ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ್ ವಿರುದ್ಧ ಸ್ವಪಕ್ಷೀಯರಿಂದಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್, ಶಿವರಾಜ್ ಕೊತ್ತದೊಡ್ಡಿ ಸೇರಿದಂತೆ ಹಲವಾರು ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿ ಶಾಸಕಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿ ನಡೆಯುತ್ತಿದ್ದು, ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
https://youtu.be/xmtd7LmxKhk?si=XZZSfqkuyoBrv9j5
ಶಾಸಕಿಯನ್ನು ಭೇಟಿಯಾಗಲು ಹೋಗಿದರೆ ಅವರ ಪುತ್ರ ಸಂತೋಷ್ ಅವರನ್ನು ಭೇಟಿ ಮಾಡಲು ಹೇಳುತ್ತಾರೆ. ಅವರನ್ನು ಭೇಟಿ ಮಾಡಿದರೆ ಮತ್ತೆ ಶಾಸಕರನ್ನು ಭೇಟಿಯಾಗುವಂತೆ ಸೂಚಿಸಲಾಗುತ್ತದೆ. ಬಳಿಕ ಶಾಸಕರ ತಮ್ಮನನ್ನು ಸಂಪರ್ಕಿಸಲು ಹೇಳಲಾಗುತ್ತದೆ. ಹೀಗೆ ಒಂದೇ ಕುಟುಂಬದ ಏಳು-ಎಂಟು ಮಂದಿ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದರಿಂದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶವೇ ಸಿಗುತ್ತಿಲ್ಲ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
“ನಾಲ್ಕೈದು ಮಂದಿ ದುಷ್ಟ ರಾಜಕಾರಣಿಗಳು ಸೇರಿ ಒಬ್ಬ ಕರೆಮ್ಮ ಸೃಷ್ಟಿಯಾಗುತ್ತಾರೆ” ಎಂದು ಕಿಡಿಕಾರಿದ ಮುಖಂಡರು, ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿ ಕೂಡ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದರು. ವಿಶೇಷವಾಗಿ KKRDB ಅನುದಾನದಲ್ಲಿ ಕಮಿಷನ್ ಆರೋಪ ಮಾಡಿದ್ದು, ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಡೆಯುತ್ತಿವೆ ಹಾಗೂ ದುರ್ಬಳಕೆ ಆಗುತ್ತಿದೆ ಎಂದು ಹೇಳಿದರು.
ವರ್ಷಗಳಿಂದ ಪಕ್ಷಕ್ಕೆ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಉಂಟಾಗುತ್ತಿದೆ ಎಂದು ಮುಖಂಡರು ಎಚ್ಚರಿಸಿದರು. ಪಕ್ಷದ ಮೂಲಬಲವಾದ ಕಾರ್ಯಕರ್ತರನ್ನು ಗೌರವಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷದ ಬಲವರ್ಧನೆಗಾಗಿ ಕುಟುಂಬ ರಾಜಕಾರಣವನ್ನು ನಿಲ್ಲಿಸಿ, ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಪಕ್ಷದ ಉನ್ನತ ನಾಯಕರಿಗೂ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.