ಕೆರೆ, ರೈಲ್ವೆ, ವಿಮಾನ ನಿಲ್ದಾಣ, ಶಿಕ್ಷಣ–ನಗರಾಭಿವೃದ್ಧಿ ಯೋಜನೆಗಳು ಕಾಗದಕ್ಕಷ್ಟೇ ಸೀಮಿತವೇ?
ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕೆರೆಗಳ ಅಭಿವೃದ್ಧಿ, ಟ್ರಾಫಿಕ್ ವ್ಯವಸ್ಥೆ ಸುಧಾರಣೆ, ಜಿಲ್ಲಾ ಕಾರ್ಯಾಲಯ ನಿರ್ಮಾಣ, ರೈಲ್ವೆ ಸಂಪರ್ಕ, ವಿಮಾನ ನಿಲ್ದಾಣ, ಶಿವಯೋಗಿ ನಗರವನ್ನು ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಹಾಗೂ ಶಿವಯೋಗಿ ನಗರದಲ್ಲಿ 9ನೇ ಮತ್ತು 10ನೇ ತರಗತಿವರೆಗೆ ಶಾಲೆ ಆರಂಭಿಸುವುದು ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಬೇಡಿಕೆಗಳು ವರ್ಷಗಳಿಂದ ಕೇಳಿಬರುತ್ತಿದ್ದರೂ, ಇನ್ನೂ ಅನುಷ್ಠಾನಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
“ಕೆರೆ ಅಭಿವೃದ್ಧಿ ಮಾಡುತ್ತೇವೆ” ಎಂದು ಹೇಳುವ ಮಾತುಗಳು ಮಾತ್ರ ಕೇಳಿಬರುತ್ತಿದ್ದು, ಅಥಣಿಯ ಕೆರೆಗಳು ಗಲೀಜಾಗಿ ದುಸ್ಥಿತಿಗೆ ತಲುಪಿವೆ. ಸ್ವಚ್ಛತೆ, ಸೌಂದರ್ಯೀಕರಣ, ನೀರಿನ ಸಂಗ್ರಹ ಸಾಮರ್ಥ್ಯ ವೃದ್ಧಿ ಎಂಬುದು ಕೇವಲ ಘೋಷಣೆಯಾಗಿ ಉಳಿದಿದೆ. ಅಭಿವೃದ್ಧಿ ಯಾವಾಗ ಎಂಬುದು ಜನರ ಮುಂದೆ ಪ್ರಶ್ನೆಯಾಗಿ ನಿಂತಿದೆ.
ಅಥಣಿಗೆ ರೈಲ್ವೆ ನಿಲ್ದಾಣ ಎಂಬುದು ಇಲ್ಲಿನ ಸಾರ್ವಜನಿಕರ ಬಹುದಿನಗಳ ಕನಸಾಗಿದೆ. ಆದರೆ ಈ ಕನಸು ಇನ್ನೂ ಸಾಕಾರಗೊಂಡಿಲ್ಲ. ವಿಮಾನ ನಿಲ್ದಾಣ, ಟ್ರಾಫಿಕ್ ಅಭಿವೃದ್ಧಿ, ಜಿಲ್ಲಾ ಮಟ್ಟದ ಕಾರ್ಯಾಲಯ ನಿರ್ಮಾಣದಂತಹ ಯೋಜನೆಗಳೂ ಕಾಗದದಲ್ಲೇ ಸೀಮಿತವಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಶಿವಯೋಗಿ ನಗರವನ್ನು ಪುರಸಭೆ ವ್ಯಾಪ್ತಿಗೆ ಸೇರಿಸುವುದು ಹಾಗೂ ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಒಂಬತ್ತನೇ ಮತ್ತು ಹತ್ತನೇ ತರಗತಿವರೆಗೆ ಶಾಲೆ ಆರಂಭಿಸುವ ಬೇಡಿಕೆಯೂ ವರ್ಷಗಳಿಂದ ಬಾಕಿಯಾಗಿದೆ. ಇದರಿಂದ ವಿದ್ಯಾರ್ಥಿಗಳು ದೂರದ ಊರುಗಳಿಗೆ ತೆರಳಿ ಶಿಕ್ಷಣ ಪಡೆಯಬೇಕಾದ ಸ್ಥಿತಿ ಎದುರಾಗಿದೆ.
ಈ ಎಲ್ಲಾ ವಿಷಯಗಳ ಕುರಿತು ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಎಷ್ಟೇ ವರದಿ ಪ್ರಕಟಿಸಿದರೂ, ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಕಾಣದಂತೆ, ಕುರುಡನಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಚುನಾವಣೆ ಸಮಯದಲ್ಲಿ ಮಾತ್ರ ಅಭಿವೃದ್ಧಿಯ ಭರವಸೆ ನೀಡುವ ರಾಜಕಾರಣಿಗಳು, ಚುನಾವಣೆ ಮುಗಿದ ಬಳಿಕ ಅದನ್ನು ಮರೆತುಬಿಡುತ್ತಾರೆ ಎಂಬುದು ಜನರ ಆಕ್ರೋಶ.
ಅಭಿವೃದ್ಧಿ ಭರವಸೆಗಳ ಮಧ್ಯೆ ಸಾರ್ವಜನಿಕರಿಗೆ ಸಿಗುತ್ತಿರುವುದು ನಿರಾಶೆ ಮಾತ್ರ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಶಾಸಕರು, ಸಚಿವರು, ಮುಖ್ಯಮಂತ್ರಿಗಳು ಇನ್ನಾದರೂ ಅಥಣಿಯ ಸಮಗ್ರ ಅಭಿವೃದ್ಧಿಗೆ ಮುಂದಾಗುವರೇ? ಅಥವಾ ಈ ಎಲ್ಲಾ ಬೇಡಿಕೆಗಳು ಯಥಾಸ್ಥಿತಿಯಲ್ಲೇ ಮುಂದುವರಿಯುವವೆಯೇ? ಎಂಬುದು ಅಥಣಿ ಜನತೆ ಕೇಳುತ್ತಿರುವ ಪ್ರಶ್ನೆಯಾಗಿದೆ.