ಸುರಪುರ: ಸುರಪುರ ಪಟ್ಟಣದ ಕುಂಬಾರಪೇಟೆಯಲ್ಲಿರುವ ಶ್ರೀ ಗುರು ಪೀಠ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಿರುಪತಿ ಗುತ್ತೇದಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು ಭಾರತದ ಸಂವಿಧಾನದ ಮಹತ್ವವನ್ನು ವಿವರಿಸಿ, 1950ರ ಜನವರಿ 26ರಂದು ಜಾರಿಗೆ ಬಂದ ಸಂವಿಧಾನವು ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಫಲವಾಗಿದೆ ಎಂದು ತಿಳಿಸಿದರು. ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಅನನ್ಯವಾಗಿದ್ದು, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಆಶಯಗಳನ್ನು ಒಳಗೊಂಡಿರುವುದು ನಮ್ಮ ದೇಶದ ಶಕ್ತಿಯಾಗಿದೆ ಎಂದರು. ವೈವಿಧ್ಯತೆಯಲ್ಲಿ ಏಕತೆ ಎಂಬ ಭಾರತದ ಮೂಲ ತತ್ವವನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಅರಿವು ಮಾಡಿಕೊಡುವುದು ಅಗತ್ಯವಾಗಿದೆ ಎಂದು ಹೇಳಿದರು. ಇಂದಿನ ಮಕ್ಕಳೆ ನಾಳಿನ ಭವಿಷ್ಯದ ನಾಗರಿಕರು ಆಗಿರುವುದರಿಂದ ಮಕ್ಕಳಲ್ಲಿ ದೇಶಾಭಿಮಾನ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಗಣರಾಜ್ಯೋತ್ಸವಕ್ಕೆ ಕಳೆ ತಂದರು.
ಈ ಸಂದರ್ಭದಲ್ಲಿ ಶ್ರೀ ಗುರು ಪೀಠದ ಅಧ್ಯಕ್ಷರಾದ ರುದ್ರಪ್ಪ ದಿನ್ನಿಬಾವಿ, ಸಿದ್ದರಾಮ ಬೇವಿನಮಟ್ಟಿ, ಶಿಕ್ಷಕಿಯರಾದ ಶ್ರೀಮತಿ ಲಕ್ಷ್ಮಿ ದಿನ್ನಿಬಾವಿ, ಕು. ಈಶ್ವರಿ ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಿದ್ದರಾಮ ಅವರು ನೆರವೇರಿಸಿ, ವಂದನಾರ್ಪಣೆಯನ್ನು ಶ್ರೀಮತಿ ಲಕ್ಷ್ಮಿ ದಿನ್ನಿಬಾವಿ ಸಲ್ಲಿಸಿದರು. ಶಾಲೆಯ ಸಿಬ್ಬಂದಿ ವರ್ಗ ಹಾಗೂ ಮುದ್ದಾದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.