ಉತ್ತರ ಪ್ರದೇಶ : ಕಳೆದ ಎರಡು ದಿನಗಳಿಂದ ಉತ್ತರ ಪ್ರದೇಶದಲ್ಲಿ ಬೀಸುತ್ತಿರುವ ಭೀಕರ ಗಾಳಿ ಮತ್ತು ಮಳೆಗೆ ರಾಜ್ಯಾದ್ಯಂತ ಬರೋಬ್ಬರಿ 111 ಜನರು ಬಲಿಯಾಗಿದ್ದಾರೆ. ಈ ನೈಸರ್ಗಿಕ ವಿಕೋಪದಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಮೃತರ ಸಂಖ್ಯೆ 111ಕ್ಕೆ ಏರಿಕೆಯಾಗಿದ್ದು, 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲದೆ, 150ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.ಸಂಭಲ್ ಮತ್ತು ಉನ್ನಾವೋ ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಚಂಡಮಾರುತದಂತಹ ಗಾಳಿ ತೀವ್ರ ಹಾನಿ ಉಂಟುಮಾಡಿದೆ.ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಹಲವು ಭಾಗಗಳಲ್ಲಿ ಸಂಚಾರ ಮತ್ತು ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಅನೇಕ ಮನೆಗಳ ಗೋಡೆಗಳು ಮತ್ತು ಮೇಲ್ಛಾವಣಿಗಳು ಕುಸಿದಿವೆ.
ಮುಖ್ಯಮಂತ್ರಿಗಳ ಸೂಚನೆ
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಪ್ರತಿ ಮೂರು ಗಂಟೆಗೊಮ್ಮೆ ಹಾನಿಯ ವರದಿ ನೀಡುವಂತೆ ಮತ್ತು ಬಾಧಿತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನಿಧಿಯನ್ನು ವಿತರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಪವಾಡ ಸದೃಶವಾಗಿ ಬದುಕುಳಿದ ಇ-ರಿಕ್ಷಾಚಾಲಕ!
ಈ ಭೀಕರ ಚಂಡಮಾರುತದ ನಡುವೆ ಬರೇಲಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಬರೇಲಿಯ ಬಾಮಿಯಾನ್ ನಿವಾಸಿ, 50 ವರ್ಷದ ನನ್ಹೆ ಎಂಬ ಇ-ರಿಕ್ಷಾ ಚಾಲಕ ಗಾಳಿಯ ಹೊಡೆತಕ್ಕೆ ಸಿಲುಕಿ ಬರೋಬ್ಬರಿ 50 ಅಡಿ ಎತ್ತರಕ್ಕೆ ಹಾರಿದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಡೆದಿದ್ದೇನು ?
ನಿನ್ನೆ ಅವರು ಮದುವೆ ಸಮಾರಂಭವೊಂದಕ್ಕೆ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಬಿರುಗಾಳಿ ಆರಂಭವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಅವರು ರಸ್ತೆಯ ಪಕ್ಕದಲ್ಲಿದ್ದ ಟಿನ್ ಶೆಡ್ ಅಡಿಯಲ್ಲಿ ನಿಂತಿದ್ದರು. ಶೆಡ್ ಗಾಳಿಗೆ ಹಾರಿಹೋಗದಂತೆ ಅವರು ಅದನ್ನು ಕಟ್ಟಿದ್ದ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆದರೆ ಗಾಳಿಯ ವೇಗ ಎಷ್ಟಿತ್ತೆಂದರೆ, ಇಡೀ ಟಿನ್ ಶೆಡ್ನೊಂದಿಗೆ ನನ್ಹೆ ಅವರೂ ಸಹ 50 ಅಡಿ ಎತ್ತರಕ್ಕೆ ಹಾರಿದ್ದಾರೆ! ಕೆಲವು ಕ್ಷಣಗಳ ನಂತರ ಅವರು ಸಮೀಪದ ಹೊಲವೊಂದರಲ್ಲಿ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಬದುಕುಳಿದಿದ್ದು, ಎರಡು ಕಡೆ ಮೂಳೆ ಮುರಿತದ (Fracture) ಗಾಯಗಳಾಗಿವೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಇದನ್ನು “ದೈವ ಪವಾಡ” ಎಂದು ಕರೆಯುತ್ತಿದ್ದಾರೆ.