ಶಹಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಶಹಾಪುರ, ಶಿಕ್ಷಣ ಇಲಾಖೆ ಶಹಾಪುರ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ಅವರ ಸಹಯೋಗದಲ್ಲಿ ವಾನದುರ್ಗ ವಲಯದ ಹೊಸಕೇರಾ ಗ್ರಾಮದಲ್ಲಿನ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಇಂದು ಬಾಲಮೇಳವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಕ್ಕಳು ಹಾಗೂ 120ಕ್ಕೂ ಹೆಚ್ಚು ಪೋಷಕರು ಉತ್ಸಾಹದಿಂದ ಭಾಗವಹಿಸಿದರು. ಪೂರ್ವಪ್ರಾಥಮಿಕ ಶಿಕ್ಷಣದ ಮಹತ್ವ, ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಈ ಬಾಲಮೇಳದ ಪ್ರಮುಖ ಉದ್ದೇಶವಾಗಿತ್ತು.
ಮಕ್ಕಳ ಕಲಿಕೆಯಲ್ಲಿ ಆಟ, ಹಾಡು, ಕಥೆ, ಕ್ರಿಯಾತ್ಮಕ ಚಟುವಟಿಕೆಗಳು ಹಾಗೂ ಸೃಜನಶೀಲ ಕಾರ್ಯಗಳ ಮಹತ್ವವನ್ನು ಕಾರ್ಯಕ್ರಮದಲ್ಲಿ ವಿವರಿಸಲಾಯಿತು. ಬಾಲಮೇಳದಲ್ಲಿ ಮಕ್ಕಳು ಹಾಡುಗಳು, ಕ್ರಿಯಾ ಗೀತೆಗಳು, ಕಥೆ ಹೇಳಿಕೆ, ನಾಟಕೀಯ ಪ್ರದರ್ಶನಗಳು ಮತ್ತು ವಿವಿಧ ಸೃಜನಶೀಲ ಆಟಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಉತ್ಸಾಹಭರಿತ ಪ್ರದರ್ಶನಗಳು ಪೋಷಕರು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಕ್ತಾರರು, ಮಕ್ಕಳ ಕಲಿಕೆಯಲ್ಲಿ ಪೋಷಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಬಾಲ್ಯಾವಸ್ಥೆಯಲ್ಲಿ ದೊರಕುವ ಸೂಕ್ತ ಕಲಿಕಾ ಅನುಭವಗಳು ಮಕ್ಕಳ ಭವಿಷ್ಯಕ್ಕೆ ಬಲವಾದ ಅಡಿಪಾಯವಾಗುತ್ತವೆ ಎಂದು ಹೇಳಿದರು.
ಬಾಲಮೇಳ ಕಾರ್ಯಕ್ರಮವು ಸಮುದಾಯದ ಒಗ್ಗಟ್ಟನ್ನು ಬಲಪಡಿಸುವ ಜೊತೆಗೆ ಪೂರ್ವಪ್ರಾಥಮಿಕ ಶಿಕ್ಷಣದ ಮಹತ್ವವನ್ನು ಜನಸಾಮಾನ್ಯರೊಳಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.
ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್ಜಿ ಫೌಂಡೇಶನ್ ಜಿಲ್ಲಾ ಸಂಚಾಲಕ ಶ್ರೀ ಮುತ್ತುರಾಜ್, ನ್ಯಾಯಬೆಲೆ ಅಂಗಡಿ ಮಾಲೀಕ ಶ್ರೀ ಮಲ್ಲಣ್ಣ ಸಾವು, ಶಾಲಾ ಶಿಕ್ಷಕರಾದ ಚಂದಪ್ಪ ಸರ್, ಅಂಬರೀಶ್ ಸರ್, ಸಿದ್ದಮ್ಮ ಟೀಚರ್, ಸಾಯಬಣ್ಣ ಸರ್, ಲಕ್ಷ್ಮಿ ಟೀಚರ್, ಊರಿನ ಹಿರಿಯ ಮುಖಂಡರಾದ ಹಣಮಂತಪ್ಪ ಮೇಸ್ತ್ರಿ ಹಾಗೂ ಬಸವರಾಜ್ ಕೋರಿ, ಎಸ್ಡಿಎಂಸಿ ಅಧ್ಯಕ್ಷ ಪರಶುರಾಮ್, ಉಪಾಧ್ಯಕ್ಷೆ ಶಿವಲಿಂಗಮ್ಮ, ಕಿರಿಯ ಆರೋಗ್ಯ ಸಹಾಯಕಿಯರಾದ ಕುಮಾರಿ ಮತ್ತು ವಿಜಯಲಕ್ಷ್ಮಿ, ಶ್ರೀ ಭೀಮಣ್ಣ, ಬಸವರಾಜ್ ನಂದಹಳ್ಳಿ, ಶಿವಪ್ಪ ಜಾಲಹಳ್ಳಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದಪ್ಪ ಕಿಲಾರಿ, ಅಂಗನವಾಡಿ ಕಾರ್ಯಕರ್ತೆಯರಾದ ತಾಯಮ್ಮ, ಮಂಜುಳಾ, ಹಣಮಂತಿ, ಕಮಲ, ಸುಮಾ, ಅನುಸೂಯ, ಸುಗಂಧ, ಸಹಾಯಕರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.