9 ನೇ ತರಗತಿಯ ಪಠ್ಯದ ಬಸವಣ್ಣರ ಪಾಠದಲ್ಲಿ ವೀರಶೈವ ಪದ ಸೇರಿಸಬಾರದು: ಪಂಡಿತಾರಾಧ್ಯ ಶ್ರೀ.
ಚಿತ್ರದುರ್ಗ: ಬಸವಣ್ಣನವರು -ಸಾಂಸ್ಕೃತಿಕ ನಾಯಕ ಪಠ್ಯದಲ್ಲಿ ಯಾವ ಕಾರಣಕ್ಕೂ ವೀರಶೈವ ಪದ ಸೇರಿಸಬಾರದು ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.!
ವೀರಶೈವ ಪದ ಸೇರಿಸಿದರೆ ಅದು ಬಸವಣ್ಣನವರ ತತ್ವಗಳಿಗೆ ಮಸಿ ಬಳಿದು ಸತ್ಯಕ್ಕೆ ಅಪಚಾರ ಮಾಡಿದಂತೆ. ಪ್ರಸ್ತುತ ಪಠ್ಯವನ್ನೇ ಯಥಾವತ್ತಾಗಿ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.
ಶುಕ್ರವಾರ ಸಾಣೇಹಲ್ಲಿ ಮುಕ್ತಾಯಗೊಂಡ ವಚನ ಕಮ್ಮಟದಲ್ಲಿ ಬಸವ ಪರಂಪರೆಯ 70ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದು, ಅವರೆಲ್ಲರ ಪರವಾಗಿ ಹಕ್ಕೊತ್ತಾಯ ಮಾಡಲಾಗುತ್ತಿದೆ. ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಪಠ್ಯದಿಂದ ವೀರಶೈವ ಪದ ಬಿಟ್ಟಿರುವುದಕ್ಕೆ ಕೆಲವರು ತಕರಾರು ಎತ್ತಿರುವುದಕ್ಕೆ ಐತಿಹಾಸಿಕ ಆಧಾರವಿಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಬಸವಣ್ಣನವರನ್ನು ಲಿಂಗಾಯಿತ ಧರ್ಮಗುರು ಎಂದು ಐತಿಹಾಸಿಕ ಆಧಾರಗಳು ಖಚಿತವಾಗಿ ಹೇಳುತ್ತಿರುವಾಗ ಅಂತಹ ಸತ್ಯವನ್ನು ಮರೆಮಾಚಿ ಸುಳ್ಳನ್ನು ಪಠ್ಯದಲ್ಲಿ ಸೇರ್ಪಡೆ ಮಾಡುವುದು ಸರಿಯಲ್ಲ. ಶರಣ ಕ್ರಾಂತಿಯ ಇತಿಹಾಸವನ್ನು ಆಳವಾಗಿ ತಿಳಿದಿರುವ ತಾವು ಸುಳ್ಳು ವದಂತಿಗಳಿಗೆ ಮಾನ್ಯತೆ ನೀಡದೆ ಯಾರ ಒತ್ತಾಯಕ್ಕೂ ಮಣಿಯದೇ ಪ್ರಸ್ತುತ ಇರುವ ಪಠ್ಯವನ್ನೇ ಮುಂದುವರೆಸಬೇಕು ಎಂದು ವಚನ ಕಮ್ಮಟದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳೆಲ್ಲರೂ ಆಗ್ರಹಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.