು 1450 ಕಿ.ಮೀ ದೂರವನ್ನು ನಡೆದು 40 ದಿನಗಳಲ್ಲಿ ಅಯೋಧ್ಯೆ ತಲುಪಿದರು. ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ಹರಕೆಯಂತೆ ಜೋಳದ ಮೂಟೆಯನ್ನು ದೇವಸ್ಥಾನಕ್ಕೆ ಸಮರ್ಪಿಸಿದರು.
ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟಿ ಸ್ವಾಗತ ಕೋರಿದ್ದು, ಬಳಿಕ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತರಾಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಪಾದಯಾತ್ರೆಯಲ್ಲಿ ವಿವೇಕಾನಂದ ಕುಂಬಾರ, ರೇವಣಸಿದ್ದ ಕೊಪ್ಪ ಹಾಗೂ ನೂರಸಾಬ ನದಾಫ್ ಸಹ ಹೆಜ್ಜೆ ಹಾಕಿದ್ದು ವಿಶೇಷ. ಅಗತ್ಯ ವಸ್ತುಗಳೊಂದಿಗೆ ಅರವಿಂದ ಪುರದಾಳ ದ್ವಿಚಕ್ರ ವಾಹನದಲ್ಲಿ ಸಹಾಯ ಮಾಡಿದರು.
ಬಡ ಕೂಲಿ ಕಾರ್ಮಿಕನಾಗಿರುವ ಕೇದಾರನಾಥ ಕುಂಬಾರ ಇದಕ್ಕೂ ಮೊದಲು ಎರಡು ಬಾರಿ ಶ್ರೀಶೈಲಕ್ಕೆ 61 ಕೆ.ಜಿ. ಮೂಟೆಯೊಂದಿಗೆ ಪಾದಯಾತ್ರೆ ನಡೆಸಿದ್ದು, ಹುಲಿಜಂತಿಗೂ ಎರಡು ಬಾರಿ ತೆರಳಿರುವುದು ಗಮನಾರ್ಹವಾಗಿದೆ.