ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಆಹಾರ ಇಲಾಖೆಯ ಅಧಿಕಾರಿಗಳು ಬುಧವಾರ ಭೇದಿಸಿ, 120.10 ಕ್ವಿಂಟಲ್ ಅಕ್ಕಿ ಹಾಗೂ ಕಂಟೇನರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಕುಷ್ಟಗಿ ರಸ್ತೆಯ ಕುರಿ ಸಂತೆ ಆವರಣದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪಡಿತರ ಅಕ್ಕಿಯನ್ನು ಲಾರಿಯಿಂದ ಕಂಟೇನರ್ ಲಾರಿಗೆ ಅನಧಿಕೃತವಾಗಿ ಲೋಡ್ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದರು. ಆಹಾರ ಇಲಾಖೆಯ ಶಿರಸ್ತೇದಾರ್ ಆನಂದ ಮೋಹನ್, ನಿರೀಕ್ಷಕ ಹನುಮೇಶ, ತಹಶೀಲ್ದಾರ್ ಕಚೇರಿಯ ಗ್ರಾಮ ಆಡಳಿತಾಧಿಕಾರಿ ಮಹ್ಮದ್ ಯೂನೂಸ್, ಸಿಬ್ಬಂದಿ ಬಾಷಾ ಹಾಗೂ ಪೊಲೀಸ್ ಕಾನ್ಸ್ಟೆಬಲ್ ಸಣ್ಣಬಸಣ್ಣ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ಪತ್ತೆಯಾಯಿತು.
ಕಂಟೇನರ್ ಲಾರಿ ಚಾಲಕ ಮಿರ್ಜಾ ಖಾಸಿಮುಲ್ಲಾ ಹಕ್ ಬೇಗ್ ಅವರನ್ನು ವಿಚಾರಿಸಿದಾಗ ಅಕ್ಕಿ ಸಾಗಣೆಗೆ ಸಂಬಂಧಿಸಿದ ಯಾವುದೇ ದಾಖಲೆ ಅಥವಾ ರಶೀದಿ ಇಲ್ಲವೆಂದು ತಿಳಿದುಬಂದಿದೆ. ಸಿಂಧನೂರಿನ ಇಂದಿರಾನಗರದ ಇಮಾಮ್ಸಾಬ್ ಅವರ ಲಾರಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿ ತಂದು ಕಂಟೇನರ್ನಲ್ಲಿ ಲೋಡ್ ಮಾಡಿ, ಪೋತ್ನಾಳ ಪಟ್ಟಣದ ಗುರುರಾಜ ಶೆಟ್ಟಿ ಅವರಿಗೆ ಒಪ್ಪಿಸಲು ಸೂಚಿಸಿದ್ದಾಗಿ ಚಾಲಕ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.
ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅಕ್ರಮ ಜಾಲ ಕಾರ್ಯನಿರ್ವಹಿಸುತ್ತಿರುವುದು ಈ ದಾಳಿಯಿಂದ ಸ್ಪಷ್ಟವಾಗಿದೆ. ಸರ್ಕಾರದ ಬಡಜನರಿಗಾಗಿ ನೀಡುವ ಅಕ್ಕಿಯನ್ನು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಚಾಲಕ ಸೇರಿ ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ. ಆಹಾರ ಇಲಾಖೆ ಇಂತಹ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.