ಬೆಂಗಳೂರು: ಕೃಷಿ ಜಮೀನು ಇಲ್ಲದ ಕಾರಣಕ್ಕೆ ಬಂದೂಕು ಪರವಾನಗಿ ನಿರಾಕರಿಸುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಆದೇಶಿಸಿದೆ.
ಕೃಷಿ ಜಮೀನು ಹೊಂದಿಲ್ಲ ಎನ್ನುವ ಕಾರಣಕ್ಕೆ ಬಂದೂಕು ಪರವಾನಿಗೆ ನವೀಕರಿಸಲು ನಿರಾಕರಿಸುವುದು ಕಾನೂನುಬಾಹಿರವಾಗಿದೆ. 1959ರ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ ಪರವಾನಗಿ ನವೀಕರಣಕ್ಕೆ ಆಸ್ತಿಯ ಮಾಲೀಕತ್ವ ಕಡ್ಡಾಯವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬಂದೂಕು ಪರವಾನಗಿ ನವೀಕರಣ ನಿರಾಕರಿಸಿದ್ದ ಮಂಗಳೂರು ಪೊಲೀಸ್ ಆಯುಕ್ತರ ಆದೇಶವನ್ನು ರದ್ದು ಮಾಡಲಾಗಿದ್ದು, ಅರ್ಜಿ ಮರು ಪರಿಶೀಲನೆಗೆ ಹೈಕೋರ್ಟ್ ನಿರ್ದೇಶಿಸಿದೆ. ಮಂಗಳೂರಿನ ಗ್ರೆಗೋರಿ ಎಫ್ ಪೆರಿಸ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರ ಏಕಸದಸ್ಯ ನ್ಯಾಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಕಳೆದ ಮೂರು ದಶಕಗಳಿಂದ 12 ಬೋರ್ SBBL ಶಸ್ತ್ರಾಸ್ತ್ರದ ಪರವಾನಿಗೆಯನ್ನು ಅರ್ಜಿದಾರರು ಹೊಂದಿದ್ದಾರೆ. 2023ರ ಮಾರ್ಚ್ 29 ರಂದು ಮಂಗಳೂರು ಪೊಲೀಸ್ ಆಯುಕ್ತರು ಅರ್ಜಿದಾರರ ಬಳಿ ಕೃಷಿ ಜಮೀನು ಇಲ್ಲ ಎನ್ನುವ ಕಾರಣ ನೀಡಿ ಪರವಾನಿಗೆ ನವೀಕರಿಸಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿದ ನ್ಯಾಯಪೀಠ ಶಸ್ತ್ರಾಸ್ತ್ರ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿ ಸಾಕಷ್ಟು ಆಸ್ತಿಯನ್ನು ಹೊಂದಿಲ್ಲ ಎನ್ನುವ ಕಾರಣಕ್ಕೆ ಪರವಾನಗಿ ನಿರಾಕರಿಸುವಂತಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.
ಕಾಯ್ದೆಯಲ್ಲಿ ಇಲ್ಲದ ಹೊಸ ಷರತ್ತುಗಳನ್ನು ಅಧಿಕಾರಿಗಳು ಹೇರುವಂತಿಲ್ಲ ಮತ್ತು ಪರವಾನಿಗೆ ನವೀಕರಣದ ಸಂದರ್ಭದಲ್ಲಿ ನಿಯಮಗಳು ಅನ್ವಯವಾಗುತ್ತವೆ ಎಂದು ಹೇಳಿದೆ.
30 ವರ್ಷಗಳ ಸುದೀರ್ಘ ಅವಧಿಗೆ ಅರ್ಜಿದಾರರು ಪರವಾನಿಗೆ ಹೊಂದಿದ್ದರೂ ಶಸ್ತ್ರಾಸ್ತ್ರ ದುರ್ಬಳಕೆ ಅಥವಾ ಯಾವುದೇ ಬೆದರಿಕೆ ಪ್ರಕರಣ ಕಂಡುಬಂದಿಲ್ಲ. ಹೀಗಿದ್ದರೂ ಅರ್ಜಿದಾರರ ಬಳಿ ಕೃಷಿ ಜಮೀನು ಇಲ್ಲ ಎನ್ನುವ ಕಾರಣಕ್ಕೆ ಪರವಾನಗಿ ನವೀಕರಿಸುವುದು ನವೀಕರಿಸಲು ನಿರಾಕರಿಸಿರುವುದು ಸರಿಯಲ್ಲವೆಂದು ನ್ಯಾಯಪೀಠ ಹೇಳಿದೆ. ಪೊಲೀಸ್ ಆಯುಕ್ತರ ಆದೇಶ ರದ್ದುಪಡಿಸಿ ಕೃಷಿ ಜಮೀನಿನ ದಾಖಲೆಗಳಿಗೆ ಒತ್ತಾಯಿಸದೆ ಪರವಾನಿಗೆ ನವೀಕರಣ ಅರ್ಜಿ ಮರುಪರಿಶೀಲಿಸುವಂತೆ ನಿರ್ದೇಶನ ನೀಡಲಾಗಿದೆ.