ರಾಮನಗರ: ಕೆ.ಐ.ಎ.ಡಿ.ಬಿ (KIADB) ಯಿಂದ ಜಮೀನು ಸ್ವಾಧೀನಪಡಿಸಿಕೊಂಡು 40 ವರ್ಷಗಳು ಕಳೆದರೂ ಪರಿಹಾರ ನೀಡಿಲ್ಲವೆಂದು ಆರೋಪಿಸಿ ಸಲ್ಲಿಸಲಾಗಿದ್ದ ಪ್ರಕರಣದಲ್ಲಿ, ಕೋರ್ಟ್ ಆದೇಶದಂತೆ ಆಗಸ್ಟ್ 31 ರ ಒಳಗಾಗಿ ಭೂಪರಿಹಾರದ ಮೊತ್ತವನ್ನು ನ್ಯಾಯಾಲಯಕ್ಕೆ ಠೇವಣಿ ಮಾಡುವುದಾಗಿ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶಕ್ಕಾಗಿ ರೈತರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತರು ರಾಮನಗರದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ (LAC 33/91) ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ 2020 ರಲ್ಲಿ ರೈತರ ಪರವಾಗಿ ಆದೇಶ (Decree) ಬಂದಿತ್ತು.
ಇದನ್ನು ಪ್ರಶ್ನಿಸಿ ಕೆ.ಐ.ಎ.ಡಿ.ಬಿ ಸಲ್ಲಿಸಿದ್ದ ಮೇಲ್ಮನವಿಯನ್ನು 2024 ರಲ್ಲಿ ವಜಾಗೊಳಿಸಲಾಗಿತ್ತು. ಆ ನಂತರ ಕೆ.ಐ.ಎ.ಡಿ.ಬಿ ಮೇಲ್ಮನವಿ ಸಲ್ಲಿಸದೆ ಹಾಗೂ ಜಮೀನು ಕಳೆದುಕೊಂಡ ರೈತರಿಗೆ ಅಂದಾಜು 10 ಕೋಟಿ 65 ಲಕ್ಷದ 50 ಸಾವಿರ ರೂಪಾಯಿ ಪರಿಹಾರದ ಮೊತ್ತವನ್ನು ಪಾವತಿಸದೆ ವಿಳಂಬ ಧೋರಣೆ ಅನುಸರಿಸಿತ್ತು.
ಜಪ್ತಿ ಆದೇಶ ಹಾಗೂ ಜಂಟಿ ಒಪ್ಪಂದ:
ಪರಿಹಾರ ನೀಡದ ಕಾರಣ ರೈತರು ಜಾರಿ ಅರ್ಜಿ (Execution Case) ಸಲ್ಲಿಸಿದ್ದರು. ಕೋರ್ಟ್ ನೀಡಿದ್ದ ಸೂಚನೆಗಳನ್ನು ಅಲಕ್ಷಿಸಿದ್ದರಿಂದ ಕೆಳ ನ್ಯಾಯಾಲಯವು ಕೆ.ಐ.ಎ.ಡಿ.ಬಿ ಕಚೇರಿಯ ಚರ ಆಸ್ತಿಗಳ ಜಪ್ತಿಗೆ (Attachment Warrant) ಆದೇಶ ಹೊರಡಿಸಿತ್ತು.
ಕೋರ್ಟ್ ಅಧಿಕಾರಿಗಳು ಹಾಗೂ ರೈತರ ಪರ ವಕೀಲರು ಜಪ್ತಿ ಪ್ರಕ್ರಿಯೆಗೆ ಆಗಮಿಸಿದಾಗ, ಕೆ.ಐ.ಎ.ಡಿ.ಬಿ ಅಧಿಕಾರಿಗಳು ಆಗಸ್ಟ್ 31 ರ ಒಳಗಾಗಿ ಪರಿಹಾರದ ಹಣವನ್ನು ಪಾವತಿಸುವುದಾಗಿ ಮುಚ್ಚಳಿಕೆ (Undertaking) ನೀಡಿದ್ದಾರೆ. ಈ ಮನವಿಗೆ ಕೋರ್ಟ್ ಅಧಿಕಾರಿಗಳು, ರೈತರು ಹಾಗೂ ವಕೀಲರು ಸಮ್ಮತಿಸಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ:
"ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳಲ್ಲಿ ಅಂತಿಮಗೊಂಡ ಪ್ರಕರಣಗಳಿಗೆ ಕೆ.ಐ.ಎ.ಡಿ.ಬಿ ವತಿಯಿಂದ ನಿಯಮಿತವಾಗಿ ಪರಿಹಾರ ನೀಡಲಾಗುತ್ತಿದೆ. ಈ ಪ್ರಕರಣದಲ್ಲೂ ಸಹ ಈ ತಿಂಗಳ ಕೊನೆಯೊಳಗಾಗಿ ನ್ಯಾಯಾಲಯದ ಆದೇಶದಂತೆ ಭೂಪರಿಹಾರದ ಮೊತ್ತವನ್ನು ಜಮಾ ಮಾಡಲಾಗುವುದು," ಎಂದು ಕೆ.ಐ.ಎ.ಡಿ.ಬಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಈ ವೇಳೆ ಹೈ ಕೋರ್ಟ್ ವಕೀಲರಾದ ಎಂ ಶಿವ ಪ್ರಕಾಶ್, ದೇವೇಂದ್ರ,ರಾಮನಗರ ಕೋರ್ಟ್ ನ ಅಮಿನ್,ಹಾಗೂ ರೈತರುಗಳಾದ ವಿಜಯ್ ಕುಮಾರ್ ,ರಾಜೇಶ್ ,ರವಿ ಕುಮಾರ್ , ಮೋಹನ್ ರೆಡ್ಡಿ , ಮತ್ತಿತರರು ಉಪಸ್ಥಿತರಿದ್ದರು.