ಬೆಂಗಳೂರು: ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್ ಬಿಐ ಕಚೇರಿಯಲ್ಲಿ ವ್ಯಕ್ತಿಯೊಬ್ಬ ಚಲಾವಣೆ ರದ್ದಾಗಿರುವ 2,000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಬದಲಾಯಿಸಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ನಾಗಶೆಟ್ಟಿಹಳ್ಳಿಯ ನಿವಾಸಿ 52 ವರ್ಷದ ಎಸ್.ವಿ. ರಮೇಶ್ ಬಂಧಿತ ಆರೋಪಿ. ಹಲಸೂರು ಗೇಟ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. 2 ಸಾವಿರ ಮುಖಬೆಲೆಯ 300ಕ್ಕೂ ಹೆಚ್ಚು ನೋಟುಗಳನ್ನು ತಂದಿದ್ದ ವ್ಯಕ್ತಿ, 7 ಲಕ್ಷ ರೂ.ಗೂ ಹೆಚ್ಚು ಮೊತ್ತವನ್ನು ಜಮಾ ಮಾಡುವಂತೆ ಕೇಳಿದ್ದ ಎನ್ನಲಾಗಿದೆ.
ಏಪ್ರಿಲ್ 9ರಂದುಆರ್ಬಿಐ ಕಚೇರಿಗೆ ಭೇಟಿ ನೀಡಿದ್ದ ಆರೋಪಿ, ತನ್ನ ಬಳಿಯಿದ್ದ 375 ನೋಟುಗಳನ್ನು ನೀಡಿ ಒಟ್ಟು 7.5 ಲಕ್ಷ ರೂಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಿದ್ದ. ಆದರೆ, ಅಧಿಕಾರಿಗಳು ನೋಟುಗಳನ್ನು ತಪಾಸಣೆ ನಡೆಸಿದಾಗ ಅವುಗಳು ನಕಲಿ ಎಂದು ತಿಳಿದುಬಂದಿದೆ. ಆರ್ಬಿಐ ಸಹಾಯಕ ಜನರಲ್ ಮ್ಯಾನೇಜರ್ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗೆ ಈ ನಕಲಿ ನೋಟುಗಳನ್ನು ಪೂರೈಸಿದವರು ಯಾರು? ಇಷ್ಟೊಂದು ನೋಟುಗಳು ಮುದ್ರಿಸಲಾಗಿದ್ದಾದರೂ ಎಲ್ಲಿ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
2023ರಲ್ಲಿ ಆರ್ಬಿಐ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದರೂ, ಸಾರ್ವಜನಿಕರಿಗೆ ಆರ್ಬಿಐ ಕಚೇರಿಗಳಲ್ಲಿ ಇವುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಬ್ಬ ವ್ಯಕ್ತಿ ಒಮ್ಮೆ ಗರಿಷ್ಠ 20,000 ರೂ. ಮೌಲ್ಯದ ನೋಟುಗಳನ್ನು ಮಾತ್ರ ಬದಲಾಯಿಸಬಹುದು. ಆದರೆ ರಮೇಶ್ 7.5 ಲಕ್ಷ ರೂಗಷ್ಟು ಮೊತ್ತದ ನೋಟು ಬದಲಾಯಿಸಲು ತಂದಿದ್ದು ಅನುಮಾನಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.

