ಉಡುಪಿ: ಧರ್ಮಸಾಮರಸ್ಯಕ್ಕೆ ಸಾಕ್ಷಿಯಾಗುವ ಅಪರೂಪದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. 35 ವರ್ಷಗಳ ಹಿಂದೆ ಸರ್ಕಾರದಿಂದ ಮಂಜೂರಾಗಿದ್ದ ನಿವೇಶನದ ಹಕ್ಕು ಸಿಗದೇ ಸಂಕಷ್ಟದಲ್ಲಿದ್ದ ಬಡ ಹಿಂದೂ ವಿಧವಾ ಮಹಿಳೆಯ ಪರವಾಗಿ ನೆರೆಮನೆಯ ಮುಸ್ಲಿಂ ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಳಿ ನೆರವು ಯಾಚಿಸಿದ್ದಾರೆ.
ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಹಲವು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದು, ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. 1989ರಲ್ಲಿ ಭೂರಹಿತರಿಗೆ ಸರ್ಕಾರ ವಿತರಿಸಿದ್ದ ವಸತಿ ಯೋಜನೆಯಡಿ ಅವರಿಗೆ 5 ಸೆಂಟ್ಸ್ ಭೂಮಿ ಮಂಜೂರಾಗಿತ್ತು. ಸರ್ಕಾರ ಹಕ್ಕುಪತ್ರವನ್ನೂ ನೀಡಿತ್ತು. ಆದರೆ ಬಳಿಕ ಆ ಜಾಗ ರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿದೆ ಎಂದು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿ, ಜಾಗದ ವಾಸ್ತವ್ಯಕ್ಕೆ ಅವಕಾಶ ನೀಡಿರಲಿಲ್ಲ.
ಹೀಗಾಗಿ ಹಕ್ಕುಪತ್ರ ಇದ್ದರೂ ಮಹಿಳೆಗೆ ತನ್ನದೇ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಡತನದಿಂದ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು.
ಈ ವೇಳೆ ನೆರೆಮನೆಯ ಸಲಾಹುದ್ದೀನ್ ಕುಟುಂಬಸ್ಥರು ಮಹಿಳೆಯ ನೆರವಿಗೆ ಬಂದಿದ್ದಾರೆ. ಜಾಗದ ವಾಸ್ತವ್ಯ ಸಿಗುವಂತೆ ಹಲವು ಸರ್ಕಾರಿ ಕಚೇರಿಗಳಿಗೆ ಕರೆದುಕೊಂಡು ಹೋಗಿ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಆದರೂ ಸಮಸ್ಯೆ ಪರಿಹಾರವಾಗಿರಲಿಲ್ಲ.
ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿಗೆ ಭೇಟಿ ನೀಡಿದ್ದ ವೇಳೆ ಇಬ್ಬರು ಮುಸ್ಲಿಂ ಮಹಿಳೆಯರು ಗಿರಿಜಾ ಪರವಾಗಿ ಸಚಿವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದಾರೆ. “ನಮಗೇನೂ ಬೇಡ, ಆ ಮಹಿಳೆಗೆ ಸಹಾಯ ಮಾಡಿ. ಜಾಗ ಇದ್ದರೂ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಇದು ನಮ್ಮ ಭಾರತದ ಸೌಂದರ್ಯ. ಬಡ ಹಿಂದೂ ಮಹಿಳೆಯ ಪರವಾಗಿ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಇದು ನಿಜವಾದ ಮಾನವೀಯತೆ” ಎಂದು ಹೇಳಿದ್ದಾರೆ.
ಅದೇ ವೇಳೆ ಮಹಿಳೆಯ ಪರವಾಗಿ ಭೂಮಿ ವಾಸ್ತವ್ಯ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.