ಎರಡು ಮಿನಿ ಲಾರಿಗಳು ರಾತ್ರಿ ಹನ್ನೆರಡು ಗಂಟೆಯ ನಂತರ ಅಕ್ರಮವಾಗಿ ಮರಳು ಸಾಗಾಣಿಕೆಯಲ್ಲಿ ತೊಡಗಿಕೊಂಡಿರುವುದು ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ ಗ್ರಾಮದಲ್ಲಿ ಕಂಡು ಬಂದಿದೆ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮದ ಮಧ್ಯೆ ಈ ಎರಡು ಮಿನಿ ಲಾರಿಗಳ ಚಟುವಟಿಕೆ ಅಚ್ಚರಿ ಮೂಡಿಸಿದೆ. ಮರ್ಕಲ್ ಕಡೆಯಿಂದ ಕೊಳ್ಳೂರು ಆಯ್ದು ಶಹಾಪುರ ಕಡೆಗೆ ಸಾಗುವ ಈ ಲಾರಿಗಳು ಪೋಲಿಸ್ ಕಣ್ಣಿಗೆ ಬೀಳುತ್ತಿಲ್ಲವೇ ಎನ್ನುವುದು ಪ್ರಶ್ನೆಯಾಗಿದೆ.
ಜಿಲ್ಲೆಯಲ್ಲಿ ರೌದ್ರಾವತಾರ ತಾಳಿದ ನೈಸರ್ಗಿಕ ಲೂಟಿಗೆ ಜನರಿಂದ ತೀವ್ರ ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿಯಂತ್ರಣ ಹೇರಿತ್ತು. ಕಳೆದ ಕೆಲವು ದಿನಗಳಿಂದ ಕೊಳ್ಳೂರು, ಟೊಣ್ಣೂರು, ಗೌಡೂರು ಗ್ರಾಮಗಳಲ್ಲಿ ಮರಳು ದಂದೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಸದ್ಯ ನಿನ್ನೆ ಜನ ಆಕ್ರೋಶದ ವರದಿಗಾರನಿಗೆ ರಾತ್ರಿ ಎರಡು ಮಿನಿ ಲಾರಿಗಳು ನಿರಂತರ ಮರಳು ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಮಾಹಿತಿ ಪಡೆಯಲು ಸಂಬಂಧಿಸಿದ ಪೋಲಿಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದಾಗ ಫೋನ್ ಸ್ವೀಕರಿಸಿರುವುದಿಲ್ಲ.
ತಾಲ್ಲೂಕಾಡಳಿತದ ಗಮನಕ್ಕಿರದೆ ರಾತ್ರಿಯ ಹೊತ್ತು ಮಿನಿ ಟ್ರಿಪ್ಪರ್ ಮೂಲಕ ಕಳ್ಳ ಸಾಗಾಣಿಕೆ ಮಾಡುವುದು ಸಾಧ್ಯವಿಲ್ಲ. ಇದರ ಹಿಂದೆ ಈ ಭಾಗದ ಸಂಬಂದಿಸಿದ ಅಧಿಕಾರಿಗಳ ಕೈವಾಡವಿರುತ್ತದೆ. ಒಬ್ಬರು ದಂದೆ ಆರಂಭಿಸಿದರೆ ಅದು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ಪರ್ಧೆ ಏರ್ಪಡುತ್ತದೆ. ನಾವೇನು ಕೈಗೆ ಬಳೆಗಳನ್ನು ಹಾಕಿಕೊಂಡಿದ್ದೀವಾ ಎಂಬಂತೆ ಉಳಿದವರೂ ಆರಂಭಿಸುತ್ತಾರೆ. ಆನಂತರ ಮರಳು ಕಳ್ಳ ಸಾಗಾಣಿಕೆ ಎನ್ನುವುದು ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ. ಇದನ್ನು ತಾಲ್ಲೂಕು ಆಡಳಿತ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಸ್ಥಳೀಯರೊಬ್ಬರು.
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಬಿದ್ದಿರುವಾಗ ಕೊಳ್ಳೂರು ಗ್ರಾಮದಲ್ಲಿ ರಾತ್ರಿ ವೇಳೆ ಕಂಡು ಬಂದಿರುವ ಮಿನಿ ಲಾರಿಗಳ ಕಳ್ಳ ಚಟುವಟಿಕೆ ಅಚ್ಚರಿ ಮೂಡಿಸಿದೆ.
ವರದಿ: ಲಕ್ಷ್ಮೀಕಾಂತ ನಾಯಕ