ಬೆಂಗಳೂರು: ವಿಧಾನಪರಿಷತ್ತಿನ ನೂತನ ಸಭಾಪತಿ ಸ್ಥಾನಕ್ಕೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಈ ಹುದ್ದೆಗೆ ಬಿಜೆಪಿಯ ಮೇಲ್ಮನೆ ಸದಸ್ಯ ಪಿ.ಹೆಚ್. ಪೂಜಾರ್ ಅವರು ಗುರುವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮೈತ್ರಿಕೂಟದ ಪ್ರಮುಖ ನಾಯಕರ ನಿಯೋಗದೊಂದಿಗೆ ಆಗಮಿಸಿದ ಪೂಜಾರ್, ಪರಿಷತ್ ಕಾರ್ಯದರ್ಶಿಯವರಿಗೆ ತಮ್ಮ ನಾಮಪತ್ರ ಹಸ್ತಾಂತರಿಸಿದರು. ಆಡಳಿತರೂಢ ಕಾಂಗ್ರೆಸ್ ಪಕ್ಷದ ಪರವಾಗಿ ಸಲೀಂ ಅಹಮದ್ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಸಭಾಪತಿ ಪೀಠಕ್ಕಾಗಿ ಸ್ಪರ್ಧೆ ಏರ್ಪಡುವುದು ಈಗ ನಿಶ್ಚಿತವಾಗಿದೆ.
ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪಿ.ಹೆಚ್. ಪೂಜಾರ್, ಆಡಳಿತ ಪಕ್ಷದ ಸಂವಿಧಾನಬಾಹಿರ ನಡೆಯಿಂದಾಗಿ ಇಂದು ಈ ಹುದ್ದೆಗೆ ಚುನಾವಣೆ ನಡೆಸುವ ವಾತಾವರಣ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು. "ಸಂಖ್ಯಾಬಲದ ಲೆಕ್ಕಾಚಾರ ಏನೇ ಇರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧಿಸುವುದು ನಮ್ಮ ಪಕ್ಷದ ಸ್ಪಷ್ಟ ನಿಲುವಾಗಿದೆ. ನಾಯಕರ ಸಹಮತದ ಮೇರೆಗೆ ನಾನು ನಾಮಪತ್ರ ಸಲ್ಲಿಸಿದ್ದೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ, ಆದರೆ ಸಿದ್ಧಾಂತದ ಹೋರಾಟ ಹಾಗೂ ಸ್ಪರ್ಧೆ ನಮಗೆ ಮುಖ್ಯ" ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಹೊರಟ್ಟಿ ಅವರ ರಾಜೀನಾಮೆಯ ಹಠಾತ್ ಬೆಳವಣಿಗೆಯ ಕುರಿತು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಇನ್ನೊಂದೆಡೆ, ಕಾಂಗ್ರೆಸ್ ಸರ್ಕಾರವು ತಮ್ಮಿಂದ ಬಲವಂತವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಪಡೆದುಕೊಂಡಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು, ಗುರುವಾರ ಎಂದಿನಂತೆ ವಿಪಕ್ಷ ಸದಸ್ಯರೊಂದಿಗೆ ಸದನದ ಕಲಾಪದಲ್ಲಿ ಭಾಗವಹಿಸಿದರು. ಅವರ ಜೇಷ್ಠತೆ ಹಾಗೂ ಸುದೀರ್ಘ ಅನುಭವವನ್ನು ಪರಿಗಣಿಸಿ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಪಕ್ಕದಲ್ಲೇ ಹೊರಟ್ಟಿ ಅವರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಸಭಾಪತಿ ಚುನಾವಣೆಯ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದ್ದು, ಪರಿಷತ್ತಿನ ಮುಂದಿನ ನಡೆ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.