ಕಲ್ಲು ಎತ್ತಿ ಹಾಕಿ ಮಲಗಿದ್ದ ತಾಯಿಯನ್ನು ಬರ್ಬರವಾಗಿ ಕೊಂದ ಮಗ
ರಾಯಚೂರು:ಆಸ್ತಿ ಮೇಲಿನ ವ್ಯಾಮೋಹ ಮಾನವೀಯತೆಯನ್ನು ಮರೆಸುವ ಮಟ್ಟಕ್ಕೆ ತಲುಪಿದ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಜಕ್ಕೇರುಮಡಗು ತಾಂಡಾದಲ್ಲಿ ನಡೆದಿದೆ. ಪಿತ್ರಾರ್ಜಿತ ಆಸ್ತಿಯ ಪಾಲಿನ ವಿಚಾರದಲ್ಲಿ ಉಂಟಾದ ಜಗಳದಿಂದ ಮದ್ಯದ ನಶೆಯಲ್ಲಿದ್ದ ಮಗನೊಬ್ಬ ಮಲಗಿದ್ದ ತನ್ನ ಹೆತ್ತ ತಾಯಿಯ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಚಂದವ್ವ (55) ಎಂದು ಗುರುತಿಸಲಾಗಿದ್ದು, ಈ ಕೃತ್ಯವನ್ನು ಆಕೆಯ ಪುತ್ರ ಕುಮಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಂದವ್ವ ಅವರಿಗೆ ಪಿತ್ರಾರ್ಜಿತವಾಗಿ ದೊರೆತ ಮೂರು ಎಕರೆ ಭೂಮಿಯನ್ನು ಪಾಲು ಮಾಡಬೇಕು ಎಂದು ಕುಮಾರ ನಿರಂತರವಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಅಣ್ಣ-ತಮ್ಮಂದಿರಿಗೆ ಪಾಲು ನೀಡಿ, ತನ್ನ ಪಾಲನ್ನು ಕೂಡಲೇ ನೀಡಬೇಕೆಂದು ಕುಮಾರ ತಾಯಿಯನ್ನು ಒತ್ತಾಯಿಸಿದ್ದಾನೆ.
ಆದರೆ, ನಾನು ಬದುಕಿರುವವರೆಗೆ ಆಸ್ತಿ ಪಾಲು ಮಾಡುವುದಿಲ್ಲ ಎಂದು ಚಂದವ್ವ ಸ್ಪಷ್ಟವಾಗಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಕುಮಾರ ಮದ್ಯ ಸೇವಿಸಿ ನಶೆಯಲ್ಲಿದ್ದ ವೇಳೆ, ರಾತ್ರಿ ಮಲಗಿದ್ದ ತಾಯಿಯ ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆಸ್ತಿ ವ್ಯಾಮೋಹ ಮಾನವ ಸಂಬಂಧಗಳನ್ನು ಹೇಗೆ ನಾಶಪಡಿಸುತ್ತಿದೆ ಎಂಬುದಕ್ಕೆ ಈ ಘಟನೆ ಭೀಕರ ಉದಾಹರಣೆಯಾಗಿದೆ.