ಸುರಪುರ: ಬಡವರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ರಾತ್ರೋರಾತ್ರಿ ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿರುವ ಪ್ರಕರಣವನ್ನು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಸಮಿತಿ ಕಾರ್ಯಾಚರಣೆ ನಡೆಸಿ ಬಹಿರಂಗಪಡಿಸಿರುವ ಘಟನೆ ಸುರಪುರ ತಾಲ್ಲೂಕಿನಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದ್ದು, ಪಡಿತರ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ.
ಸುರಪುರ ನಗರಸಭೆ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಸಂಖ್ಯೆ 123ರ ಕಬಡಗೇರಾ ಪ್ರದೇಶದಲ್ಲಿ ಇರುವ ನ್ಯಾಯಬೆಲೆ ಅಂಗಡಿಯಲ್ಲಿ ಈ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಮಾರ್ಚ್ 31ರ ತಡರಾತ್ರಿ ಸರಕು ಸಾಗಾಣಿಕೆ ವಾಹನವು ಅಂಗಡಿ ಮುಂದೆ ನಿಲ್ಲಿಸಿ ಅಕ್ಕಿ ಚೀಲಗಳನ್ನು ವಾಹನಕ್ಕೆ ಲೋಡ್ ಮಾಡಲಾಗುತ್ತಿತ್ತು. ಈ ಸಂಶಯಾಸ್ಪದ ಚಟುವಟಿಕೆಯನ್ನು ಗಮನಿಸಿದ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಯಲ್ಲಪ್ಪ ನಾಯಕ ಅವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಜಿಯೋ ಟ್ಯಾಗ್ ಸಹಿತವಾಗಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಂಘಟನೆಯ ಸದಸ್ಯರು ಪಡಿತರ ವಿತರಕರನ್ನು ಪ್ರಶ್ನಿಸಿದಾಗ ಸಮಂಜಸವಾದ ಉತ್ತರ ದೊರಕಲಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಅನುಮಾನ ಮತ್ತಷ್ಟು ಗಟ್ಟಿಯಾಗಿದ್ದು, ಅಕ್ರಮ ಪಡಿತರ ಸಾಗಾಣಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಬಲ ಬಂದಿದೆ.
ಸಂಘಟನೆಯ ಆರೋಪದ ಪ್ರಕಾರ, ನ್ಯಾಯಬೆಲೆ ಅಂಗಡಿ ಮಾಲೀಕರು ಬಡವರಿಗೆ ನೀಡಬೇಕಾದ ಪಡಿತರದಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಸುತ್ತಿದ್ದರು. ಪ್ರತಿ ವಿತರಣೆಯಲ್ಲೂ ಸುಮಾರು 2 ಕೆಜಿ ಅಕ್ಕಿಯನ್ನು ಕಡಿತ ಮಾಡಲಾಗುತ್ತಿದ್ದು, ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಇದರಿಂದ ಬಡ ಜನರಿಗೆ ಸಿಗಬೇಕಾದ ಅಕ್ಕಿ ಪ್ರಮಾಣ ಕಡಿಮೆಯಾಗುತ್ತಿದ್ದು, ಅವರ ಹಕ್ಕು ಹರಣವಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಇನ್ನೊಂದು ಗಂಭೀರ ಆರೋಪವೆಂದರೆ, ನಿರಕ್ಷರ ಹಾಗೂ ಅಸಹಾಯಕರಾದ ಜನರಿಗೆ “ನಿಮ್ಮ ಕಾರ್ಡಿಗೆ ಪಡಿತರ ಬಂದಿಲ್ಲ” ಎಂದು ತಪ್ಪು ಮಾಹಿತಿ ನೀಡಿ ವಂಚಿಸಲಾಗುತ್ತಿದೆ ಎಂಬುದು. ಈ ರೀತಿಯ ಮೋಸದಿಂದ ಅನೇಕರು ತಮ್ಮ ಹಕ್ಕಿನ ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಸದಸ್ಯರು ತಹಶೀಲ್ದಾರರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಜೊತೆಗೆ, ಈ ನ್ಯಾಯಬೆಲೆ ಅಂಗಡಿಗೆ ಎಸ್ಸಿ/ಎಸ್ಟಿ ವಿವಿಧ್ಯೋಶ ಸಂಘದ ಹೆಸರಿನಲ್ಲಿ ನೀಡಿರುವ ಪರವಾನಗಿಯನ್ನು ತಕ್ಷಣ ರದ್ದುಪಡಿಸಿ, ಅರ್ಹ ಮತ್ತು ಪ್ರಾಮಾಣಿಕ ವ್ಯಕ್ತಿಗಳಿಗೆ ಹೊಸ ಪರವಾನಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಕ್ರಮ ಪಡಿತರ ಕಳ್ಳ ಸಾಗಾಣಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಕಟ್ಟು ನಿಟ್ಟಿನ ಮೇಲ್ವಿಚಾರಣೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಚಾಲಕರ ಅಧ್ಯಕ್ಷ ವೆಂಕಟೇಶ ನಾಯಕ ಬಿಚ್ಚುಗತ್ತಿ, ಶರಣಬಸವ (ಲಕ್ಷ್ಮೀಪುರ), ಹಣಮಂತ ನಾಯಕ ಮಾಲಿಪಾಟೀಲ, ಬಸ್ಸು ಭಜಂತ್ರಿ, ನಾಡಗೌಡ ಅಮ್ಮಾಪೂರು ಸೇರಿದಂತೆ ಹಲವರು ಭಾಗವಹಿಸಿದ್ದರು. ಸಂಘಟನೆಯ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ಕ್ರಮ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.